ದಿಶಾ ರವಿ ಪ್ರಕರಣ: ದೆಹಲಿ ಪೊಲೀಸರು, ಮಾಧ್ಯಮಗಳಿಗೆ ಹೈಕೋರ್ಟ್ ಎಚ್ಚರಿಕೆ
ನವದೆಹಲಿ, ಫೆಬ್ರವರಿ 19: ರೈತರ ಪ್ರತಿಭಟನೆಯ ವೇಳೆ ವಿವಾದ ಸೃಷ್ಟಿಸಿರುವ ಟೂಲ್ಕಿಟ್ ಪ್ರಕರಣದ ಕುರಿತಾದ ತನಿಖೆಯ ದಿಕ್ಕು ತಪ್ಪದಂತೆ ವರದಿಗಾರಿಕೆ ವೇಳೆ ಸೂಕ್ತ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುದ್ದಿ ಮಾಧ್ಯಮಗಳ ಸಂಪಾದಕರಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಹಾಗೆಯೇ ಟೂಲ್ಕಿಟ್ ವಿವಾದದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಚಾರಣೆ ವೇಳೆ ತಮಗೆ ಸಂಬಂಧಿಸಿದ ಜನರು ಪೊಲಿಸರನ್ನು ದೂಷಿಸದಂತೆ ನೋಡಿಕೊಳ್ಳುವಂತೆ ನ್ಯಾಯಾಲಯ ದಿಶಾ ರವಿ ಅವರಿಗೆ ಸೂಚಿಸಿದೆ.
ಮಾಧ್ಯಮಗಳಿಗೆ ಮಾಹಿತಿ ಸೋರಿಕೆ: ದೆಹಲಿ ಪೊಲೀಸರ ವಿರುದ್ಧ ಕೋರ್ಟ್ ಮೊರೆ ಹೋದ ದಿಶಾ ರವಿ
ತಮ್ಮ ವಿಚಾರಣೆಯ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಲು ಮತ್ತು ತಮ್ಮ ಹಾಗೂ ಬೇರೆ ವ್ಯಕ್ತಿಗಳ ನಡುವೆ ನಡೆದ ಚಾಟಿಂಗ್ ಅನ್ನು ಬಹಿರಂಗಪಡಿಸುವ ಮೂಲಕ ಖಾಸಗಿತನಕ್ಕೆ ಧಕ್ಕೆ ತಂದ ಇಂಡಿಯಾ ಟುಡೆ, ಟೈಮ್ಸ್ ನೌ ಮತ್ತು ನ್ಯೂಸ್ 18 ಚಾನೆಲ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ದಿಶಾ ರವಿ ದೆಹಲಿ ಹೈಕೋರ್ಟ್ಗೆ ಮನವಿ ಮಾಡಿದ್ದರು.
ಪ್ರಸ್ತುತ ನಡೆಯುತ್ತಿರುವ ತನಿಖೆಯ ಬಗ್ಗೆ ಅರೆಬೆಂದ, ಊಹಾತ್ಮಕ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ' ಎಂದು ದಿಶಾ ರವಿ ಪರ ವಕೀಲ ಅಖಿಲ್ ಸಿಬಲ್ ಆರೋಪಿಸಿದರು.
ವಿರೋಧಾಭಾಸವಿದೆ
'ಪತ್ರಕರ್ತರಿಗೆ ತಮ್ಮ ಸುದ್ದಿಯ ಮೂಲವನ್ನು ಬಹಿರಂಗಪಡಿಸುವಂತೆ ಸೂಚಿಸಲು ಸಾಧ್ಯವಿಲ್ಲ. ಹಾಗೆಯೇ ಆ ಸುದ್ದಿ ಅಧಿಕೃತವೂ ಆಗಿರಬೇಕು. ದೆಹಲಿ ಪೊಲೀಸರು ತಾವು ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ ಮಾಧ್ಯಮ ವರದಿಗಳಲ್ಲಿ ವಿರೋಧಾಭಾಸವಿದೆ' ಎಂದು ಕೋರ್ಟ್ ಹೇಳಿತು.
ಸುದ್ದಿಗೋಷ್ಠಿ ನಡೆಸಲು ಅಡ್ಡಿಯಿಲ್ಲ
ತಾವು ಮಾಧ್ಯಮಗಳಿಗೆ ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಮತ್ತು ಮಾಡುವ ಉದ್ದೇಶ ಕೂಡ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿರುವ ದೆಹಲಿ ಪೊಲೀಸರು ಅದಕ್ಕೆ ಕಟ್ಟುನಿಟ್ಟಾಗಿ ಬದ್ಧರಾಗಿರಬೇಕು. ದೆಹಲಿ ಒಒಲೀಸರು ಕಾನೂನಿನ ಪ್ರಕಾರ ಸುದ್ದಿಗೋಷ್ಠಿ ನಡೆಸಬಹುದು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಆದೇಶಿಸಿದರು.
ಟೂಲ್ಕಿಟ್ ಪ್ರಕರಣ: ನಿಕಿತಾ ಜೇಕಬ್ಗೆ ಮೂರು ವಾರಗಳ ನಿರೀಕ್ಷಣಾ ಜಾಮೀನು
ತನಿಖೆಗೆ ತೊಂದರೆಯಾಗದಂತೆ ನಿಯಂತ್ರಿಸಿ
ಸುದ್ದಿಯ ಮೂಲವನ್ನು ಕೇಳದೇ ಇದ್ದರೂ ಮಾಧ್ಯಮಗಳು ಪರಿಶೀಲಿಸಿದ ಮತ್ತು ಅಧಿಕೃತ ಮೂಲಗಳಿಂದ ಸುದ್ದಿ ಪಡೆದು ಪ್ರಸಾರ ಮಾಡಬೇಕು. ಪರಿಶೀಲಿಸಿದ ಮಾಹಿತಿಗಳನ್ನು ಮಾತ್ರ ಪ್ರಸಾರ ಮಾಡುವುದನ್ನು ಸಂಪಾದಕರು ಖಾತರಿಪಡಿಸಿಕೊಳ್ಳಬೇಕು. ತನಿಖೆಗೆ ಯಾವುದೇ ರೀತಿ ಅಡ್ಡಿಯಾಗದಂತೆ ಸೂಕ್ತ ಸಂಪಾದಕೀಯ ನಿಯಂತ್ರಣ ಪಾಲಿಸಬೇಕು ಎಂದು ಸೂಚಿಸಿದರು.
ದಿಶಾ ರವಿ ಜವಾಬ್ದಾರಿ
ಒಮ್ಮೆ ಆರೋಪಪಟ್ಟಿ ಸಲ್ಲಿಸಿದ ಬಳಿಕ ಅದರ ವರದಿಗಾರಿಕೆಯನ್ನು ಯಾವುದೇ ರೀತಿ ತಡೆಯಲು ಆಗುವುದಿಲ್ಲ. ಅರ್ಜಿದಾರರು (ದಿಶಾ ರವಿ) ತಮಗೆ ಸಂಬಂಧಿಸಿದ ಜನರು ಯಾವುದೇ ಅನಗತ್ಯ ಅಥವಾ ದೂಷಣೆಯ ಸಂದೇಶಗಳನ್ನು ರವಾನಿಸುವುದರಲ್ಲಿ ತೊಡಗದಂತೆ ನೋಡಿಕೊಳ್ಳಬೇಕು ಎಂದ ನ್ಯಾಯಮೂರ್ತಿ, ಈಗಾಗಲೇ ಪ್ರಸಾರವಾಗಿರುವ ವಿಷಯಗಳನ್ನು ತೆಗೆದುಹಾಕುವುದರ ಬಗ್ಗೆ ಮುಂದಿನ ಹಂತದಲ್ಲಿ ಪರಿಗಣಿಸುವುದಾಗಿ ತಿಳಿಸಿದರು.