ಉತ್ತರಾಖಂಡದಲ್ಲಿ 42 ಜೀವ ಬಲಿ ಪಡೆದ ವರುಣ; ಯುಪಿ, ಬಂಗಾಳ, ಒಡಿಶಾದಲ್ಲೂ ಮಳೆ ಅಬ್ಬರ?
ಡೆಹ್ರಾಡೂನ್, ಅಕ್ಟೋಬರ್ 20: ಉತ್ತರಾಖಂಡದಲ್ಲಿ ವರುಣನ ರೌದ್ರನರ್ತನಕ್ಕೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಪ್ರವಾಹ, ಭೂಕುಸಿತ ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೂ ಸಾವಿನ ಮನೆ ಸೇರಿದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಮಂಗಳವಾರ ವರದಿಯಾದ 42 ಸಾವುನೋವುಗಳ ಪೈಕಿ ನೈನಿತಾಲ್ ನಲ್ಲಿ 28 ಮಂದಿ ಮೃತಪಟ್ಟಿದ್ದರೆ, ಅಲ್ಮೋರಾ ಮತ್ತು ಚಂಪಾವತ್ ತಲಾ ಆರು ಹಾಗೂ ಪಿಥೋರಘರ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರಾಣ ಬಿಟ್ಟಿದ್ದಾರೆ. ಉತ್ತರಾಖಂಡ ಸರ್ಕಾರವು ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ.
ಉತ್ತರಾಖಂಡ ಮಳೆ: ಮೃತರ ಸಂಖ್ಯೆ 34 ಕ್ಕೆ ಏರಿಕೆ, ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಸಿಎಂ
ಉತ್ತರಾಖಂಡಕ್ಕೆ ಆಗಮಿಸಿರುವ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಗಳು ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ರಾಜ್ಯದಲ್ಲಿ ಒಟ್ಟು 15 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದ್ದು, ಈವರೆಗೂ 300ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಮೂರು ಐಎಎಫ್ ಚಾಪರ್ಗಳು ರಾಜ್ಯಕ್ಕೆ ಆಗಮಿಸಿದ್ದು, ಈ ಪೈಕಿ ಎರಡನ್ನು ನೈನಿತಾಲ್ನಲ್ಲಿ ನಿಯೋಜಿಸಲಾಗಿದೆ.
ರಾಜ್ಯದಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ವ್ಯತ್ಯಯ
ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ನೈನಿತಾಲ್ ಸೇರಿದಂತೆ ಉತ್ತರಾಖಂಡದ ಇತರ ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆ ಗಿರಿಧಾಮಕ್ಕೆ ಹೋಗುವ ಮೂರು ರಸ್ತೆಗಳ ಸಂಪರ್ಕ ಕಡಿತಗೊಳಿಸಲಾಗಿದೆ. ರಾಜ್ಯದಲ್ಲಿ ಮಂಗಳವಾರವೂ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.
ಉತ್ತರಾಖಂಡ ಪರಿಸ್ಥಿತಿ ಹೇಳುತ್ತಿರುವ ವೈರಲ್ ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಉತ್ತರಾಖಂಡದಲ್ಲಿ ಮಳೆ ಸೃಷ್ಟಿಸಿದ ಅವಾಂತರದ ಕಥೆಗಳನ್ನು ಹೇಳುವಂತಿವೆ. ಮಾಲ್, ರಸ್ತೆ, ಸೇತುವೆ ಹಾಗೂ ಬೋಟ್ ಕ್ಲಬ್ ಹೌಸ್ ಸಂಪೂರ್ಣ ಮುಳುಗಿರುವುದನ್ನು ಚಿತ್ರಗಳೇ ಸಾರಿ ಹೇಳುತ್ತಿವೆ. ನೈನಿತಾಲ್ನ ರಾಮಘರ್ ರೆಸಾರ್ಟ್ನಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಿ ಟ್ರ್ಯಾಕ್ಟರ್ಗಳಲ್ಲಿ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಮಂಗಳವಾರ ಕಥ್ಗೊಡಮ್ ಮತ್ತು ನೈನಿತಾಲ್ನ ಲಾಲ್ಕುವಾನ್ ಮತ್ತು ಉಧಮ್ ಸಿಂಗ್ ನಗರದ ರುದ್ರಪುರದಲ್ಲಿ ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಹಳಿಗಳು ಸಹ ಮಳೆಯಿಂದ ಹಾನಿಗೊಳಗಾಗಿವೆ. ಈ ರೈಲ್ವೆ ಹಳಿಗಳನ್ನು ಸರಿಪಡಿಸಲು ಕನಿಷ್ಠ ನಾಲ್ಕೈದು ದಿನಗಳು ಬೇಕಾಗಬಹುದು ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಚಾರ್ಧಮ್ ಯಾತ್ರಾರ್ಥಿಗಳಿಗೆ ಮುಖ್ಯಮಂತ್ರಿ ಮನವಿ
ಉತ್ತರಾಖಂಡದಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಸುಧಾರಿಸುವವರೆಗೂ ಚಾರ್ಧಮ್ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳು ತಾವು ಇರುವ ಸ್ಥಳದಲ್ಲಿಯೇ ಇರಬೇಕೆಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ. ಗುಜರಾತ್ನ ಸುಮಾರು 100 ಯಾತ್ರಿಕರು ಉತ್ತರಾಖಂಡದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗುಜರಾತ್ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಜೊತೆ ಮಂಗಳವಾರ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಕೇರಳದ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಕೇರಳದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಿಂದಾ ಹಾನಿಯಾಗಿದ್ದು, ನಾಲ್ಕು ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಕೇರಳದಲ್ಲಿ ಒಟ್ಟು 78 ಅಣೆಕಟ್ಟುಗಳಿದ್ದು, ಪ್ರಮುಖ ಅಣೆಕಟ್ಟುಗಳಾದ ಇಡುಕ್ಕಿ, ಇಡಮಲಯಾರ್, ಪಂಬ ಮತ್ತು ಕಕ್ಕಿಗಳನ್ನು ತೆರೆಯಲು ತಜ್ಞರ ಸಮಿತಿಯು ನಿರ್ಧರಿಸಿತು. ರಾಜ್ಯಾದ್ಯಂತ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರನ್ನು ಎಚ್ಚರಿಸಲು ಮತ್ತು ಅವರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಸ್ಥಳಾಂತರಿಸಲಾದ ಜನರಿಗೆ ಅಗತ್ಯ ಆಹಾರ ಪೂರೈಕೆಯಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ.
ಬುಧವಾರ ಕೇರಳದ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಮಂಗಳವಾರ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳೂ ಈ ಪಟ್ಟಿಯಲ್ಲಿ ಸೇರಿವೆ.
ಬಂಗಾಳ, ಯುಪಿ, ಒಡಿಶಾಗಳಲ್ಲಿ ಮಳೆ ಮುಂದುವರಿಕೆ
ಉತ್ತರಾಖಂಡ್ ಹೊರತುಪಡಿಸಿ, ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ ಮತ್ತು ತಮಿಳುನಾಡಿನ ಕೆಲವೆಡೆ ಮಂಗಳವಾರ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರದವರೆಗೆ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ತೀವ್ರ ಮಳೆಯಾಗುವ ಮುನ್ಸೂಚನೆ ನೀಡಿದೆ. ಅದೇ ರೀತಿ, ದಕ್ಷಿಣ ಪೆನಿನ್ಸುಲರ್ ಪ್ರದೇಶವೂ ಮುಂದಿನ ನಾಲ್ಕು-ಐದು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಉತ್ತರ ಪ್ರದೇಶದ ಫತೇಪುರದಲ್ಲಿ ಇಬ್ಬರು ಮತ್ತು ಬರೇಲಿಯಲ್ಲಿ ಇಬ್ಬರು ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. ಈ ಮಧ್ಯೆ ಗುರುವಾರ ಬೆಳಿಗ್ಗೆ ತನಕ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಬುಧವಾರ ಬೆಳಿಗ್ಗೆ ತನಕ ಡಾರ್ಜಿಲಿಂಗ್, ಕಲಿಂಪಾಂಗ್ ಮತ್ತು ಅಲಿಪುರ್ದುವಾರ್ ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಒಡಿಶಾದಲ್ಲಿ ಬುಧವಾರವೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಬಂಗಾಳ ಕೊಲ್ಲಿಗೆ ತೆರಳದಂತೆ ಸೂಚಿಸಿದ್ದು, ಆ ಕುರಿತು ಸಲಹೆಗಳನ್ನು ನೀಡಲಾಗಿದೆ.