ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕದ ದರ ಹೆಚ್ಚಳ?: ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ
ನವದೆಹಲಿ, ಆಗಸ್ಟ್ 24: ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಓಡಾಟ ನಡೆಸುತ್ತಿರುವ ವಾಹನ ಸವಾರರ ಜೇಬಿಗೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಸುಂಕ ವಿಧಿಸಲಾಗುತ್ತಿದೆ. ಈ ಟೋಲ್ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಆದರೆ ಈ ಬಾರಿಯ ಸುಂಕ ಹೆಚ್ಚಳ ಪ್ರಸ್ತಾಪದ ಹಿಂದೆ ಮಹತ್ವದ ಸದುದ್ದೇಶವೂ ಇದೆ.
ಮೋಟಾರು ವಾಹನ ಕಾಯ್ದೆಯನ್ನು ಕಳೆದ ವರ್ಷ ಉನ್ನತೀಕರಿಸಲಾಗಿತ್ತು. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದ ಸಂದರ್ಭದಲ್ಲಿ, ರಸ್ತೆ ಅಪಘಾತಗಳಲ್ಲಿ ಬಲಿಯಾದವರು ಮತ್ತು ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಸವಲತ್ತು ಒದಗಿಸುವ ನಿಯಮವನ್ನೂ ಸೇರಿಸಲಾಗಿತ್ತು. ಆದರೆ ಈ ಸೌಲಭ್ಯ ಜಾರಿಗೆ ತರುವುದು ಸುಲಭವಾಗಿಲ್ಲ. ಏಕೆಂದರೆ ದೇಶದಲ್ಲಿ ದಿನನಿತ್ಯ ಲೆಕ್ಕವಿಲ್ಲದಷ್ಟು ರಸ್ತೆ ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲರ ಚಿಕಿತ್ಸೆಗೆ ಭಾರಿ ಪ್ರಮಾಣದ ಹಣದ ಅಗತ್ಯ ಬೀಳುತ್ತದೆ.
ಬೆಂಗಳೂರು-ಹಾಸನ ಹೆದ್ದಾರಿ ಟೋಲ್ ಶುಲ್ಕ ಏರಿಕೆ
ಹೀಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದ್ದು, ಅಪಘಾತಕ್ಕೆ ಬಲಿಯಾಗುವ ಮತ್ತು ಗಾಯಗೊಳ್ಳುವವರ ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕೆ ಬೇಕಾದ ಹಣವನ್ನು ವಾಹನ ಸವಾರರಿಂದಲೇ ಸಂಗ್ರಹಿಸಲು ಉದ್ದೇಶಿಸಿದೆ. ಮುಂದೆ ಓದಿ?
ಸುಂಕದ ದರ ಹೆಚ್ಚಳ
ಅಪಘಾತದ ಬಲಿಪಶುಗಳ ಚಿಕಿತ್ಸೆಗೆ ಬೇಕಾದ ಅಗತ್ಯ ನಿಧಿಯನ್ನು ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕದ ದರವನ್ನು ಹೆಚ್ಚಳ ಮಾಡುವ ಕ್ರಮವನ್ನು ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಂದಾಜು 2,000 ಕೋಟಿ ರೂ ಅಗತ್ಯ
ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಹಿಟ್ ಆಂಡ್ ರನ್ ಪ್ರಕರಣಗಳು ಸೇರಿದಂತೆ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಜನರ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲು ಎಷ್ಟು ಮೊತ್ತದ ನಿಧಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂಬ ಲೆಕ್ಕಾಚಾರವನ್ನು ಹಾಕುವ ಕೆಲಸ ಮಾಡುತ್ತಿದೆ. ಆದರೆ ಈ ಯೀಜನೆ ಜಾರಿಗೊಳಿಸಲು ವರ್ಷಕ್ಕೆ ಸುಮಾರು 2,000 ಕೋಟಿ ರೂ ಹಣಕಾಸಿನ ಅಗತ್ಯ ಬೀಳಬಹುದು ಎಂದು ಸರ್ಕಾರ ಅಂದಾಜಿಸಿದೆ.
ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ
ವಿವಿಧ ಆಯ್ಕೆಗಳ ಪರಿಶೀಲನೆ
ಅಪಘಾತದಲ್ಲಿ ಗಾಯಗೊಂಡ ಜನರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಬೇಕಾದ ನಿಧಿ ಸ್ಥಾಪನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಿವಿಧ ಆಯ್ಕೆಗಳನ್ನು ಪರಿಶೀಲನೆ ನಡೆಸಿದೆ. ಆದರೆ ಪ್ರಸ್ತುತ ಲಭ್ಯವಿರುವ ಅವಕಾಶಗಳಲ್ಲಿ ಸುಂಕದ ಮೊತ್ತದ ಹೆಚ್ಚಳ ಹೆಚ್ಚು ಸೂಕ್ತವಾಗಿದೆ ಎಂದು ತೀರ್ಮಾನಿಸಿದೆ ಎನ್ನಲಾಗಿದೆ.
ಜಿಐಸಿಯಿಂದ ಪರಿಹಾರ
ಮೋಟಾರು ವಾಹನ ಕಾಯ್ದೆಗೆ ಕಳೆದ ವರ್ಷ ತಿದ್ದುಪಡಿ ತಂದು ಅನೇಕ ಬದಲಾವಣೆಗಳನ್ನು ಮಾಡಲಾಗಿತ್ತು. ಅದರಲ್ಲಿ ನಿಯಮ ಉಲ್ಲಂಘನೆಗೆ ದಂಡದ ದರದ ಹೆಚ್ಚಳವೂ ಸೇರಿತ್ತು. ಜತೆಗೆ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ ಪರಿಹಾರ ನೀಡುವಂತೆ ತಿದ್ದುಪಡಿ ಮಾಡಲಾಗಿತ್ತು. ಸಚಿವಾಲಯವು ಮೋಟಾರು ವಾಹನ ಪರಿಹಾರ ನಿಧಿ ಸ್ಥಾಪಿಸಬೇಕಿದ್ದು, ಜನರಲ್ ಇನ್ಶೂರೆನ್ಸ್ ಕಂಪೆನಿ (ಜಿಐಸಿ) ಈ ನಿಧಿಗೆ ಅನುದಾನ ಸಂಗ್ರಹಿಸಬೇಕಿದೆ. ಅಂದರೆ ಹಿಟ್ ಆಂಡ್ ರನ್ ಮತ್ತು ವಿಮೆ ಇರುವ ವಾಹನಗಳ ಅಪಘಾತಗಳಲ್ಲಿ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಿಐಸಿ ಭರಿಸಬೇಕಾಗುತ್ತದೆ. ವಿಮೆ ಇಲ್ಲದ ವಾಹನಗಳ ಅಪಘಾತಗಳ ವೆಚ್ಚವನ್ನು ಸರ್ಕಾರ ಭರಿಸಲಿದೆ.