ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ನವದೆಹಲಿ, ಡಿಸೆಂಬರ್ 28 : ತ್ರಿವಳಿ ತಲಾಖ್ ಕ್ರಿಮಿನಲ್ ಅಪರಾಧ ಎಂಬ ಅಂಶ ಉಳ್ಳ ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ಮಾಡಲಾಗಿದೆ. ಮೂರು ಸಲ ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷದ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ.
ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?
ಈಗ ಲೋಕಸಭೆಯಲ್ಲಿ ಅಂಗೀಕಾರ ಆಗಿರುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಬೇಕಿದೆ. ಆದರೆ ಅದು ಸುಲಭವಿಲ್ಲ. ಗುರುವಾರ ಬೆಳಗ್ಗೆ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಎಲ್ಲ ಪಕ್ಷಗಳು ಒಮ್ಮತದಿಂದ ತ್ರಿವಳಿ ತಲಾಖ್ ಮಸೂದೆಯನ್ನು ಒಪ್ಪುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಇದು ಭಾರತದ ಪಾಲಿಗೆ ಐತಿಹಾಸಿಕ ದಿನ. ಮಹಿಳಾ ಸಬಲೀಕರಣ, ಗೌರವ ಹಾಗೂ ಹಕ್ಕಿನ ಕಡೆಗೆ ಮಹತ್ತರವಾದ ಹೆಜ್ಜೆಯಿದು. ಈ ಮಸೂದೆಯು ಮಹಿಳೆಯರ ನ್ಯಾಯ ಹಾಗೂ ಗೌರವದ ಪರವಾಗಿ ಇರುವುದೇ ಹೊರತು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧವಲ್ಲ ಎಂದು ಹೇಳಿದರು.
ಈ ಮಸೂದೆಗೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. "ಇದರಿಂದ ಮುಸ್ಲಿಂ ಮಹಿಳೆಯರ ಹಕ್ಕು ಚ್ಯುತಿ ಆಗುತ್ತದೆ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆರೋಪಿಸಿದರು.