ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!
ಬೆಂಗಳೂರು, ಫೆಬ್ರವರಿ 1: ಕೇಂದ್ರ ಸರ್ಕಾರ ಹೊಸ "ಗುಜರಿ ಪಾಲಿಸಿ" ಪರಿಚಯಿಸುವ ಮೂಲಕ ಇಂಧನ ಕ್ಷಮತೆ ಹಾಗೂ ಪರಿಸರ ಮಾಲಿನ್ಯ ರಕ್ಷಣೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಪ್ರಕಟಣೆ ನೀಡಿದ್ದಾರೆ. ಕೇಂದ್ರದ ಈ ಹೊಸ ಪಾಲಿಸಿ ವಾಹನ ತಯಾರಕರಿಗೆ, ಮಾರಾಟಗಾರರಿಗೆ ನಿರೀಕ್ಷಿಸದ ಮಟ್ಟಿಗೆ ಬಂಬರ್ ಲಾಭವಾಗಲಿದೆ. ಎಲ್ಲದಕ್ಕೂ ಮೀರಿ ಗುಜರಿ ಉದ್ಯಮಿಗಳ ಪಾಲಿಗಂತೂ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ.
ಕೇಂದ್ರ ಸರ್ಕಾರದ ಪ್ರಸ್ತಾಪಿತ "ಗುಜರಿ ಪಾಲಿಸಿ" ಬಗ್ಗೆ ರಾಜ್ಯಗಳ ಅಭಿಪ್ರಾಯ ಸಂಗ್ರಹವಾಗುತ್ತಿದೆ. ಶೀಘ್ರದಲ್ಲಿಯೇ ರಾಷ್ಟ್ರ ವ್ಯಾಪ್ತಿ ಗುಜರಿ ಪಾಲಿಸಿ ಜಾರಿಗೆ ತರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ. ಉದ್ದೇಶಿತ ಯೋಜನೆ ಪ್ರಕಾರ ಹದಿನೈದು ವರ್ಷದ ಬಳಿಕ ಕಮರ್ಷಿಯಲ್ ವಾಹನಗಳನ್ನು ಗುಜರಿಗೆ ಹಾಕಬೇಕು. ಜನರು ಬಳಕೆಯ ವಾಹನಗಳು 20 ವರ್ಷದ ಬಳಿಕ ಗುಜರಿಗೆ ಹಾಕಬೇಕು. ಇದರಿಂದ ದೇಶದಲ್ಲಿ ಇಂಧನ ಕ್ಷಮತೆ ಜತೆಗೆ ಪರಿಸರ ರಕ್ಷಣೆ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಮತ್ತು ಗುಜರಿ ಪಾಲಸಿಯ ವಾಸ್ತವಗಳು ಸಮಗ್ರ ವಿವರ ಇಲ್ಲಿದೆ.
ಬಜೆಟ್ 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?
ಪಾಲಿಸಿಯ ವಿವರಗಳು:
ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವ ವಾಣಿಜ್ಯ ವಾಹನಗಳು ಹದಿನೈದು ವರ್ಷದ ಬಳಿಕ ಅವುಗಳ ಅರ್ಹತೆ ಬಗ್ಗೆ ತಪಾಸಣೆ ನಡೆಸಿ ಗುಜರಿಗೆ ಹಾಕುವುದು. ವಾಹನ ಖರೀದಿಸಿದ ಎಂಟು ವರ್ಷದ ಬಳಿಕ ಹದಿನೈದು ವರ್ಷದ ವರೆಗೂ ವಾಣಿಜ್ಯ ವಾಹನಗಳಿಗೆ ರಸ್ತೆ ತೆರಿಗೆಯ ಶೇ. 10 ರಿಂದ 15 ಪರ್ಸೆಟ್ ಗ್ರಿನ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಮತ್ತು ಸ್ವಂತಕ್ಕೆ ಬಳಸುವ ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷದ ಬಳಿಕ ಶೇ. 50 ರಷ್ಟು ಗ್ರಿನ್ ಟ್ಯಾಕ್ಸ್ ವಿಧಿಸುವ ಪ್ರಸ್ತಾವನೆ ಹೊಂದಿದೆ. ಈ ಮೂಲಕ ಹಳೇ ವಾಹನಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತಹ ವಾತಾವರಣ ನಿರ್ಮಿಸುವ ಉದ್ದೇಶದೊಂದಿಗೆ ಈ ಯೋಜನೆ ದೇಶದಲ್ಲಿ ಜಾರಿಗೆ ಬರಲಿದೆ. ಇಂಧನ ಕ್ಷಮತೆ ಹಾಗೂ ಗುಜರಿ ವಾಹನ ಪಾಲಿಸಿ ಎಂಬುದು ಗೋಕುಲಾಷ್ಟಮಿಗೂ ಹಾಗೂ ಇಮಾಂಸಾಬಿಗೂ ಏನು ಸಂಬಂಧ ಎನ್ನುವಂತಾಗಿದೆ.
ಸಾರಿಗೆ ವ್ಯವಸ್ಥೆ ಎಂಬ ಚಿನ್ನದ ಮೊಟ್ಟೆ:
ದೇಶದ ಅರ್ಥ ವ್ಯವಸ್ಥೆಗೆ ಸಾರಿಗೆ ವ್ಯವಸ್ಥೆ ನರನಾಡಿ ಇದ್ದಂತೆ. ಒಂದು ದೇಶದ ಅರ್ಥ ವ್ಯವಸ್ಥೆ ಆ ದೇಶದ ಸಾರಿಗೆ ವ್ಯವಸ್ಥೆ ಮೇಲೆ ಅವಂಭಿಸಿರುತ್ತದೆ ಎನ್ನುತ್ತಾರೆ ಅರ್ಥ ಶಾಸ್ತ್ರಜ್ಞರು. ಅಂದರೆ ರಸ್ತೆ ಸೌಕರ್ಯ ಮತ್ತು ವಾಹನ, ಸಾರಿಗೆ ವ್ಯವಸ್ಥೆ ಇದರ ವ್ಯಾಪ್ತಿಗೆ ಬರುತ್ತವೆ. ಆ ಲೆಕ್ಕಾಚಾರದಲ್ಲಿ ನೋಡುವುದಾದರೆ ದೇಶದಲ್ಲಿ ಸದ್ಯ 253 ಮಿಲಿಯನ್ ವಾಹನಗಳಿವೆ. ರಸ್ತೆಗಳ ವಿಚಾರಕ್ಕೆ ಬಂದರೆ, ರಾಷ್ಟ್ರೀಯ ಹೆದ್ದಾರಿಗಳು ಹಂತ ಹಂತವಾಗಿ ಖಾಸಗಿಯವರ ಪಾಲಾಗಿ ಟೋಲ್ ಶುಲ್ಕದಿಂದ ಸಾರಿಗೆ ವ್ಯವಸ್ಥೆಯೇ ದುಬಾರಿಯಾಗುತ್ತದೆ. ಭಾರತದಲ್ಲಿ ವಾಹನ ತೆರಿಗೆ ವ್ಯವಸ್ಥೆ, ಇಂಧನ ಬೆಲೆ ಬಗ್ಗೆ ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಬಲು ದುಬಾರಿ. ವಾಹನ ನೋಂದಣಿ, ರಸ್ತೆ ತೆರಿಗೆಯೂ ಭಾರತದಲ್ಲಿ ಅತಿ ದುಬಾರಿ. ಪ್ರಗತಿ ಹೊಂದುತ್ತಿರುವ ದೇಶದಲ್ಲಿ ಸಾರಿಗೆ ವ್ಯವಸ್ಥೆ ಅಭಿವೃದ್ಧಿಗೆ ಸರ್ಕಾರ ಅತಿ ಮಹತ್ವ ನೀಡಬೇಕು. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನೀತಿಗಳು ಪ್ರಗತಿ ಎಂದು ಹೇಳುವುದಕ್ಕಿಂತಲೂ ಜನ ಸಾಮಾನ್ಯನಿಗೆ ಹೊರೆಯಾಗುತ್ತಿವೆ.
ವಾಹನ ಮಾಲೀಕರ ಜೇಬು ಖಾಲಿ
ಕೇಂದ್ರ ಬಜೆಟ್ ಘೋಷಣೆ ದಿನವೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಮೋದಿ ಸರ್ಕಾರ ಬಂದರೆ ಮೂವತ್ತು ರೂಪಾಯಿಗೆ ಇಂಧನ ಸಿಗುತ್ತದೆ ಎಂದವರು ಇನ್ನೂ ಅಂಗೈಯಲ್ಲೇ ಆಕಾಶ ತೋರಿಸುತ್ತಿದ್ದಾರೆ. ಸದ್ಯ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಲೀಟರ್ ಪೆಟ್ರೋಲ್ 90 ರ ಗಡಿ ದಾಟಿದೆ. ಡೀಸಲ್ ದರ ರೂ. 80 ಆಗಿದೆ. ಟೋಲ್ ಶುಲ್ಕ, ವಾರ್ಷಿಕ ರಸ್ತೆ ತೆರಿಗೆಯ ಭಾರವನ್ನೇ ಹೊರಲಾರದೇ ಟ್ರಾನ್ಸ್ ಪೋರ್ಟ್ ಉದ್ಯಮ ನಷ್ಟದತ್ತ ಸಾಗಿದೆ. ದರ ಜತೆಗೆ ವಾಹನ ಸರ್ವೀಸ್, ವಿಮೆ, ಬ್ಯಾಂಕ್ ಕಂತುಗಳನ್ನು ಪರಿಗಣಿಸಿದರೆ ಸದ್ಯದ ಸ್ಥಿತಿಯಲ್ಲಿಯೇ ದೇಶದ ಬಹುತೇಕ ಟ್ರಾನ್ಸ್ ಪೋರ್ಟ್ ಉದ್ಯಮಿಗಳು ನಷ್ಟ ಅನುಭವಿಸಿ ನಷ್ಟದತ್ತ ಸಾಗಿದ್ದಾರೆ. ಇಂತಹ ಸಂಕಷ್ಟಗಳಿಗೆ ವಾಸ್ತವ ಪರಿಹಾರ ಕಂಡುಕೊಳ್ಳದೇ ಕೇಂದ್ರ ಸರ್ಕಾರ ಗುಜರಿ ನೀತಿ ತುರುವ ಮೂಲಕ ದೇಶದ ಶ್ರೀಮಂತ ದೊರೆಗಳ ಕೈವಶದಲ್ಲಿರುವ ಗುಜರಿ ಉದ್ಯಮಿಗಳಿಗೆ ಕೆಂಪು ಹಾಸಿಗೆ ಹಾಕಿದಂತಾಗಿದೆ. ಇದರ ಜತೆಗೆ, ವಾಹನ ತಯಾರಕ ಹಾಗೂ ಉತ್ಪಾದಕ ಉದ್ಯಮಗಳಿಗಷ್ಟೇ ಈ ಗುಜರಿ ನೀತಿ ಲಾಭದಾಯಕವಾಗಲಿದೆ. ಹೊರತು ಪಡಿಸಿ ವಾಹನ ಬಳಕೆ ಮಾಡುವರಿಗೆ ಮತ್ತು ಸಾರಿಗೆ ಉದ್ಯಮ ನಡುಸುವರಿಗೆ ಭಾರೀ ನಷ್ಟವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಗುಜರಿಯಿಂದ ಕೋಟಿ ಕೋಟಿ ಸಂಪತ್ತು ಸೃಷ್ಟಿ
ಸದ್ಯದ ಗುಜರಿ ನೀತಿಯಿಂದ ದೇಶದ ಸಂಪತ್ತು ಎಂದು ಪರಿಗಣಿಸುವ ಹಳೇ ವಾಹನಗಳನ್ನ ಗುಜರಿಗೆ ಹಾಕಬೇಕು. ವಾಹನ ಖರೀದಿಸಿದ ಎಂಟು ವರ್ಷದ ನಂತರ ಹಸಿರು ತೆರಿಗೆ ಪಾವತಿಸಬೇಕು. ಇರುವ ಭಾರ ತಡೆಯಲಾಗದೇ ಹೊಸ ಭಾರ ಹೊರಲಾರದೇ ಟ್ರಾನ್ಸ್ ಪೋರ್ಟ್ ವ್ಯವಸ್ಥೆ ಸ್ಥಗಿತಗೊಳ್ಳಲಿದೆ ಎಂಬ ಮಾತುಗಳು ಟ್ರಾನ್ಸ್ ಪೋರ್ಟ್ ಉದ್ಯಮದಿಂದ ಕೇಳಿ ಬಂದಿರುವ ಮಾತುಗಳು. ಗುಜರಿ ನೀತಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹಳೇ ವಾಹನಗಳಿಗೆ ಸರ್ಕಾರ ಪರಿಹಾರ ನೀಡುವ ಗುಜರಿ ನೀತಿ ಜಾರಿಗೆ ತರಬೇಕು. ಹಳೇ ವಾಹನ ಗುಜರಿಗೆ ಹಾಕುವ ಮಾಲೀಕರಿಗೆ ಜಿಎಸ್ ಟಿ ತೆರಿಗೆ ವಿನಾಯಿತಿ ಕೊಡಬೇಕು. ಹೊಸ ವಾಹನಕ್ಕೆ ವಾಹನ ಬೆಲೆ ಆಧಾರಿಸಿ ಡಿಸ್ಕೌಂಟ್ ಕೊಡಬೇಕು. ಪ್ರತಿ ಕೆ.ಜಿ. ಗೆ ಕನಿಷ್ಠ 35 ರೂಪಾಯಿ ಮೇಲೆ ನಿಗದಿ ಮಾಡಬೇಕು. ನಮ್ಮ ಬೇಡಿಕೆಗಳನ್ನು ಸರ್ಕಾರದ ಮಟ್ಟಕ್ಕೆ ತಿಳಿಸಿದ್ದೇವೆ. ಸದ್ಯದ ಬಜೆಟ್ ನಲ್ಲಿ ಟ್ರಾನ್ಸ್ ಪೋರ್ಟ್ ಉದ್ಯಮಕ್ಕೆ ಯಾವ ಅನುಕೂಲವೂ ಆಗಿಲ್ಲ. ಒಂದು ವೇಳೆ ಗುಜರಿ ನೀತಿ ಕೂಡ ಮಾರಕವಾದಲ್ಲಿ ಎಲ್ಲಾ ವ್ಯಹವಾರ ಸ್ಥಗಿತಗೊಳಿಸಿ ಟ್ರಾನ್ಸ್ ಪೋರ್ಟ್ ಉದ್ಯಮಿಗಳು ಆತ್ಮಹತ್ಯೆಯ ಹಾದಿ ನೋಡಬೇಕಾಗುತ್ತದೆ ಎಂದು ಕರ್ನಾಟಕ ಲಾರಿ ಮಾಲೀಕರ ಫೆಡರೇಷನ್ ಅಧ್ಯಕ್ಷ ಷಣ್ಮುಗಪ್ಪ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಇಂಜನ್ ಬದಲಿಸಲಿ :
ವಾಹನಗಳ ಬೆಲೆ ಗಗನಕ್ಕೇರುತ್ತಿದೆ. ಇವತ್ತಿನ ಬೆಲೆಯಲ್ಲಿ ವಾಹನ ಖರೀದಿ ಮಾಡಿ ವಹಿವಾಟು ನಡೆಸುವುದೇ ದುಬಾರಿಯಾಗಿದೆ. ಸದ್ಯ ದೇಶದಲ್ಲಿರುವ ವಾಹನಗಳು ಕೂಡ ದೇಶದ ಸಂಪತ್ತು. ಹಳೇ ವಾಹನಗಳಿಂದ ಪರಿಸರಕ್ಕೆ ಹಾನಿಯಾಗುವುದಿದ್ದರೆ ಇಂಜಿನ್ ಗಳನ್ನು ಬದಲಿಸುವ ಕಾರ್ಯ ನೀತಿ ಜಾರಿಗೆ ತರಲಿ. ಇದನ್ನು ಹೊರತು ಪಡಿಸಿ ಹಣ್ಣಿನ ಒಂದು ಭಾಗಕ್ಕೆ ಗಾಯ ಆಗಿದೆ ಎಂದು ಇಡೀ ಹಣ್ಣನ್ನೇ ಬಿಸಾಡುವುದಲ್ಲಿ ಅರ್ಥವಿಲ್ಲ. ಸರ್ಕಾರ ಗುಜರಿ ನೀತಿಯನ್ನು ವೈಜ್ಞಾನಿಕವಾಗಿ ರೂಪಿಸಬೇಕು. ವಾಹನ ಉದ್ಯಮಕ್ಕೆ ಧಕ್ಕೆಯಾಗಬಾರದು. ದೇಶದ ಸಾರಿಗೆ ವ್ಯವಸ್ಥೆ ಕುಸಿದು ಬಿದ್ದರೆ ಇಡೀ ಅರ್ಥ ವ್ಯವಸ್ಥೆಗೆ ನಕಾರಾತ್ಮಕ ಪೆಟ್ಟು ಬೀಳಲಿದೆ. ಮೊದಲು ದೇಶದ ಸಾರಿಗೆ ವ್ಯವಸ್ಥೆಯನ್ನು ಜನರಿಗೆ ಅನುಕೂಲವಾಗುವಂತಾಗಬೇಕು. ದೇಶ ಪ್ರಗತಿಯತ್ತ ಸಾಗುತ್ತಿರುವಾಗ ಸಾರಿಗೆ ಬಳಕೆಯ ವೆಚ್ಚ ಕಡಿಮೆಯಾಗುತ್ತಾ ಹೋಗಬೇಕು. ಆದರೆ ದೇಶದ ಸಾರಿಗೆ ನೀತಿಗಳಿಗೂ ಆರ್ಥಿಕ ಪ್ರಗತಿ ತದ್ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಿದೆ. ಇದರ ಪರಿಣಾಮ ಜನ ಸಾಮಾನ್ಯನಿಗೆ ಹೊರೆಯಾಗುತ್ತದೆ ಎಂದು ಟ್ರಾನ್ಸ್ ಪೋರ್ಟ್ ಉದ್ಯಮಿ ರಾಜೇಶ್ ತನ್ನ ವೈಯಕ್ತಿಕ ಅಭಿಪ್ರಾಯ ವಿವರಿಸಿದರು.
ಜನರಿಗೆ ಹೊರೆ ಬೀಳಲಿದೆ:
ಗುಜರಿ ಪಾಲಿಸಿಯಿಂದ ಹೆಚ್ಚಿನ ತೆರಿಗೆ ವಿಧಿಸಿದಲ್ಲಿ ಅದು ಪರೋಕ್ಷವಾಗಿ ಜನರ ಮೇಲೆ ಬೀಳಲಿದೆ. ಸಾರಿಗೆ ಉದ್ಯಮಿಗಳು ತಮ್ಮ ಮೇಲೆ ಬೀಳುವ ಹೊರೆಯನ್ನು ಸೇವೆ ಹೆಸರಿನಲ್ಲಿ ಜನರ ಮೇಲೆ ಹಾಕಲಿದ್ದಾರೆ. ಈಗಾಗಲೇ ತೆರಿಗೆ ವಸೂಲಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ನಮ್ಮ ದೇಶದಲ್ಲಿ ಜನ ಸಾಮಾನ್ಯರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಸರ್ಕಾರದ ಸಾರಿಗೆ ವ್ಯವಸ್ಥೆ ನಂಬುವಂತೂ ಇಲ್ಲ. ಇತ್ತ ಖಾಸಗಿಯನ್ನು ಅಪ್ಪಿಕೊಳ್ಳಲಾಗುತ್ತಿಲ್ಲ. ಇನ್ನ ದ್ವಿಚಕ್ರ ವಾಹನ, ಕಾರು ಖರೀದಿಸಿ ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಂಡರೆ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.