ಅಭಿವೃದ್ಧಿಯ ಜನಾಂದೋಲನ ಬೇಕಾಗಿದೆ: ಲಂಡನ್ ನಲ್ಲಿ ಮೋದಿ
ಲಂಡನ್, ಏಪ್ರಿಲ್ 18: ನಗರದಲ್ಲಿ 'ಭಾರತ್ ಕೀ ಬಾತ್ ಸಬ್ ಕೇ ಸಾಥ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕಿಂದು ಅಭಿವೃದ್ಧಿಯ ಜನಾಂದೋಲನ ಬೇಕಾಗಿದೆ ಎಂದು ಹೇಳಿದ್ದಾರೆ.
ವೆಸ್ಟ್ ಮಿನಿಸ್ಟರ್ ನ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದ ಅವರು, "ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ವಿಶಿಷ್ಟವಾದುದನ್ನು ಸಾಧಿಸಿ ತೋರಿಸಿದರು. ಹೋರಾಟವನ್ನು ಅವರು ಜನಾಂದೋಲನವಾಗಿ ಬದಲಾಯಿಸಿದರು. ನೀವು ಏನೇ ಮಾಡುತ್ತಿರಿ ಭಾರತದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿ ಎಂದು ಅವರು ಪ್ರತಿಯೊಬ್ಬರಿಗೆ ಕರೆ ನೀಡಿದರು. ಅದೇ ಮಾದರಿಯಲ್ಲಿ ಅಭಿವೃದ್ಧಿಯನ್ನು ಜನಾಂದೋಲನವಾಗಿ ರೂಪಿಗೊಳಿಸುವುದು ಈ ಕಾಲದ ತುರ್ತು ಅಗತ್ಯವಾಗಿದೆ ಎಂದವರು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಪ್ರಜಾಪ್ರಭುತ್ವದಲ್ಲಿ ಜನರು ದೇವರಿಗೆ ಸಮಾನ. ಅವರು ಮನಸ್ಸು ಮಾಡಿದರೆ ಚಹಾ ಮಾರುವವರೊಬ್ಬರು ಅವರ ಪ್ರತಿನಿಧಿಯಾಗಬಹುದು ಮತ್ತು ಲಂಡನ್ ಅರಮನೆಯಲ್ಲಿ ಕೈ ಕುಲುಕಬಹುದು," ಎಂದು ಬಣ್ಣಿಸಿದ್ದಾರೆ.
"ಅಸಹನೆ ಎನ್ನುವುದ ತಪ್ಪಲ್ಲ. ಸೈಕಲ್ ಇರುವ ವ್ಯಕ್ತಿ ಸ್ಕೂಟರ್ ಗಾಗಿ ಆಸೆ ಪಡುತ್ತಾನೆ. ಸ್ಕೂಟರ್ ಇದ್ದರೆ ಕಾರು ಬೇಕೆಂದು ಬಯಸುತ್ತಾನೆ. ಬಯಕೆ ಎನ್ನುವುದು ಸ್ವಾಭಾವಿಕ. ಭಾರತ ಈಗೀಗ ಹೆಚ್ಚು ಮಹತ್ವಾಕಾಂಕ್ಷಿಯಾಗಿದೆ," ಎಂದು ಹೇಳಿದ ಅವರು, "ಜನರು ನಮ್ಮಿಂದ ಹೆಚ್ಚಿನದನ್ನು ಬಯಸುತ್ತಿದ್ದಾರೆ. ಕಾರಣ ಅವರ ಬೇಡಿಕೆಗಳನ್ನು ನಾವು ಮಾತ್ರ ಈಡೇರಿಸಬಲ್ಲೆವು. ಜನರು ಏನನ್ನಾದರೂ ಹೇಳಿದಾಗ ಸರ್ಕಾರವು ಅದನ್ನು ಕೇಳಿಸಿಕೊಳ್ಳುತ್ತದೆ ಮತ್ತು ಅದನ್ನು ಮಾಡುತ್ತದೆ ಎಂದು ಜನರು ತಿಳಿದಿದ್ದಾರೆ," ಎಂದಿದ್ದಾರೆ.
ಸಾಮಾನ್ಯ ಮನುಷ್ಯರಂತೆಯೇ ನಾನೂ ಕೂಡ. ಸಾಮಾನ್ಯ ಜನರಂತೆ ನನ್ನಲ್ಲೂ ನ್ಯೂನ್ಯತೆಗಳಿರುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
"ದೇಶದ 18,000 ಗ್ರಾಮಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಿಲ್ಲ. ಹಲವು ಮಹಿಳೆಯರಿಗೆ ಇನ್ನೂ ಶೌಚಾಲಯದ ಸೌಲಭ್ಯ ಸಿಕ್ಕಿಲ್ಲ. ಈ ರೀತಿಯ ವಾಸ್ತವತೆಗಳು ನನಗೆ ನಿದ್ರಿಸಲು ಬಿಡುವುದಿಲ್ಲ. ಭಾರತದ ಬಡವರಲ್ಲಿ ಧನಾತ್ಮಕ ಬದಲಾವಣೆ ತರುವುದು ನನ್ನ ಗುರಿ," ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಅವರು, "ನಾನು ಬಡತನವನ್ನು ಅರ್ಥ ಮಾಡಿಕೊಳ್ಳಲು ಪುಸ್ತಕ ಓದುವುದಿಲ್ಲ. ನಾನು ಬಡತನದಲ್ಲೇ ಬೆಳೆದವನು. ಬಡವನಾಗಿರುವುದು ಮತ್ತು ಸಮಾಜದಲ್ಲಿ ತುಳಿತಕೊಳಗಾಗಿರುವುದರ ನೋವು ನನಗೆ ತಿಳಿದಿದೆ. ತುಳಿತಕೊಳ್ಳಗಾದವರ, ಬಡವರ ಪರವಾಗಿ ನಾನು ಕೆಲಸ ಮಾಡುತ್ತೇನೆ," ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
#WATCH Live from London: Prime Minister Narendra Modi at #BharatKiBaatSabkeSaath event at Central Hall Westminster. https://t.co/fqYzelOaHy
— ANI (@ANI) April 18, 2018