ಊಟಿ ಬಳಿ ಬಸ್ ಅಪಘಾತ, ಬೆಂಗಳೂರಿನ ನಾಲ್ವರು ಮೃತ
ಬೆಂಗಳೂರು, ಮೇ 27: ಉದಕಮಂಡಲಂ(ಊಟಿ ) ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ನಿವಾಸಿಗಳು ಬಸ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ 3 ಗಂಟೆ ಸುಮಾರಿಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಊಟಿಯಿಂದ ಮಡಿಕೇರಿ ಕಡೆಗೆ ಬಸ್ ಹಿಂತಿರುಗುವಾಗ ನೀಲ್ ಗಿರೀಸ್ ಜಿಲ್ಲೆಯ ಥವಲಮಲೈ ಬಳಿಯಲ್ಲಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್, ಪ್ರಪಾತಕ್ಕೆ ಉರುಳಿದೆ. ಸುಮಾರು 500 ಅಡಿ ಆಳದ ಪ್ರತಾಪಕ್ಕೆ ಬಿದ್ದ ಬಸ್ ಅಡಿಗೆ ಸಿಲುಕಿ ಇಬ್ಬರು ಮೃತಪಟ್ಟರೆ, ಮಿಕ್ಕ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟವೆಲ್ಲರೂ ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸಿಗಳು, ಪ್ರವಾಸಕ್ಕೆಂದು ಊಟಿಗೆ ಬಂದವರು, ಪ್ರವಾಸ ಮುಗಿಸಿಕೊಂಡು ಮಡಿಕೇರಿಗೆ ತೆರಳುತ್ತಿದ್ದರು. ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.