ದಿನದ ಪ್ರಮುಖ ಸುದ್ದಿ ಜೊತೆಗೆ ಪಟಪಟ ಪಿಟಿಐ ಫೋಟೋ ನೋಡಿ
ದೆಹಲಿ, ಡಿಸೆಂಬರ್.26: ದೇಶದ ಮಟ್ಟಿಗಷ್ಟೇ ಅಲ್ಲ. ಜಗತ್ತಿನ ಪಾಲಿಗೆ ಡಿಸೆಂಬರ್.26ರ ಗುರುವಾರ ವಿಶೇಷವಾಗಿತ್ತು. ಇಡೀ ವಿಶ್ವವೇ ಬಾಹ್ಯಾಕಾಶದಲ್ಲಿ ಸೃಷ್ಟಿಯಾಗುವ ಕೌತುಕವನ್ನು ಎದುರು ನೋಡುತ್ತಾ ನಿಂತಿದ್ದರು. ಜನರೆಲ್ಲ ಸೂರ್ಯನತ್ತ ದಿಟ್ಟಿಸಿ ನೋಡುತ್ತಿದ್ದರು. ಅದಕ್ಕೆ ಕಾರಣವಾಗಿದ್ದೇ ಕಂಕಣ ಸೂರ್ಯಗ್ರಹಣ.
ಬಾಹ್ಯಾಕಾಶದಲ್ಲಿ ನಡೆದ ಕೌತುಕವು ಎಲ್ಲರಲ್ಲೂ ಅಚ್ಚರಿ ಮೂಡಿಸುವಂತಿತ್ತು. ಬೆಳಗ್ಗೆ 8 ಗಂಟೆ 6 ನಿಮಿಷಕ್ಕೆ ಆರಂಭವಾದ ಸೂರ್ಯಗ್ರಹಣ 11 ಗಂಟೆ 11 ನಿಮಿಷಕ್ಕೆ ಅಂತ್ಯಗೊಂಡಿತು. ಅಪರೂಪಕ್ಕೊಮ್ಮೆ ಸಂಭವಿಸುವ ಕಂಕಣ ಸೂರ್ಯಗ್ರಹಣವನ್ನು ದೇಶಾದ್ಯಂತ ಜನರು ಕುತೂಹಲದಿಂದ ಕಣ್ತುಂಬಿಕೊಂಡರು.
2019ನೇ ವರ್ಷದ ಹಳೆಯ ನೆನಪುಗಳನ್ನು ಕೆದಕುತ್ತವೆ ಈ ಫೋಟೋಗಳು
ಗುರುವಾರ ನಡೆದ ಪ್ರಮುಖ ಘಟನೆಗಳನ್ನು ಚಿತ್ರರೂಪದಲ್ಲಿ ತೋರಿಸುವ ಹಾಗೂ ಅವರ ಬಗ್ಗೆ ಮಾಹಿತಿ ನೀಡುವುದೇ ಈ ವರದಿಯ ಮುಖ್ಯ ಉದ್ದೇಶ. ಪಿಟಿಐನಿಂದ ಆಯ್ದ ಚಿತ್ರಗಳು ಹಾಗೂ ಅವುಗಳ ಪ್ರಾಮುಖ್ಯತೆಯನ್ನು ಈ ವರದಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಕೇರಳದಲ್ಲಿ ಕಂಡ ಕಂಕಣ ಸೂರ್ಯ ಗ್ರಹಣ
ಗುರುವಾರ ದೇಶಾದ್ಯಂತ ಕಂಕಣ ಸೂರ್ಯಗ್ರಹಣ ಸಂಭವಿಸಿತು. ಸೂರ್ಯಗ್ರಹಣದ ಆರಂಭದಿಂದ ಅಂತ್ಯದವರೆಗೂ ಸೂರ್ಯನ ಚಿತ್ರ ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ಈ ಚಿತ್ರವು ಹೇಳುತ್ತದೆ. ಕೇರಳದ ಕೋಜಿಕೋಡ್ ಬಳಿ ವದಕರ್ ಬಳಿ ಸೆರೆ ಹಿಡಿದ ಸೂರ್ಯಗ್ರಹಣದ ಚಿತ್ರವಿದು.
ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡವಾದಲ ಮೋಡಗಳು
ದೇಶದ ಪ್ರಜೆಗಳಷ್ಟೇ ಅಲ್ಲ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಸೂರ್ಯಗ್ರಹಣ ವೀಕ್ಷಿಸಲು ಕಾತರರಾಗಿದ್ದರು. ಆದರೆ, ಮೋಡಗಳು ಅಡ್ಡಿಯಾಗಿದ್ದರಿಂದ ಗ್ರಹಣ ವೀಕ್ಷಿಸಲು ಆಗಲಿಲ್ಲ ಎಂದು ಟ್ವಿಟರ್ ನಲ್ಲಿ ಬರೆದುಕೊಂಡರು. ಇದಾಗಿ ಕೆಲ ಗಂಟೆಗಳಲ್ಲೇ ಈ ಚಿತ್ರ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿ ಬಿಟ್ಟಿತು. ಅದನ್ನು ಅರಿತ ಪ್ರಧಾನಮಂತ್ರಿ ನರೇಂದ್ರ ಮೋದಿ, ಎಷ್ಟಾದರೂ ಟ್ರೋಲ್ ಮಾಡಿಕೊಳ್ಳಿ ಎಂದು ಮತ್ತೊಂದು ಟ್ವೀಟ್ ಮಾಡಿದರು.
ಹೆತ್ತವಳ ಜೊತೆ ಸೂರ್ಯಗ್ರಹಣ ವೀಕ್ಷಿಸಿದ ಕಂದ
ಒಂದು ಕಡೆ ಪ್ರಧಾನಿ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದರು. ಇತ್ತ ಬಿಹಾರದ ಪಾಟ್ನಾದಲ್ಲಿ ಜನರು ಕೌತಕದಿಂದ ಆಕಾಶದತ್ತ ಮುಖ ಮಾಡಿ ನಿಂತಿದ್ದರು. ಈ ಪೈಕಿ ತನ್ನ ಪುಟ್ಟ ಕಂದನನ್ನು ಕಂಕಳಲ್ಲಿ ಎತ್ತುಕೊಂಡ ಹೆತ್ತಮ್ಮ ತನ್ನ ಜೊತೆಗೆ ಮಗುವಿಗೂ ಕೂಡಾ ಸೂರ್ಯಗ್ರಹಣದ ದರ್ಶನ ಮಾಡಿಸಿದರು.
ಮರಳಿನಲ್ಲಿ ಹೂತುಕೊಂಡ ವ್ಯಕ್ತಿ: ಕಾರಣ ಗೊತ್ತಾ?
ಕಂಕಣ ಸೂರ್ಯ ಗ್ರಹಣ ಸಂದರ್ಭದಲ್ಲಿ ಜನರ ಆಚರಣೆಗಳು ತೀರಾ ವಿಭಿನ್ನವಾಗಿರುತ್ತವೆ. ಇದು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ನೆರೆರಾಷ್ಟ್ರ ಪಾಕಿಸ್ತಾನದಲ್ಲೂ ಈ ನಂಬಿಕೆಗಳು ಇಂದಿಗೂ ಜೀವಂತವಾಗಿವೆ ಎಂಬುದಕ್ಕೆ ಈ ಚಿತ್ರವೇ ಜೀವಂತ ಉದಾಹರಣೆ. ಸೂರ್ಯಗ್ರಹಣದ ಸಮಯದಲ್ಲಿ ಕರಾಚಿ ಬಳಿ ವ್ಯಕ್ತಿಯೊಬ್ಬ ತನ್ನ ಕತ್ತನ್ನು ಹೊರತುಪಡಿಸಿ ತನ್ನ ಇಡೀ ದೇಹವನ್ನು ಮರಳಿನಿಂದ ಮುಚ್ಚಿಕೊಂಡಿದ್ದನು.
ಸಮುದ್ರ ತೀರ ನನೆಪಿಸಿದ ಕಹಿ ನೆನಪಿಗೆ 15 ವರ್ಷ
ಪುಟ್ಟ ಮಗುವನ್ನು ಎತ್ತಿಕೊಂಡು ಸಮುದ್ರದ ಅಳೆಗಳನ್ನು ವೀಕ್ಷಿಸುತ್ತಿರುವ ಈ ತಾಯಿಯ ಎದೆಯಲ್ಲಿ ಕಹಿ ನೆನಪಿನ ಅಲೆಗಳು ಅಪ್ಪಳಿಸುತ್ತಿದ್ದವು. ಸರಿಯಾಗಿ 15 ವರ್ಷಗಳ ಹಿಂದೆ ಸಂಭವಿಸಿದ ಕಹಿ ನೆನಪು ಅದು. ಡಿಸೆಂಬರ್.26ರ 2004ರಲ್ಲಿ ತಮಿಳುನಾಡಿನಲ್ಲಿ ರಕ್ಕಸ ಸುನಾಮಿ ಅಪ್ಪಳಿಸಿತ್ತು. ಪ್ರಕೃತಿ ವಿಕೋಪಕ್ಕೆ ಸಾವಿರ ಸಾವಿರ ಕುಟುಂಬಗಳು ಬೀದಿಗೆ ಬಂದಿದ್ದವು.