ಭಾರತದಲ್ಲಿ ನೆಲೆಯೂರಲು ಮಸೀದಿ, ಮದುವೆಗೆ ಲಷ್ಕರ್ ಇ ತೈಬಾ ನೆರವು
ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಭಾರತದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನದ ಬಗ್ಗೆ ರಾಷ್ಟ್ರೀಯ ತನಿಖಾ ದಳವು ಸ್ಫೋಟಕ ಮಾಹಿತಿ ಹೊರ ಹಾಕಿದೆ. ಹರಿಯಾಣದ ಮೇವಟ್ ಪ್ರದೇಶದಲ್ಲಿ ಫಲಾ-ಇ-ಇನ್ಸಾನಿಯತ್ ಎಂಬ ದಾನ ಸಂಸ್ಥೆಯೊಂದರ ಮೂಲಕ ಕನಿಷ್ಠ ಆರು ಪ್ರಕರಣಗಳಲ್ಲಿ ಹಣಕಾಸಿನ ನೆರವು ನೀಡಿರುವುದು ಪತ್ತೆಯಾಗಿದೆ.
ಹವಾಲ ಜಾಲದ ಮೂಲಕ ಹಣ ವರ್ಗಾವಣೆ ಮಾಡಿ, ಬಡ ಕುಟುಂಬಗಳಿಗೆ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಷ್ಟೇ ಅಲ್ಲ, ಮೇವಟ್ ಪ್ರದೇಶದ ಉಟ್ಟಾವರ್ ಹಳ್ಳಿಯಲ್ಲಿ ಖುಲಾಫ-ಇ-ರಶಿದೀನ್ ಮಸೀದಿ ನಿರ್ಮಾಣಕ್ಕೂ ಹಣಕಾಸಿನ ನೆರವು ನೀಡಿದ ಬಗ್ಗೆ ಶಂಕೆ ವ್ಯಕ್ತವಾಗುತ್ತದೆ.
ಭಾರತದ ಕಡಲಿನ ಗಡಿಯಲ್ಲಿ ಹೈ ಅಲರ್ಟ್ : ಲಷ್ಕರ್ ದಾಳಿ ಶಂಕೆ
ಲಷ್ಕರ್ ಇ ತೈಬಾ ಅಥವಾ ಫಲಾ-ಇ-ಇನ್ಸಾನಿಯತ್ ಚಟುವಟಿಕೆಗೆ ನೆಲೆ ಸೃಷ್ಟಿಸಿಕೊಳ್ಳುವ ಸಲುವಾಗಿಯೇ ಈ ದಾನ ಮಾಡಲಾಗಿದೆ. ಮಸೀದಿ ನಿರ್ಮಾಣಕ್ಕೆ ಹಾಗೂ ಮದುವೆಗಳಿಗೆ ಹಣಕಾಸು ನೆರವು ನೀಡುವ ಮೂಲಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಯತ್ನ ಇದು. ಯಾವಾಗ ಅಗತ್ಯ ಬರುತ್ತದೋ ಆಗ ಈ ಕುಟುಂಬಗಳಿಂದ ಸಹಾಯ ಪಡೆಯುವ ಎಣಿಕೆ ಇಟ್ಟುಕೊಂಡೇ ದಾನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸೀದಿ ನಿರ್ಮಾಣಕ್ಕೆ ಹಣಕಾಸಿನ ನೆರವು
ಫಲಾ-ಇ-ಇನ್ಸಾನಿಯತ್ ಮೂಲಕ ಭಾರತದೊಳಕ್ಕೆ ಎಪ್ಪತ್ತು ಲಕ್ಷ ರುಪಾಯಿ ಕಂತುಗಳಲ್ಲಿ ಹರಿದು ಬಂದಿರುವುದಕ್ಕೆ ದಾಖಲೆ ದೊರೆತಿದೆ. ಮಸೀದಿಯೊಂದರಿಂದ ಖಾತೆ ಪುಸ್ತಕವನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ. ಮಸೀದಿ ನಿರ್ಮಾಣಕ್ಕೆ ಆ ಪ್ರದೇಶದ ಇತರರು ಸಹ ಹಣಕಾಸಿನ ನೆರವು ನೀಡಿರಬಹುದು. ಆದರೆ ಸ್ವಲ್ಪ ಭಾಗದ ಹಣ ಬಂದಿರುವುದು ಫಲಾ-ಇ-ಇನ್ಸಾನಿಯತ್ ನಿಂದಲೇ ಎಂಬ ಗುಮಾನಿ ಅಧಿಕಾರಿಗಳಲ್ಲಿ ಇದೆ.
ಫಲಾ-ಇ-ಇನ್ಸಾನಿಯತ್ ಸಂಘಟನೆಗೆ ಭಾರತದಲ್ಲಿ ನಿಷೇಧ
ಕಳೆದ ತಿಂಗಳು ರಾಷ್ಟ್ರೀಯ ತನಿಖಾ ದಳ ನೀಡಿದ ಹೇಳಿಕೆ ಪ್ರಕಾರ, ಫಲಾ-ಇ-ಇನ್ಸಾನಿಯತ್ ಮೂಲತಃ ಇರುವುದು ಲಾಹೋರ್ ನಲ್ಲಿ. ಅದು ಲಷ್ಕರ್ ಇ ತೈಬಾದ ಪರವಾಗಿ ಕೆಲಸ ಮಾಡುತ್ತದೆ. ಲಷ್ಕರ್ ಇ ತೈಬಾದ ಮುಖ್ಯಸ್ಥ-ಜಾಗತಿಕ ಭಯೋತ್ಪಾದಕ ಪಟ್ಟಿಯಲ್ಲಿರುವ ಹಫೀಜ್ ಸಯೀದ್. ಫಲಾ-ಇ-ಇನ್ಸಾನಿಯತ್ ಸಂಘಟನೆಯನ್ನು ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ. ಇದನ್ನು ಭಯೋತ್ಪಾದಕ ಸಂಘಟನೆ ಎಂದು ಅಮೆರಿಕವು ಎಂಟು ವರ್ಷದ ಹಿಂದೆಯೇ ಘೋಷಿಸಿದೆ.
ಒಂದೂವರೆ ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು
ಕಳೆದ ತಿಂಗಳು ರಾಷ್ಟ್ರೀಯ ತನಿಖಾ ದಳವು ಬಹಿರಂಗ ಮಾಡಿದ್ದ ಮಾಹಿತಿ ಪ್ರಕಾರ, ದೆಹಲಿಯಿಂದ ಹಣಕಾಸು ಪೂರೈಕೆ ಆಗುವ ಜಾಲವೊಂದನ್ನು ಭೇದಿಸಲಾಗಿತ್ತು. ಅದಕ್ಕೆ ಫಲಾ-ಇ-ಇನ್ಸಾನಿಯತ್ ಸಂಘಟನೆಯಿಂದ ಹಣ ಹರಿದುಬರುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಒಂದೂವರೆ ಕೋಟಿ ನಗದು, ಮೊಬೈಲ್ ಫೋನ್ ಗಳು, ಪೆನ್ ಡ್ರೈವ್ಸ್ ಹಾಗೂ ಹಲವು ದಾಖಲೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ಮೊಹ್ಮದ್ ಸಲ್ಮಾನ್ ಉಟ್ಟಾವರ್ ಹಳ್ಳಿಯವನು
ಬಂಧಿತ ಆರೋಪಿಗಳ ಪೈಕಿ ಮೊಹ್ಮದ್ ಸಲ್ಮಾನ್ ಉಟ್ಟಾವರ್ ಹಳ್ಳಿಯವನು. ಆ ನಂತರ ದೆಹಲಿಯ ಮಸೀದಿಯಲ್ಲಿ ಇಮಾಮ್ ಆಗಿದ್ದ. ಆತನೇ ಹಣಕಾಸಿನ ವಿಲೇವಾರಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಎರಡನೇ ಬಾರಿಗೆ ಈತನ ಬಗ್ಗೆ ಮಾಹಿತಿ ನೀಡಿದ ತನಿಖಾ ಸಂಸ್ಥೆ, ಪಾಕಿಸ್ತಾನಿ ಮೂಲದ ದುಬೈನಲ್ಲಿರುವ ವ್ಯಕ್ತಿ ಜತೆ ಸಲ್ಮಾನ್ ನಂಟಿತ್ತು. ಆತನ ಮೂಲಕ ಫಲಾ-ಇ-ಇನ್ಸಾನಿಯತ್ ಸಂಘಟನೆಯ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿ ಜತೆ ಸಂಪರ್ಕದಲ್ಲಿದ್ದ. ಆ ಜಾಲದ ಮೂಲಕ ಹವಾಲ ಹಣ ಬರುತ್ತಿತ್ತು. ಅದನ್ನು ಬಳಸಿಕೊಂಡು ಭಾರತದಲ್ಲಿ ಹಿಂಸಾ ಕೃತ್ಯಗಳನ್ನು ನಡೆಸಲು ನೆಲೆ ಸ್ಥಾಪಿಸಲು ಹಾಗೂ ವಿಸ್ತರಣೆಗೆ ಯೋಜನೆ ರೂಪಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.