ಟೂಲ್ಕಿಟ್ ಪ್ರಕರಣ: ದಿಶಾ ರವಿಗೆ ಕೊನೆಗೂ ಜಾಮೀನು ಮಂಜೂರು
ನವದೆಹಲಿ, ಫೆಬ್ರವರಿ 23: ರೈತರ ಪ್ರತಿಭಟನೆ ಸಂದರ್ಭದಲ್ಲಿ ವಿವಾದ ಸೃಷ್ಟಿಸಿದ ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ದೆಹಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ದಿಶಾ ರವಿ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ಬಳಿಕ ತೀರ್ಪು ಕಾಯ್ದಿರಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಂಗಳವಾರ ಜಾಮೀನು ಮಂಜೂರು ಮಾಡಿದರು. ಇದರಿಂದ ಬಂಧಿತರಾಗಿ ಒಂಬತ್ತು ದಿನಗಳ ಬಳಿಕ ದಿಶಾ ರವಿಗೆ ಕೊಂಚ ನಿರಾಳತೆ ದೊರಕಿದಂತಾಗಿದೆ.
ತಲಾ ಒಂದು ಲಕ್ಷ ರೂ ಮೌಲ್ಯದ ಎರಡು ಶ್ಯೂರಿಟಿಗಳ ಆಧಾರದಲ್ಲಿ ಜಾಮೀನು ನೀಡಲಾಯಿತು. ದಿಶಾ ರವಿ ಅವರ ಪೊಲೀಸ್ ಬಂಧನದ ಅವಧಿ ಮಂಗಳವಾರ ಅಂತ್ಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪಟಿಯಾಲಾ ಹೌಸ್ನ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ್ದರು.
ಪೊಲೀಸರ ಅರ್ಜಿ ವಜಾ
ಆದರೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ದಿಶಾ ರವಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ, ಅವರನ್ನು ಇನ್ನೂ ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂಬ ದೆಹಲಿ ಪೊಲೀಸರ ಅರ್ಜಿಯನ್ನು ಸಿಎಂಎಂ ಪಂಕಜ್ ಶರ್ಮಾ ವಜಾಗೊಳಿಸಿದರು.
ಕೃಷಿ, ಪರಿಸರಕ್ಕೆ ಸೀಮಿತ
ದಿಶಾ ರವಿ ಪರ ಹಾಜರಿದ್ದ ವಕೀಲ ಸಿದ್ಧಾರ್ಥ್ ಅಗರವಾಲ್, ಖಲಿಸ್ತಾನ ಚಳವಳಿಗೂ ದಿಶಾಗೂ ಸಂಬಂಧವಿಲ್ಲ. ಅವರ ಉದ್ದೇಶ ಪರಿಸರ ರಕ್ಷಣೆ ಮತ್ತು ಕೃಷಿಗೆ ಮಾತ್ರವೇ ಸೀಮಿತವಾಗಿದೆ. ಇನ್ನಿಬ್ಬರು ಆರೋಪಿಗಳಾದ ನಿಕಿತಾ ಜಾಕೋಬ್ ಹಾಗೂ ಶಂತನು ಮುಲುಕ್ ಅವರಿಗೆ ಕಾಲಾವಕಾಶ ನೀಡಲು ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ದಿಶಾ ರವಿಗೂ ಜಾಮೀನು ನೀಡುವಂತೆ ಕೋರಿದರು.
ದೆಹಲಿ ತೊರೆಯುವುದಿಲ್ಲ
ಯಾವುದೇ ತನಿಖೆಗೂ ಅಡ್ಡಿಪಡಿಸುವುದಿಲ್ಲ ಮತ್ತು ದೆಹಲಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಅಗರವಾಲ್ ತಿಳಿಸಿದರು. ದಿಶಾ ವಿರುದ್ಧ ಯಾವುದೇ ದೇಶದ್ರೋಹ ಅಥವಾ ಹಿಂಸಾಚಾರಕ್ಕೆ ಪ್ರಚೋದನೆಯ ಪ್ರಕರಣವಿಲ್ಲ ಎಂದರು.
ಮೂವರೂ ಮುಖಾಮುಖಿಯಾಗಬೇಕು
ಗ್ರೆಟಾ ಥನ್ಬರ್ಗ್ ಜತೆಗೆ ಟೂಲ್ಕಿಟ್ಅನ್ನು ದಿಶಾ ಹಂಚಿಕೊಂಡಿದ್ದರು. ಆಕೆಯ ಟ್ವೀಟ್ ಈ ಎಲ್ಲ ಸಂಚುಗಳನ್ನು ಬಹಿರಂಗಪಡಿಸಿದೆ. ಆಕೆ ಪೊಲೀಸ್ ವಶದಲ್ಲಿದ್ದಾಗ ತನ್ನ ವಿರುದ್ಧದ ಆರೋಪಗಳ ಕುರಿತು ನಿಕಿತಾ ಹಾಗೂ ಶಂತನು ಮೇಲೆ ದೂಷಣೆ ಹೊರಿಸಿದ್ದರು. ಹೀಗಾಗಿ ಅವರಿಬ್ಬರೊಂದಿಗೆ ದಿಶಾರನ್ನು ಮುಖಾಮುಖಿಯನ್ನಾಗಿಸುವುದು ಅಗತ್ಯವಾಗಿದೆ ಎಂದು ಪೊಲೀಸರು ವಾದಿಸಿದರು.