ಮೋದಿ ಸರ್ಕಾರ್ 2.0: ಹೆದ್ದಾರಿ 'ಟೋಲ್' ವ್ಯವಸ್ಥೆಯಲ್ಲಿ ನೋ 'ಚೇಂಜ್'
ನವದೆಹಲಿ, ಜುಲೈ 16: 'ಒಂದು ದೇಶ ಒಂದು ಟೋಲ್' ಎಂಬ ವ್ಯವಸ್ಥೆ ಜಾರಿಗೆ ಬರಬಹುದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟದೇ ಮುಂದೆ ಜೂಮ್ ಅಂಥ ಸಾಗಬಹುದು ಎಂಬೆಲ್ಲ ಕನಸು ಕಂಡವರಿಗೆ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ(ಜುಲೈ 16) ಲೋಕಸಭೆಯಲ್ಲಿ ನಿರಾಶೆ ಮೂಡಿಸಿದ್ದಾರೆ. ಹಾಲಿ ಟೋಲ್ ಕಟ್ಟುವ ವ್ಯವಸ್ಥೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಉತ್ತಮ ಮೂಲಸೌಕರ್ಯ ಬೇಕೆಂದರೆ ಟೋಲ್ ಕಟ್ಟಲೇಬೇಕು ಎಂದಿದ್ದಾರೆ.
"ಟೋಲ್ ವ್ಯವಸ್ಥೆಗೆ ಕೊನೆ ಎಂಬುದಿಲ್ಲ, ಕಾಲದಿಂದ ಕಾಲಕ್ಕೆ ಬದಲಾಗಬಹುದು, ಟೋಲ್ ವ್ಯವಸ್ಥೆ ನನ್ನ ಕಲ್ಪನೆಯ ಕೂಸು, ನಿಮಗೆ ಉತ್ತಮ ಸೇವೆ, ಸೌಕರ್ಯ ಬೇಕಾದರೆ, ಹಣ ಪಾವತಿ ಪಡೆದುಕೊಳ್ಳಿ, ಸರ್ಕಾರದ ಬಳಿ ಹಣವಿಲ್ಲ, ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾಕಷ್ಟು ಹಣ ವ್ಯಯಿಸಲಾಗಿದೆ" ಎಂದು ಗಡ್ಕರಿ ಅವರು ಲೋಕಸಭೆಯಲ್ಲಿ ಚರ್ಚೆ ವೇಳೆ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಬೂತ್ಗಳು ಬಂದ್ ಆಗುತ್ತಾ?
"ಪ್ರತಿ ವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತರಾಗುತ್ತಿದ್ದಾರೆ, ಭಯೋತ್ಪಾದನಾ ದಾಳಿಯಲ್ಲಿ ಸಾಯುವವರಿಗಿಂತಲೂ ಈ ಸಂಖ್ಯೆ ಅಧಿಕವಾಗಿದೆ. ಭಾರತ್ 6ನೇ ಹಂತದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಏಪ್ರಿಲ್ 2020ರ ವೇಳೆಗೆ ಜಾರಿಗೆ ತರಲಾಗುವುದು, ಎಲೆಕ್ಟ್ರಿಕ್ ಹಾಗೂ ಜೈವಿಕ- ಇಂಧನ ವಾಹನಗಳು ಹೆಚ್ಚಾಗಿ ರಸ್ತೆಗಿಳಿಯಲಿವೆ, ಎಥಾನಲ್ ಇಂಧನ ಬಳಕೆ ರೈತರಿಗೂ ನೆರವಾಗಲಿದೆ' ಎಂದು ಹೇಳಿದರು.
'ಭಾರತ್ ಮಾಲಾ ಯೋಜನೆಯಡಿಯಲ್ಲಿ 65 ಸಾವಿರ ಕಿಲೋಮೀಟರ್ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ. ವಿಶ್ವ ದರ್ಜೆಯ ಸಾರಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರವು ಬದ್ಧವಾಗಿದ್ದು, 11 ಲಕ್ಷ ಕೋಟಿ ರು ಮೌಲ್ಯದ ಯೋಜನೆಗಳನ್ನು ಕಳೆದ ಐದು ವರ್ಷಗಳಲ್ಲಿ ಇಲಾಖೆ ಕೈಗೆತ್ತಿಕೊಂಡಿತ್ತು. ಈ ಬಾರಿ 5000 ಕೋಟಿ ರು ಹೆಚ್ಚುವರಿ ಅನುದಾನ ಬಜೆಟ್ ನಲ್ಲಿ ಸಿಕ್ಕಿದೆ, ಆದರೆ, ಇಲಾಖೆಗೆ 2019-20ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನವನ್ನು ನಿರೀಕ್ಷಿಸಲಾಗಿದೆ', ಎಂದರು.