'ಕೇಸರಿ ಅಲೆ' ತಡೆದು ನಿಲ್ಲಿಸಲು ಒಂದಾಗ್ತಾರಾ ಮಮತಾ, ಪಟ್ನಾಯಕ್?
ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಮಂಗಳವಾರ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಭೇಟಿಯಾಗಲಿದ್ದಾರೆ. ದೇಶದೆಲ್ಲೆಡೆ ಹರಡುತ್ತಿರುವ ಕೇಸರಿ ಅಲೆ ತಡೆಯಲು ಉಭಯ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ.
ಭುವನೇಶ್ವರ, ಏಪ್ರಿಲ್ 18: ರಾಷ್ಟ್ರಪತಿ ಸ್ಥಾನ ಗೆದ್ದುಕೊಳ್ಳಲು ಬಿಜೆಪಿಗೆ ಎಐಎಡಿಎಂಕೆ ಅಥವಾ ನವೀನ್ ಪಟ್ನಾಯಕ್ ರ ಬಿಜೆಡಿ (ಬಿಜು ಜನತಾ ದಳ) ಮತಗಳು ಅನಿವಾರ್ಯವಾಗಿವೆ.
ಈ ಹಿನ್ನಲೆಯಲ್ಲಿ ಇದೀಗ ಎಲ್ಲರ ಕಣ್ಣು ಮಂಗಳವಾರ ನಡೆಯಲಿರುವ ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಭೇಟಿಯತ್ತ ನೆಟ್ಟಿದೆ. ಉಭಯ ನಾಯಕರ ಭೇಟಿ ಮಂಗಳವಾರ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಿಗದಿಯಾಗಿದೆ.
ಈ ಭೇಟಿ ವೇಳೆ ದೇಶದೆಲ್ಲೆಡೆ ಹರಡುತ್ತಿರುವ ಕೇಸರಿ ಅಲೆ ತಡೆಯಲು ನವೀನ್ ಪಟ್ನಾಯಕ್ ಮತ್ತು ಮಮತಾ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಮತಾ ಬ್ಯಾನರ್ಜಿ ಒಡಿಶಾದಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದು ಅವರನ್ನು ಅತಿಥಿ ಎಂದು ಪರಿಗಣಿಸಲಾಗಿದೆ.['ನಾರದಾ ಸ್ಟಿಂಗ್': 13 ಟಿಎಂಸಿ ನಾಯಕರ ಮೇಲೆ ಸಿಬಿಐನಿಂದ ಎಫ್ಐಆರ್]
ಮಮತಾ ಮತ್ತು ನವೀನ್ ಭೇಟಿಯ ಉದ್ದೇಶವನ್ನು ಗೌಪ್ಯವಾಗಿಡಲಾಗಿದೆ. ಆದರೆ ಮೂಲಗಳ ಪ್ರಕಾರ ಕೇಸರಿ ಅಲೆ ತಡೆಯಲು ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚಿಸುವ ಬಗ್ಗೆ ಇಬ್ಬರೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇನ್ನು ಭೇಟಿ ವೇಳೆ ಭುವನೇಶ್ವರದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಮತಾ ಬ್ಯಾನರ್ಜಿ ಭಾಷಣವನ್ನೂ ಮಾಡಲಿದ್ದಾರೆ. ಈ ಭಾಷಣದಲ್ಲಿ 2019ರಲ್ಲಿ ಬಿಜೆಪಿಗೆ ಮತ ನೀಡಬೇಡಿ ಎಂದು ಅವರು ಒತ್ತಾಯಿಸುವ ಸಾಧ್ಯತೆ ಇದೆ.[ಕಾಶ್ಮೀರದಲ್ಲಿನ್ನು ಸೇನೆಯಿಂದ ಪ್ಲಾಸ್ಟಿಕ್ ಗುಂಡುಗಳ ಬಳಕೆ]
ಬಿಜೆಪಿಗೆ ತನ್ನ ಆಯ್ಕೆಯ ರಾಷ್ಟ್ರಪತಿಯನ್ನು ಆರಿಸಲು ಸದ್ಯಕ್ಕೆ ಎಐಎಡಿಎಂಕೆ ಅಥವಾ ಬಿಜೆಡಿ ಬೆಂಬಲ ಅಗತ್ಯವಾಗಿದೆ. ಈಗಾಗಲೇ ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳ ಜತೆ ಸಮಾಲೋಚನೆಯಲ್ಲಿದ್ದು ಎಲ್ಲರಿಗೆ ಹೊಂದಿಕೆಯಾಗುವ ವ್ಯಕ್ತಿಯನ್ನು ಬಿಜೆಪಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕು. ತನಗೆ ಬೇಕಾದವರನ್ನು ದೇಶದ ಪರಮೋಚ್ಛ ಹುದ್ದೆಯಲ್ಲಿ ಕೂರಿಸಲು ಬಿಡಬಾರದು ಎಂದು ರಣತಂತ್ರ ಹೆಣೆಯುತ್ತಿದೆ.
ಇನ್ನು ನಾರದಾ ಸ್ಟಿಂಗ್ ಪ್ರಕರಣದಲ್ಲಿ 13 ಟಿಎಂಸಿ ನಾಯಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿರುವುದರಿಂದ ಈ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.