ಕಾನ್ಪುರದಲ್ಲಿ ಭೀಕರ ಅಪಘಾತ; 26 ಭಕ್ತಾದಿಗಳು ಸಾವು
ಲಕ್ನೋ, ಅಕ್ಟೋಬರ್ 02; ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 26 ಭಕ್ತರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ ಉನ್ನಾವೋದ ಚಂದ್ರಿಕಾ ದೇವಿ ದೇವಾಲಯಕ್ಕೆ ತೆರಳಿ ಭಕ್ತರು ವಾಪಸ್ ಬರುವಾಗ ಘಟಮ್ಪುರ್ ಬಳಿ ಟ್ರಾಕ್ಟರ್ ಟ್ರಾಲಿ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಹೆಚ್ಚಿನವರಾಗಿದ್ದಾರೆ.
ಹಣ್ಣುಗಳಿಂದ ಅಲಂಕಾರಗೊಂಡ ಗಣಪನನ್ನು ಕಣ್ತುಂಬಿಕೊಂಡ ಭಕ್ತರು
ಟ್ರಾಕ್ಟರ್ನಲ್ಲಿ ಸುಮಾರು 50 ಜನರು ದೇವಿಯ ದರ್ಶನಕ್ಕಾಗಿ ಹೋಗಿದ್ದರು. ದೇವಾಲಯದಿಂದ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 20ಕ್ಕೂ ಅಧಿಕ ಜನರು ಅಪಘಾತದಲ್ಲಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಸ್ಥಾನದ ಪಾಲಿಯಲ್ಲಿ ಭೀಕರ ಅಪಘಾತ: 7 ಭಕ್ತರು ಸಾವು- 25 ಮಂದಿಗೆ ಗಾಯ
ಮೋದಿ ಸಂತಾಪ; 26 ಭಕ್ತರು ಸಾವನ್ನಪ್ಪಿದ ಭೀಕರ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
Breaking: ಉತ್ತರ ಪ್ರದೇಶ ಬಸ್-ಟ್ರಕ್ ಡಿಕ್ಕಿಯಾಗಿ 8 ಮಂದಿ ಸಾವು, 24 ಮಂದಿ ಗಾಯ
ಮೃತಪಟ್ಟ ಭಕ್ತರ ಕುಟುಂಬದವರು, ಗಾಯಗೊಂಡವರ ಕಡೆಯವರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೃತಪಟ್ಟವರಲ್ಲಿ ಹಲವಾರು ಜನರು ಕೊರ್ತಾ ಗ್ರಾಮದವರು ಎಂದು ಪೊಲೀಸರು ಹೇಳಿದ್ದಾರೆ. ಗಾಯಗೊಂಡವರಲ್ಲಿ ಕೆಲವು ಭಕ್ತರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
An ex-gratia of Rs. 2 lakh from PMNRF would be paid to the next of kin of each of the deceased. The injured would be given Rs. 50,000: PM @narendramodi
— PMO India (@PMOIndia) October 1, 2022
ಘಟನಾ ಸ್ಥಳಕ್ಕೆ ಉತ್ತರ ಪ್ರದೇಶದ ಇಬ್ಬರು ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ರಾಕ್ಟರ್ ಟ್ರಾಲಿ ಹೊಂಡಕ್ಕೆ ಪಲ್ಟಿಯಾದ ಬಳಿಕ ಹಲವರು ಕೆಸರು ಮಿಶ್ರಿತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಸಚಿವರಾದ ಅಜಿತ್ ಪಾಲ್ ಮತ್ತು ರಾಕೇಶ್ ಸಾಚನ್ರನ್ನು ಪರಿಹಾರ ಕಾರ್ಯಗಳ ಉಸ್ತುವಾರಿಗಾಗಿ ನಿಯೋಜನೆ ಮಾಡಿದ್ದಾರೆ.
ಜನರು ಸಂಚಾರ ನಡೆಸಲು ಟ್ರಾಕ್ಟರ್ ಟ್ರಾಲಿಗಳನ್ನು ಬಳಸಬಾರದು. ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯದ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿದೆ.
"ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆಯೇ ಅಂಬ್ಯುಲೆನ್ಸ್ಗಳ ವ್ಯವಸ್ಥೆ ಮಾಡಲಾಯಿತು. ಪೊಲೀಸರು ಸಹ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದರು. ಹೆಚ್ಚಿನ ಜನರು ಜಮಾವಣೆಗೊಂಡಿರುವ ಕಾರಣ ಆಸ್ಪತ್ರೆ ಮುಂದೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ" ಎಂದು ಕಾನ್ಪುರದ ಎಸ್ಪಿ ತೇಜ್ ಸ್ವರೂಪ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರವೂ ಸಹ ಅಪಘಾತದಲ್ಲಿ ಮೃತಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ, "ಕಾನ್ಪುರ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತ ಹೃದಯ ವಿದ್ರಾವಕವಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ತಕ್ಷಣ ತೆರಳಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲು ನಿರ್ದೇಶನ ನೀಡಲಾಗಿದೆ" ಎಂದು ಹೇಳಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಖ್ ಅಯ್ಯರ್ ಪಿಟಿಐ ಜೊತೆ ಮಾತನಾಡಿ, "ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಘಟನೆಗೆ ಕಾರಣ ಏನು ಎಂದು ತನಿಖೆ ಮಾಡಲಾಗುತ್ತಿದೆ" ಎಂದರು.