ಮಾಧ್ಯಮಗಳಿಗೆ ಮಾಹಿತಿ ಸೋರಿಕೆ: ದೆಹಲಿ ಪೊಲೀಸರ ವಿರುದ್ಧ ಕೋರ್ಟ್ ಮೊರೆ ಹೋದ ದಿಶಾ ರವಿ
ನವದೆಹಲಿ, ಫೆಬ್ರವರಿ 18: ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ, ತಮ್ಮ ವಿರುದ್ಧ ದಾಖಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರನ್ನು ನಿರ್ಬಂಧಿಸುವಂತೆ ಕೋರಿ ಗುರುವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದಿಶಾ ರವಿ ಅವರನ್ನು ಪ್ರತಿನಿಧಿಸುತ್ತಿರುವ ವಕೀಲರಲ್ಲಿ ಒಬ್ಬರಾದ ಅಭಿನವ್ ಸೆಖ್ರಿ, ಹೈಕೋರ್ಟ್ನಲ್ಲಿ ಈ ವಿಚಾರವು ವಿಚಾರಣೆಗೆ ನಿಗದಿಯಾಗಲಿದೆ. ಬಳಿಕವಷ್ಟೇ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಟೂಲ್ಕಿಟ್ ಪ್ರಕರಣ: ನಿಕಿತಾ ಜೇಕಬ್ಗೆ ಮೂರು ವಾರಗಳ ನಿರೀಕ್ಷಣಾ ಜಾಮೀನು
ವಿಚಾರಣೆ ಪೂರ್ಣಗೊಳ್ಳುವವರೆಗೂ ದಿಶಾ ಹಾಗೂ ಇತರೆ ಮೂರನೇ ವ್ಯಕ್ತಿಗಳ ನಡುವೆ ನಡೆದ ವಾಟ್ಸಾಪ್ ಚಾಟ್ ಸೇರಿದಂತೆ ಯಾವುದೇ ಆರೋಪಿತ ಖಾಸಗಿ ಮಾತುಕತೆಗಳ ಅಂಶಗಳು ಅಥವಾ ವಿಷಯಗಳನ್ನು ಕೂಡ ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಸಹ ಅರ್ಜಿಯಲ್ಲಿ ಕೋರಲಾಗಿದೆ.
ಕೇಬಲ್ ಟಿವಿ ನೆಟ್ವರ್ಕ್ ನಿಯಮ ಉಲ್ಲಂಘನೆ
ತಮ್ಮ ಹಾಗೂ ಮೂರನೇ ವ್ಯಕ್ತಿಗಳ ನಡುವಿನ ಖಾಸಗಿ ಚಾಟ್ಗಳಲ್ಲಿನ ಅಂಶಗಳನ್ನು ಪ್ರಸಾರ ಮಾಡುವ ಮೂಲಕ ಕೇಬಲ್ ಟಿವಿ ನೆಟ್ವರ್ಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯೂಸ್ 18, ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ಟೆಲಿವಿಷನ್ ಚಾನೆಲ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಿ
ಹಾಗೆಯೇ ನ್ಯಾಯೋಚಿತ ವಿಚಾರಣಾ ಹಕ್ಕು ಮತ್ತು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುವಂತೆ ತನ್ನ ಮೇಲೆ ವರದಿಗಳನ್ನು ಪ್ರಕಟಿಸಿದ್ದಕ್ಕೆ ಈ ಮೂರು ವಾಹಿನಿಗಳು ಹಾಗೂ ಇತರೆ ಖಾಸಗಿ ಸುದ್ದಿ ಪ್ರಸಾರ ವಾಹಿನಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ದೇಶನ ನೀಡುವಂತೆ ಅವರು ಬಯಸಿದ್ದಾರೆ.
ವಾಟ್ಸಾಪ್ ಗ್ರೂಪ್ ಸೃಷ್ಟಿಸಿದ್ದೇ ದಿಶಾ ರವಿ, ಖಲಿಸ್ತಾನ ಪರ ಪಿಜೆಎಫ್ ಸೇರಿಕೊಂಡಿದ್ದು ಆಮೇಲೆ
ಕಾನೂನುಬಾಹಿರ ಸೋರಿಕೆ
'ತನಿಖಾ ವಿಚಾರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದು ಕಾನೂನು ಬಾಹಿರ, ಖಾಸಗಿತನದ ಹಕ್ಕು ಮತ್ತು ಪ್ರತಿಷ್ಠೆಯ ಉಲ್ಲಂಘನೆಯಾಗಿದೆ. ಮುಗ್ಧತೆಯ ಕಲ್ಪನೆಗಳನ್ನು ನಾಶಪಡಿಸುವ ಮೂಲಕ ನ್ಯಾಯೋಚಿತ ವಿಚಾರಣೆಯ ಹಕ್ಕಿನ ಮೇಲೆ ಪೂರ್ವಗ್ರಹದ ಪರಿಣಾಮ ಬೀರುತ್ತದೆ. ದೆಹಲಿ ಪೊಲೀಸರ ಕ್ರಮಗಳು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ' ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಕೆಎಸ್ ಪುಟ್ಟಸ್ವಾಮಿ Vs ಭಾರತ ಸರ್ಕಾರ
'ಫೋನ್ ಮೂಲಕ ನಡೆಯುವ ಮಾತುಕತೆಗಳು ಬಹಳ ಆತ್ಮೀಯ ಮತ್ತು ಗೋಪ್ಯ ಸ್ವಭಾವದ್ದಾಗಿರುತ್ತವೆ. ಅವುಗಳನ್ನು ಭಾರತ ಸಂವಿಧಾನದ 21ನೇ ವಿಧಿಯಲ್ಲಿನ ವ್ಯಕ್ತಿಗಳ ಖಾಸಗಿತನದ ಮೂಲಭೂತ ಹಕ್ಕಿನಡಿ ರಕ್ಷಿಸಬೇಕಾಗುತ್ತದೆ ಎಂದು ಕೆಎಸ್ ಪುಟ್ಟಸ್ವಾಮಿ Vs ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ 9 ನ್ಯಾಯಮೂರ್ತಿಗಳ ಪೀಠ ಹೇಳಿದೆ' ಎಂಬುದನ್ನು ಉಲ್ಲೇಖಿಸಲಾಗಿದೆ.