ಇಂದ್ರಾಣಿಯ ತಪ್ಪೊಪ್ಪಿಗೆ ಮೇಲೆ ಅಡಗಿದೆ ಕಾರ್ತಿ ಭವಿಷ್ಯ!
ಚೆನ್ನೈ, ಫೆಬ್ರವರಿ 28: ಐಎನ್ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಫೆಮಾ ನಿಯಮ ಉಲ್ಲಂಘಿಸಿದ ಆರೋಪವನ್ನು ಕಾರ್ತಿ ಚಿದಂಬರ್ ಹೊತ್ತುಕೊಂಡಿದ್ದಾರೆ. ಕಾರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಬಿಐಗೆ ಇಂದ್ರಾಣಿ ಮುಖರ್ಜಿಯ ತಪ್ಪೊಪ್ಪಿಗೆ ಹೇಳಿಕೆ ನೆರವಾಗಲಿದೆ.
ಕಾರ್ತಿ ಚಿದಂಬರಂ ಹೆಸರಿನಲ್ಲಿರುವ ಚೆಸ್ ಮ್ಯಾನೇಜ್ವೆುಂಟ್ ಸರ್ವಿಸಸ್ ಸಂಸ್ಥೆಗೆ 3.5 ಕೋಟಿ ರೂ. ನೀಡಲಾಗಿದ್ದು, ಮೀಡಿಯಾ ಸಂಸ್ಥೆಯಿಂದ ಕಾರ್ತಿ ಚಿದಂಬರಂಗೆ 10 ಲಕ್ಷ ರೂ. ಕಿಕ್ ಬ್ಯಾಕ್ ಸಿಕ್ಕಿದ್ದು ಎಲ್ಲವನ್ನು ಐಎನ್ಎಕ್ಸ್ ಮೀಡಿಯಾ ಸಂಸ್ಥೆಯ ಮಾಜಿ ಒಡತಿ ಇಂದ್ರಾಣಿ ಮುಖರ್ಜಿ ಅವರು ಸಿಬಿಐ ಮುಂದೆ ಹೇಳಿದ್ದರು.
ಎಫ್ಐಪಿಬಿ ಕ್ಲಿಯರೆನ್ಸ್ ಸಿಗದಿದ್ದಾಗ ಕಾರ್ತಿ ಅವರ ಸಂಸ್ಥೆಯ ನೆರವನ್ನು ನಾನು ಹಾಗೂ ನನ್ನ ಪತಿ ಪೀಟರ್ ಕೇಳಿದ್ದೆವು ಎಂದು ಇಂದ್ರಾಣಿ ಹೇಳಿಕೆ ನೀಡಿದ್ದಾರೆ.
ಎಫ್ಐಪಿಬಿಯಿಂದ ಹೂಡಿಕೆ ಮಿತಿ 5 ಕೋಟಿ ರುಗೆ ಸೀಮಿತವಾಗಿತ್ತು. ಆದರೆ, ಇಂದ್ರಾಣಿ ದಂಪತಿ 305 ಕೋಟಿ ರುಗಳಿಗೆ ಕ್ಲಿಯೆರನ್ಸ್ ಬಯಸಿದ್ದರು. ಕ್ಲಿಯೆರನ್ಸ್ ಸಿಕ್ಕ ಬಳಿಕ ಕಾರ್ತಿ ಒಡೆತನದ ಸಂಸ್ಥೆಗೆ 10 ಲಕ್ಷ ರು ಕಿಕ್ ಬ್ಯಾಕ್ ನೀಡಲಾಯಿತು ಎಂದು ಇಂದ್ರಾಣಿ ಹೇಳಿದ್ದಾರೆ.
ಈ ಆಧಾರದ ಮೇಲೆ ಕಾರ್ತಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ತಮ್ಮ ವಶಕ್ಕೆ ನೀಡಬೇಕೆಂದು ಸಿಬಿಐ ಅಧಿಕಾರಿಗಳ ಪರ ವಕೀಲರು ಪಟಿಯಾಲ ಕೋರ್ಟಿಗೆ ಅರ್ಜಿ ಸಲ್ಲಿಸಲಿದ್ದಾರೆ.