'ನದಿ ಜೋಡಣೆ': ವಾಜಪೇಯಿ ಕನಸು ನನಸಾಗಲು ಹೊರಟ ನರೇಂದ್ರ ಮೋದಿ
ನವದೆಹಲಿ, ಸೆಪ್ಟೆಂಬರ್ 1: ದೇಶದ ಬರ ಮತ್ತು ಪ್ರವಾಹವನ್ನು ನೀಗಿಸಲು ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳ ಜತೆ ಜೋಡಿಸುವ ಕನಸು ಕಂಡವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.
ಇದೀಗ ತಮ್ಮ ಗುರು ವಾಜಪೇಯಿ ಕನಸನ್ನು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ. ದೇಶದ ಬೃಹತ್ ನದಿಗಳನ್ನು 5.5 ಲಕ್ಷ ಕೋಟಿ ವೆಚ್ಚದಲ್ಲಿ ಜೋಡಿಸುವ ಯೋಜನೆ ಮೋದಿ ಮುಂದಿದೆ. ಈ ನದಿಗಳನ್ನು ಜೋಡಿಸಿದರೆ ಉತ್ತರ ಭಾರತದಲ್ಲಿ ಬರುವ ಭೀಕರ ಪ್ರವಾಹಗಳು ಇರುವುದಿಲ್ಲ ಮತ್ತು ದಕ್ಷಿಣ ಭಾರತದ ಬರ ಕೊನೆಗೊಳ್ಳುತ್ತದೆ ಎಂದು ಮೋದಿ ನಂಬಿದ್ದಾರೆ.
ಗಂಗಾ ನದಿಯೂ ಸೇರಿದಂತೆ ಸುಮಾರು 60 ನದಿಗಳನ್ನು ಜೋಡಿಸುವ ಯೋಜನೆ ಇದಾಗಿದೆ. ನದಿಗಳ ಜೋಡಣೆಯಿಂದ ಒಂದಷ್ಟು ವಿದ್ಯುತ್ ಉತ್ಪಾದನೆಯೂ ಸಾಧ್ಯವಿದೆ ಎಂದುಕೊಳ್ಳಲಾಗಿದೆ. ಈ ಮಹತ್ವದ ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ.
ಮಧ್ಯ ಭಾರತದಲ್ಲಿ ಬರುವ ಕರ್ಣಾವತಿ ನದಿಗೆ 22 ಕಿಲೋಮೀಟರ್ ಗಳ ಕಾಲುವೆ ನಿರ್ಮಿಸಿ ಅದರ ನೀರನ್ನು ಬೆಟ್ವಾ ನದಿಗೆ ಹರಿಸುವುದು ಮೊಲದ ಹಂತದ ಯೋಜನೆಯಾಗಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ಈ ನದಿಗಳು ಹರಿಯುವುದರಿಂದ ಎರಡೂ ರಾಜ್ಯಗಳ ಕೃಷಿಕರಿಗೆ ಅನುಕೂಲವಾಗಲಿದೆ ಎನ್ನುವುದು ಕೇಂದ್ರದ ಆಲೋಚನೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇರುವುದು ಮೋದಿಗೆ ಇನ್ನೊಂದು ಪ್ಲಸ್ ಪಾಯಿಂಟ್.
ಆದರೆ, ಈ ಯೋಜನೆಗೆ ಪರಿಸರವಾದಿಗಳು, ಹುಲಿ ಪ್ರೇಮಿಗಳು, ಹಿಂದಿನ ರಾಜಕುಟುಂಬಸ್ಥರು ವಿರೋಧಿಸಿದ್ದಾರೆ. ಕಾರಣ ಕರ್ಣಾವತಿ ನದಿ ಹುಲಿ ಸಂರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತದೆ. ಅಣೆಕಟ್ಟು ಕಟ್ಟಿದರೆ ಇಲ್ಲಿನ ಶೇಕಡಾ 6.5 ರಷ್ಟು ಕಾಡು ನಾಶವಾಗುತ್ತದೆ. 2,000 ಕುಟಂಬಗಳು ನಿರಾಶ್ರಿತವಾಗುತ್ತವೆ ಎನ್ನುವುದು ಇವರ ವಿರೋಧಕ್ಕೆ ಕಾರಣವಾಗಿದೆ.
ಈ ಯೋಜನೆ ಜಾರಿಗೆ ಪರಿಸರ, ಅರಣ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ಮಾನ್ಯತೆ ಪಡೆದುಕೊಳ್ಳಬೇಕಾಗಿದೆ. ಹೀಗಿದ್ದೂ ಕೆಲವೇ ವಾರಗಳಲ್ಲಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡುವ ಸಾಧ್ಯತೆಗಳಿದ್ದು, ಅಲ್ಲಿಂದ ಈ ಯೋಜನೆಯ ಕೆಲಸಗಳು ಆರಂಭವಾಗಲಿವೆ.
ಇದರ ಜತೆ ಪರ್-ತಾಪಿ ನದಿ ಮತ್ತು ನರ್ಮದಾ ನದಿ ಜೋಡಣೆ ಹಾಗೂ ದಮನ್ ಗಂಗಾ ನದಿಯನ್ನು ಪಿಣಜಾಲ್ ನದಿ ಜತೆ ಜೋಡಿಸುವ ಯೋಜನೆ ಬಗ್ಗೆಯೂ ಕೇಂದ್ರ ಗಮನಹರಿಸಿದೆ. ಇದು ಗುಜರಾತ್, ಮತ್ತು ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಯೋಜನೆಯಾಗಿದೆ.
ನದಿ ಜೋಡಣೆ ಪ್ರಸ್ತಾಪ 2002ರಲ್ಲೇ ಇತ್ತು. ಆಗ ರಾಜ್ಯ ಸರಕಾರಗಳು ಬೇರೆ ಪಕ್ಷಕ್ಕೆ ಸೇರಿದ್ದರಿಂದ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಈಗ ಎರಡೂ ಕಡೆಗಳಲ್ಲಿ ಬಿಜೆಪಿ ಸರಕಾರಗಳೇ ಇರುವುದರಿಂದ ಯೋಜನೆ ಜಾರಿ ಸುಲಭವಾಗಿದೆ.