ಅತ್ಯಾಚಾರ ಎಸಗಿದ ಮೇಲೆ ಸಂತ್ರಸ್ತೆಯೊಂದಿಗೆ ಅಸಾರಾಮ್ ಮಾತನಾಡಿದ್ದೇನು?
ಜೋಧಪುರ, ಏಪ್ರಿಲ್ 26: 'ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೂ ನನ್ನ ಕಾಲಿಗೆ ಬೀಳುತ್ತಾರೆ' ಹಾಗಂತ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ತಾನು ಅತ್ಯಾಚಾರ ಎಸಗಿದ ಮಹಿಳೆಗೆ ಹೇಳಿದ್ದನಂತೆ!
ಅತ್ಯಾಚಾರ ಆರೋಪದ ಮೇಲೆ ಜೈಲುಪಾಲಾಗಿದ್ದ ಅಸಾರಾಮ್ ಬಾಪುವನ್ನು ದೋಷಿ ಎಂದು ಪರಿಗಣಿಸಿದ ರಾಜಸ್ಥಾನದ ಜೋಧಪುರದ ಎಸ್ ಸಿ ಎಸ್ ಟಿ ನ್ಯಾಯಾಲಯ ನಿನ್ನೆ(ಏ.25)ಜೀವಾವಧಿ ಶಿಕ್ಷೆ ವಿಧಿಸಿದೆ.
ಬಾಪು ಅಲ್ಲ, 'ಅತ್ಯಾಚಾರಿ ಎನ್ನಿ': ಅಸಾರಾಮ್ ವಿರುದ್ಧ ಭುಗಿಲೆದ್ದ ಆಕ್ರೋಶ
ಅತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಅತ್ಯಾಚಾರ ಎಸಗಿದ ನಂತರ ಅಸಾರಾಮ್ ಬಾಪು ತನ್ನೊಂದಿಗೆ ಏನೆಲ್ಲ ಚರ್ಚಿಸಿದ್ದ ಎಂಬುದನ್ನು ಬಿಚ್ಚಿದ್ದಾಳೆ. ಆಕೆಯ ಬಳಿ ಅಸಾರಾಮ್ ಬಾಪು ಮಾತನಾಡಿದ್ದೇನು? ಆಕೆಯ ಬಾಯಲ್ಲೇ ಕೇಳಿ...
"ನನಗೆ ಚಾರ್ಟರ್ಡ್ ಅಕೌಂಟಂಟ್ ಆಗಬೇಕು ಎಂಬ ಆಸೆ ಇತ್ತು. ಆದರೆ ನೀನು ಸಿಎ ಮಾಡುವುದು ಬೇಡ. ಬಿಎಡ್ ಮಾಡು. ನನ್ನ ಗುರುಕುಲದಲ್ಲೇ ನಿನ್ನನ್ನು ಪ್ರಿನ್ಸಿಪಲ್ ಮಾಡುತ್ತೇನೆ." ಎಂದು ಅವರು ಹೇಳಿದ್ದರು.
"ಸಿಎ ಆಗಿ ಏನು ಮಾಡುತ್ತೀಯಾ? ಎಂತೆಂಥ ದೊಡ್ಡ ಆಫೀಸರ್ ಗಳೇ ನನ್ನ ಕಾಲಿಗೆ ಬೀಳುತ್ತಾರೆ. ನಾನು ನಿನ್ನನ್ನು ಲೈಂಗಿಕವಾಗಿ ಬಳಸಿಕೊಂಡ ವಿಷಯವನ್ನು ಯಾರಿಗೂ ತಿಳಿಸಬೇಡ ಎಂದು ಬೆದರಿಕೆ ಸಹ ಒಡ್ಡಿದ್ದ" ಎಂದು ಹೇಳಿಕೆ ನೀಡಿದ್ದಾಳೆ.
ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 16 ವರ್ಷದ ಈ ಯುವತಿ ಉತ್ತರ ಪ್ರದೇಶದ ಶಹಜಹಾನ್ ಪುರ ಮೂಲದವಳು. ಆಕೆ ಅಸಾರಾಮ್ ಗೆ ಸೇರಿದ ಹಾಸ್ಟೇಲ್ ನಲ್ಲೇ ವಾಸಿಸುತ್ತಿದ್ದಳು. ಆಕೆಯ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಅಸಾರಾಮ್ ನನ್ನು ಭೇಟಿ ಮಾಡುವಂತೆ ಪರಿಚಿತರು ಹೇಳಿದ್ದರಿಂದ ಅಸಾರಾಮ್ ನನ್ನು ಬೇಟಿಯಾಗಲು ಕುಟುಂಬ ಸಮೇತ ಹೋಗಿದ್ದಳು.
ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್
ಕುಟುಂಬದ ಇತರರಿಗೆ ಮಂತ್ರವೊಂದನ್ನು ಹೇಳಿಕೊಟ್ಟು ಬಾಲಕಿಯನ್ನು ಇಲ್ಲೇ ಬಿಟ್ಟು ಹೋಗುವಂತೆ ಹೇಳಿದ ಅಸಾರಾಮ್, ಆಕೆಯನ್ನು ತನ್ನ ಏಕಾಂತ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗೂ ಬಾಯಿಬಿಡಬೇಡವೆಂದು ಬೆದರಿಸಿದ್ದ. ಆದರೆ ಬಾಲಕಿ ತನ್ನ ತಾಯಿಗೆ ವಿಷಯ ತಿಳಿಸಿದ್ದರು. ನಂತರ ಕುಟುಂಬ ಈ ಕುರಿತು ಪೊಲೀಸರಿಗೆ ದೂರು ನೀಡಿತ್ತು.
ಬರೋಬ್ಬರಿ ಐದು ವರ್ಷಗಳ ವಿಚಾರಣೆಯ ನಂತರ ಇದೀಗ ಅಸಾರಾಮ್ ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ನೀಡಿರುವುದು ಕುಟುಂಬಕ್ಕೆ ಕೊಂಚ ಸಮಾಧಾನ ತಂದಿದೆ.