ಪ್ರಿನ್ಸಿಪಾಲ್ ಕೊಚ್ಚಿ ಕೊಂದ ವಿದ್ಯಾರ್ಥಿಗಳು
ಟುಟುಕೊರಿನ್ ನಗರದಲ್ಲಿರುವ ಇನ್ಫಾಂಟ್ ಜೀಸಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಸುರೇಶ್ ಕುಮಾರ್ ಅವರು ಮೃತಪಟ್ಟ ದುರ್ದೈವಿ. ಪ್ರಿನ್ಸಿಪಾಲ್ ರನ್ನು ಹಾಡಹಗಲೇ ಹತ್ಯೆಗೈದ ಮೂವರು ವಿದ್ಯಾರ್ಥಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಇಂದು ಬೆಳಗ್ಗೆ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಗೆ ನುಗ್ಗಿದ್ದ ಮೂವರು ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಸುರೇಶ್ ರನ್ನು ಕಚೇರಿಯಿಂದ ಹೊರಗೆಳೆದು ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ.
ಈ ಮೂವರು ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿಯನ್ನು ಮೂರು ಬಾರಿ ಸಸ್ಪೆಂಡ್ ಮಾಡಲಾಗಿತ್ತು ಎನ್ನಲಾಗಿದೆ. ಮೂರನೇ ಬಾರಿ ಡಿಬಾರ್ ಮಾಡಿದಾಗ ಕೋಪಗೊಂಡು ಪ್ರಿನ್ಸಿಪಾಲ್ ವಿರುದ್ಧ ಹರಿಹಾಯ್ದಿದ್ದ ವಿದ್ಯಾರ್ಥಿ, ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಹೋಗಿದ್ದ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.
ಮಾರಾಕಾಸ್ತ್ರಗಳ ಹೊಡೆತಕ್ಕೆ ಸಿಕ್ಕು ತೀವ್ರವಾಗಿ ರಕ್ತ ಕಳೆದುಕೊಂಡಿದ್ದ 55 ವರ್ಷದ ಸುರೇಶ್ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯೆ ಸುರೇಶ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕಾಲೇಜ್ ಬಂದ್ ಮಾಡಲಾಗಿದೆ.
ಪ್ರಿನ್ಸಿಪಾಲ್ ಡಾ. ಎಲ್ ಆರ್ ಡಿ ಸುರೇಶ್ ಕುಮಾರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿಗೆ ಕಳಿಸಲಾಗುವುದು. ವಿದ್ಯಾರ್ಥಿಗಳ ವಿಚಾರಣೆ ಮುಂದುವರೆದಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.