ಟಿಎಂಸಿ ಸಂಸದೆ ಸುಶ್ಮಿತಾ ಮೇಲೆ ಹಲ್ಲೆ: ಬಿಜೆಪಿ ಮೇಲೆ ಆರೋಪ
ಕೋಲ್ಕತ್ತಾ, ಅಕ್ಟೋಬರ್ 22: ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ರ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಸುಶ್ಮಿತಾ ದೇವ್ರ ತೃಣಮೂಲ ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರಚಾರ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದ ಕೆಲವು ಖಾಸಗಿ ಸಂಸ್ಥೆಯ ಸಿಬ್ಬಂದಿಗಳಿಗೂ ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ನ ಉಸ್ತುವಾರಿ ವಹಿಸಿಕೊಂಡಿರುವ ಸುಶ್ಮಿತಾ ದೇವ್ ಮೇಲೆ ಬಿಜೆಪಿ ಹಲ್ಲೆ ಮಾಡಿಸಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಆರೋಪ ಮಾಡಿದೆ.
ರಾಜಕೀಯ ಸಾರ್ವಜನಿಕ ಸಂಪರ್ಕ ಮತ್ತು ಸಲಹಾ ಸಂಸ್ಥೆಯಾದ ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಅಥವಾ ಐ-ಪಿಎಸಿಯ ಉದ್ಯೋಗಿಗಳೊಂದಿಗೆ ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಇದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ವರದಿಯು ಹೇಳಿದೆ.
ಕಾಂಗ್ರೆಸ್ ಮಾಜಿ ಸಂಸದೆ ಟಿಎಂಸಿ ಸೇರ್ಪಡೆ: ಕೇಂದ್ರ ನಾಯಕತ್ವದ ವಿರುದ್ದ ಸಿಬಲ್ ವಾಕ್ ಪ್ರಹಾರ
ತೃಣಮೂಲ ಕಾಂಗ್ರೆಸ್ನ ಚುನಾವಣಾ ಚಿಹ್ನೆ ಹಾಗೂ ಲೌಡ್ಸ್ಪೀಕರ್ ಇದ್ದ ನೀಲಿ ಬಣ್ಣದ ವಾಹನದ ಮೇಲೆ ಈ ದಾಳಿ ನಡೆದಿದೆ ಎಂದು ಚಿತ್ರಗಳಿಂದ ಕಂಡು ಬಂದಿದೆ. ಇನ್ನು ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷ ಪೊಲೀಸರಿಗೆ ದೂರು ಕೂಡಾ ನೀಡಿದೆ.
"ಭಾರತೀಯ ಜನತಾ ಪಕ್ಷ (ಬಿಜೆಪಿ) ಯು ಸುಶ್ಮಿತಾ ದೇವ್ ಸೇರಿದಂತೆ ಒಟ್ಟು ಹತ್ತು ಟಿಎಂಸಿ ಪಕ್ಷದ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ಈ ಘಟನೆ ಅಮ್ತಾಲಿ ಬಜಾರ್ ಬಳಿಕ ಮಧ್ಯಾಹ್ನ 1:30 ಗಂಟೆಗೆ ನಡೆದಿದೆ. ಈ ದುಷ್ಕರ್ಮಿಗಳು ವಾಹನಕ್ಕೆ ಹಾನಿ ಮಾಡಿದ್ದಾರೆ. ಟಿಎಂಸಿ ಕಾರ್ಯಕರ್ತರಿಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಪಕ್ಷದ ಮಹಿಳಾ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿದ್ದಾರೆ," ಎಂದು ಪೊಲೀಸರಿಗೆ ತೃಣಮೂಲ ಕಾಂಗ್ರೆಸ್ ದೂರು ನೀಡಿದೆ.
"ಇನ್ನು ಇಷ್ಟು ಮಾತ್ರವಲ್ಲೇ ಪಕ್ಷದ ಬೆಂಬಲಿಗರ ಮೊಬೈಲ್ ಫೋನ್ ಸೇರಿದಂತೆ ಕೆಲವು ವಸ್ತುಗಳ ಕಳ್ಳತನವೂ ಆಗಿದೆ. ಈ ವಿಚಾರದಲ್ಲಿ ಶೀಘ್ರವೇ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ನಾವು ಮನವಿ ಮಾಡುತ್ತೇವೆ," ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ನ ಮಾಜಿ ಸಂಸದೆ ಸುಶ್ಮಿತಾ ದೇವಿ ಆಗಸ್ಟ್ 16 ರಂದು ಪಕ್ಷವನ್ನು ತೊರೆದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸುಷ್ಮಿತಾ ದೇವ್, ಮೂರು ದಶಕಗಳ ಕಾಂಗ್ರೆಸ್ ಸದಸ್ಯ ಮತ್ತು ಪಕ್ಷದ ಉತ್ಸಾಹಿ ಸಂತೋಷ್ ಮೋಹನ್ ದೇವ್ರ ಪುತ್ರಿ, ಕಾಂಗ್ರೆಸ್ ಅನ್ನು ತೊರೆದಿರುವುದು ಪಕ್ಷದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. ಸುಶ್ಮಿತಾ ದೇವ್ ಮಾರ್ಚ್ನಲ್ಲಿ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಊಹಾಪೋಹಗಳನ್ನು ಹುಟ್ಟಿಕೊಂಡಿದ್ದು, ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಈ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದ್ದವು. ಆದರೆ ಬಳಿಕ ಆಗಸ್ಟ್ನಲ್ಲಿ ಸುಶ್ಮಿತಾ ಕಾಂಗ್ರೆಸ್ ತೊರೆದಿದ್ದಾರೆ. ಇನ್ನು ಈ ವಿಚಾರದಲ್ಲಿ ಕಾಂಗ್ರೆಸ್ನ ಹಲವಾರು ಹಿರಿಯ ನಾಯಕರುಗಳು ಕಾಂಗ್ರೆಸ್ ಹೈಕಮಾಂಡ್ ಮೇಲೆ ವಾಗ್ದಾಳಿ ನಡೆಸಿದ್ದರು.
ತ್ರಿಪುರಾದಲ್ಲಿ ಚುನಾವಣೆಗೆ ಟಿಎಂಸಿ ಸಿದ್ಧತೆ
ಇನ್ನು ಗುರುವಾರವಷ್ಟೇ ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ತ್ರಿಪುರಾದಲ್ಲಿ ನಡೆಯಲಿರುವ ಚುನಾವಣೆಗಳಿಗೆ ಸಂಬಂಧಿಸಿ ಮಾಧ್ಯಮದೊಂದಿಗೆ ಮಾತನಾಡಿದ್ದರು. ಚುನಾವಣೆ ಘೋಷಣೆ ಆದ ಬಳಿಕ ನಾವು ಕೊನೆ ಕಾರ್ಯತಂತ್ರವನ್ನು ಜಾರಿ ಮಾಡುತ್ತೇವೆ ಎಂದು ಕೂಡಾ ಸುಶ್ಮಿತಾ ಹೇಳಿಕೊಂಡಿದ್ದರು. "ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತ್ರಿಪುರಾದಲ್ಲಿ ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಈಗಾಗಲೇ ತಿಳಿಸಿದ್ದಾರೆ. ಅದರಂತೆ ನಾವು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ತಯಾರಿಯನ್ನು ನಡೆಸುತ್ತಿದ್ದೇವೆ. ಚುನಾವಣೆ ಘೋಷಣೆಯಾಗಲಿ ಬಳಿಕ ನಾವು ಕೊನೆಯ ತಂತ್ರಗಾರಿಕೆಯನ್ನು ಮಾಡುತ್ತೇವೆ," ಎಂದಿದ್ದರು.
(ಒನ್ಇಂಡಿಯಾ ಸುದ್ದಿ)