ತಿರುಪತಿಗೆ ಸೇರಿತು 24 ಕೋಟಿಯ ಸ್ವರ್ಣರಥ
ಆಂಧ್ರಪ್ರದೇಶ, ಅ.1 : 24 ಕೋಟಿ ವೆಚ್ಚದಲ್ಲಿ ತಿರುಪತಿ ತಿಮ್ಮಪ್ಪನಿಗೆಂದು ತಯಾರಿಸಲಾಗಿರುವ ಚಿನ್ನದ ರಥದ ಪ್ರಾಯೋಗಿಕ ಪ್ರರೀಕ್ಷೆ ಮೊದಲ ದಿನ ಹಲವು ವಿಘ್ನಗಳ ನಡುವೆಯೂ ಯಶಸ್ವಿಯಾಗಿ ನೆರವೇರಿದೆ. ಟಿಟಿಡಿ ಅಧಿಕಾರಿಗಳು ರಥವನ್ನು ರಾಜಬೀದಿಗಳಲ್ಲಿ ಎಳೆಯುವಲ್ಲಿ ಸಫಲರಾಗಿದ್ದಾರೆ.
74 ಕೆಜಿ ಚಿನ್ನ ಬಳಸಿ, 24 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವರ್ಣರಥಂ ಸುಮಾರು 28,000 ಕೆ.ಜಿ.ತೂಕವಿದೆ. ಸೋಮವಾರ ಬೆಳಗ್ಗೆ 10 ಗಂಟೆ ವೇಳೆಗೆ ಪ್ರಯೋಗಾರ್ಥವಾಗಿ ರಥವನ್ನು ರಾಜಬೀದಿಯಲ್ಲಿ ಎಳೆಯಲಾಯಿತು.
ಸ್ವರ್ಣರಥ ಸ್ವಲ್ಪ ದೂರ ಸಾಗುವಷ್ಟರಲ್ಲೇ ಅದರ ತೂಕಕ್ಕೆ ನೆಲ ಕುಸಿಯಿತು. ಹೀಗಾಗಿ ಚಕ್ರ ನೆಲದೊಳಗೆ ಹೂತುಹೋಯಿತು. 2 ದೊಡ್ಡ ಕ್ರೇನ್ ಬಳಸಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ, ರಥವನ್ನು ಮೇಲೆತ್ತಿ ಮತ್ತೆ ಎಳೆಯಲಾಯಿತು.
ಪುನಃ ಸ್ವಲ್ಪ ದೂರ ಸಾಗುವಷ್ಟರಲ್ಲಿ ಒಳಚರಂಡಿ ನಿರ್ಮಿಸಲು ತೆಗೆದಿದ್ದ ಮಣ್ಣು ಕುಸಿದು, ಮತ್ತೆ ರಥ ಸಿಕ್ಕಿಹಾಕಿಕೊಂಡಿತು. ಕೊನೆಗೂ ಹರಸಾಹಸ ಪಟ್ಟು, ದೇವಾಲಯ ಬಳಿಯ ವಾಹನ ಮಂಟಪದ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವರ್ಣರಥಂ ಮಂಟಪದಲ್ಲಿ ರಥವನ್ನು ನಿಲ್ಲಿಸಲಾಯಿತು.ಬ್ರಹ್ಮರಥೋತ್ಸವದ ಸಮಯದಲ್ಲಿ ಸ್ವರ್ಣರಥ ರಾಜಬೀದಿಗಳಲ್ಲಿ ಸಾಗಲಿದೆ. (ಹೇಗಿದೆ ಸ್ವರ್ಣರಥ)
ತಿರುಮಲದಲ್ಲಿ ನಿರ್ಮಾಣ
ತಿರುಮಲದಲ್ಲಿರುವ ಎಸ್ವಿ ಮ್ಯೂಸಿಯಂನಲ್ಲಿ ಸ್ವರ್ಣರಥಂ ನಿರ್ಮಾಣ ಕಾರ್ಯ ನಡೆದಿದೆ. ಒಂದು ವಾರದ ಹಿಂದೆಯಷ್ಟೆ ರಥ ನಿರ್ಮಾಣ ಕಾರ್ಯಪೂರ್ಣಗೊಂಡಿತ್ತು. ಸೆ.30ರಂದು ದೇವಾಲಯಕ್ಕೆ ಹತ್ತಾಂತರಿಸಲಾಗಿದೆ.
ಎಷ್ಟು ಚಿನ್ನ ಬಳಕೆ
32 ಅಡಿ ಎತ್ತರವಿರುವ ಸ್ವರ್ಣರಥಂ ಸುಮಾರು 28,000 ಕೆ.ಜಿ.ತೂಕವಿದೆ. 74 ಕೆ.ಜಿ.ಚಿನ್ನ, 2,800 ಕೆ.ಜಿ. ತಾಮ್ರ ಬಳಸಿ ಇದನ್ನು ನಿರ್ಮಿಸಲಾಗಿದೆ. 18 ಗೇಜ್ ತಾಮ್ರದ ತಗಡು ಸೇರಿದಂತೆ ರಥದಲ್ಲಿ 9 ಪದರದಲ್ಲಿ ಚಿನ್ನವಿದೆ.
ತಮಿಳುನಾಡಿನ ಶಿಲ್ಪಿಗಳು
ಟಿಟಿಡಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರರೆಡ್ಡಿ, ಅಧಿಕಾರಿಗಳಾದ ಸುಧಾಕರರೆಡ್ಡಿ, ಪರಂಧಾಮಂ ಹಾಗೂ ತಮಿಳುನಾಡಿನ ಶಿಲ್ಪಿಗಳ ತಂಡದ ಸ್ವರ್ಣರಥಂ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಪ್ರತ್ಯೇಕ ರಸ್ತೆ
ಈ ಸ್ವರ್ಣರಥ ಸಂಚರಿಸಲು ತಿರುವೆಂಕಟಪಥಂ ಎಂಬ ರಸ್ತೆಯನ್ನು ನಿರ್ಮಿಸಲಾಗಿದೆ. ಮೊದಲನೇ ಹಂತದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅ.5ರಿಂದ ಎರಡನೇ ಹಂತದ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ದೇವಾಲಯದ ಬಳಿ ಇರುತ್ತದೆ
ದೇವಾಲಯ ಬಳಿಯ ವಾಹನ ಮಂಟಪದ ಹಿಂಭಾಗದಲ್ಲಿ ಸ್ವರ್ಣರಥ ನಿಲ್ಲಿಸಲು ನೂತನವಾಗಿ ಸ್ವರ್ಣರಥಂ ಮಂಟಪ ನಿರ್ಮಿಸಲಾಗಿದೆ. ಅಲ್ಲಿಯೇ ಈ ರಥ ಇರಲಿದೆ. ಬ್ರಹ್ಮರಥೋತ್ಸವದ ಸಮಯದಲ್ಲಿ ಸ್ವರ್ಣರಥ ರಾಜಬೀದಿಗಳಲ್ಲಿ ಸಾಗಲಿದೆ.