ತಿರುಪತಿ ತಿಮ್ಮಪ್ಪನ 'ಮಾಣಿಕ್ಯ' ಮಿಸ್ಸಿಂಗ್ : ಹೊಸ ಬಾಂಬ್ ಸಿಡಿಸಿದ ರೆಡ್ಡಿ
ಕಾಣೆಯಾಗಿದೆ ಎಂದು ಹೇಳಲಾಗುತ್ತಿರುವ ಅಂದಾಜು ಸುಮಾರು ಐನೂರು ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ ತಿರುಪತಿ ತಿಮ್ಮಪ್ಪನ ಮಾಣಿಕ್ಯವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮನೆಯಲ್ಲಿ ಹುಡುಕಿದರೆ ಪತ್ತೆಯಾಗುತ್ತದೆ ಎಂದು ರಾಜ್ಯಸಭಾ ಸದಸ್ಯರೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನವನ್ನು ಮೂಡಿಸಿದೆ.
ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆಣಕುವ ಕೆಲಸವನ್ನು ಸಿಎಂ ನಾಯ್ಡು ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಣಿಕ್ಯ ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಲಿ. ಕೇಂದ್ರ ತನಿಖಾ ತಂಡಕ್ಕೆ ಪ್ರಕರಣವನ್ನು ವಹಿಸಿದ ಹನ್ನೆರಡು ಗಂಟೆಯೊಳಗೆ ದೇವರ ಆಭರಣ ಸಿಎಂ ಮನೆಯಲ್ಲಿ ಸಿಗದೇ ಇದ್ದಲ್ಲಿ, ಹದಿಮೂರನೇ ಗಂಟೆಗೆ ನಾನು ರಾಜೀನಾಮೆ ನೀಡುತ್ತೇನೆಂದು ರಾಜ್ಯಸಭಾ ಸದಸ್ಯ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ವಿಜಯ್ ಸಾಯಿ ರೆಡ್ಡಿ ಬಾಂಬ್ ಸಿಡಿಸಿದ್ದಾರೆ.
ಪ್ರಧಾನಿಯಾಗುವ ಇಚ್ಛೆ ನನಗಿಲ್ಲ: ಚಂದ್ರಬಾಬು ನಾಯ್ಡು
ವಿಜಯ್ ಸಾಯಿ ರೆಡ್ಡಿ ಹೇಳಿಕೆ ಈಗ ವ್ಯಾಪಕ ಚರ್ಚೆಗೊಳಗಾಗಿದ್ದು, ಸಿಬಿಐ ತನಿಖೆ ಎದುರಿಸಲು ನಾವು ಸಿದ್ದ ಎಂದು ಟಿಡಿಪಿ ಮುಖಂಡರು ಹೇಳಿದ್ದಾರೆ. ವಿಜಯ್ ಸಾಯಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ, ದೇವಾಲಯದ ಯಾವುದೇ ಆಭರಣ 'ಮಿಸ್ಸಿಂಗ್' ಆಗಿಲ್ಲ ಎಂದು ಆಡಳಿತ ತೆಲುಗುದೇಶಂ ಪಕ್ಷದ ಮುಖಂಡರು ಮರು ಸವಾಲೆಸೆದಿದ್ದಾರೆ.
ವಿಶ್ವದಾದ್ಯಂತ ಕೋಟ್ಯಾಂತರ ಭಕ್ತರನ್ನು ಹೊಂದಿರುವ ತಿರುಮಲ ತಿರುಪತಿ ವೆಂಕಟೇಶ್ವರಸ್ವಾಮಿ ದೇವಾಲಯದ ಮಾಣಿಕ್ಯ ಕಾಣೆಯಾಗಿದೆ ಎಂದು ದೇವಾಲಯದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಮಾಜಿ ಪ್ರಧಾನ ಅರ್ಚಕರು ಸಾಲು ಸಾಲು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ.
ಎಚ್ಡಿಕೆ ಪ್ರಮಾಣವಚನಕ್ಕೆ ಬೆಂಗಳೂರಿಗೆ ಬಂದ ನಾಯ್ಡು, ದೀದಿ
ದೇವಾಲಯದ ಬ್ರಹ್ಮೋತ್ಸವದ ವೇಳೆ ಮೂಲ ವಿಗ್ರಹದ ಹೃದಯದಲ್ಲಿ ಇಡಲಾಗುತ್ತಿದ್ದ ಈ ಮಾಣಿಕ್ಯವನ್ನು ಕಳೆದ ಸುಮಾರು ಹದಿನೆಂಟು ವರ್ಷಗಳಿಂದ ಅಲಂಕಾರಕ್ಕೆ ಬಳಸುತ್ತಿಲ್ಲ. ದೇವಾಲಯದ ಪ್ರಧಾನ ಅರ್ಚಕರು ಮತ್ತು ವೈಎಸ್ಆರ್ ಕಾಂಗ್ರೆಸ್ಸಿನ ಮುಖಂಡರ ಹೇಳಿಕೆ ಒಂದಕ್ಕೊಂದು ತಾಳೆಯಾಗದೇ ಇರುವುದು ಮತ್ತಷ್ಟು ಗೊಂದಲಕ್ಕೀಡುಮಾಡಿದೆ. ಕೋಟಿ ಕೋಟಿ ಬೆಲೆಬಾಳುವ ಈ ಮಾಣಿಕ್ಯ ಯಾರು ದಾನ ಮಾಡಿದ್ದು? ಮುಂದೆ ಓದಿ..
ಪ್ರಧಾನ ಅರ್ಚಕ ರಮಣ ದೀಕ್ಷಿತಲು ಹೇಳಿಕೆ
ದಶಕಗಳಿಂದ ದೇವರನ್ನು ಪೂಜೆಮಾಡಿಕೊಂಡು ಬರುತ್ತಿರುವ ಪ್ರಧಾನ ಅರ್ಚಕ ರಮಣ ದೀಕ್ಷಿತಲು, ಕಾಣೆಯಾಗಿರುವ ಈ ಮಾಣಿಕ್ಯ ಸ್ವಿಜರ್ಲ್ಯಾಂಡಿನ ಜಿನಿವಾದಲ್ಲಿ ಹರಾಜಿನ ವೇಳೆ ಕಾಣಿಸಿಕೊಂಡಿತ್ತು ಎಂದು ಹೇಳಿರುವುದು ಭಕ್ತ ಸಮುದಾಯವನ್ನು ಅಲ್ಲೋಲಕಲ್ಲೋಲ ಮಾಡಿದ್ದು ಒಂದೆಡೆಯಾದರೆ, ಸಿಎಂ ನಾಯ್ಡು ಮನೆಯಲ್ಲಿ ಮಾಣಿಕ್ಯ ಇದೆ ಎಂದು ವಿರೋಧ ಪಕ್ಷದ ಮುಖಂಡರು ಹೇಳಿರುವುದು, ಇಡೀ ಈ ವಿದ್ಯಮಾನವನ್ನು ಇನ್ನೊಂದು ಆಯಾಮಕ್ಕೆ ತೆಗೆದುಕೊಂಡು ಹೋಗಿದೆ.
ಹದಿನೆಂಟು ವರ್ಷಗಳ ನಂತರ ಪ್ರಧಾನ ಅರ್ಚಕರ ಹೇಳಿಕೆ
2001ರಲ್ಲಿ ದೇವರ ಅಲಂಕಾರಕ್ಕೆ ಈ ಮಾಣಿಕ್ಯವನ್ನು ಕೊನೆಯದಾಗಿ ನಾವು ಬಳಸಿಕೊಂಡಿದ್ದೆವು. ಲಡ್ಡು ವಿತರಣೆ ಮಾಡುವ ಕಟ್ಟಡದ ಕೆಳಗೆ ದೇವಾಲಯದ ಆಭರಣಗಳನ್ನು ಇಡಲಾಗುತ್ತಿತ್ತು. ಕಟ್ಟಡದ ಜೀರ್ಣೋದ್ದಾರವಾದ ನಂತರ, ಈ ಮಾಣಿಕ್ಯ ನಮಗೆ ದೇವರ ಅಲಂಕಾರಕ್ಕೆ ಸಿಗಲೇ ಇಲ್ಲ ಎಂದು ಹದಿನೆಂಟು ವರ್ಷಗಳ ನಂತರ ಪ್ರಧಾನ ಅರ್ಚಕರು ಈಗ ಹೇಳುತ್ತಿದ್ದಾರೆ. ಜೊತೆಗೆ, ಹರಾಜಿನಲ್ಲಿ ಅದೇ ರೀತಿಯ ಮಾಣಿಕ್ಯ ಕಾಣಿಸಿತ್ತು ಎಂದು ಹೇಳಿರುವುದು ಇಡೀ ಘಟನೆಗೆ ಹೊಸ ರೂಪವನ್ನು ಪಡೆದುಕೊಂಡಿದೆ.
1945ರಲ್ಲಿ ಮೈಸೂರು ರಾಜಮನೆತನದವರು ನೀಡಿದ್ದು
ವಿಜಯನಗರ ಸಾಮ್ರಾಜ್ಯದವರು ಎಂದು ಒಂದೆಡೆ, ಇನ್ನೊಂದೆಡೆ 1945ರಲ್ಲಿ ಮೈಸೂರು ರಾಜಮನೆತನದವರು ಈ ಅತೀರೂಪದ ಮಾಣಿಕ್ಯವನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದರು ಎಂದು ಹೇಳಲಾಗುತ್ತಿದೆ. ಟಿಟಿಡಿ ಅಧಿಕಾರಿಗಳು ಹೇಳುವ ಪ್ರಕಾರ, ಈ ಮಾಣಿಕ್ಯವನ್ನು ಮೈಸೂರು ರಾಜರು ನೀಡಿದ್ದು ಎಂದು. ಈ ಮಾಣಿಕ್ಯ ಕಾಣೆಯಾಗಿರುವುದು ದೇವಾಲಯದ ರಿಜಿಸ್ಟರ್ (inventory) ನಲ್ಲಿ ಉಲ್ಲೇಖವಾಗಿದೆ.
ಟಿಟಿಡಿ ಸಿಎಓ ಅನಿಲ್ ಕುಮಾರ್ ಸಿಂಘಾಲ್
ಆದರೆ, ವಿರೋಧ ಪಕ್ಷದ ಮುಖಂಡರ ಮತ್ತು ಪ್ರಧಾನ ಅರ್ಚಕರ ಹೇಳಿಕೆಯನ್ನು ಸಾರಾಸಗಾಟವಾಗಿ ತಿರಸ್ಕರಿಸಿರುವ ಟಿಟಿಡಿ ಸಿಎಓ ಅನಿಲ್ ಕುಮಾರ್ ಸಿಂಘಾಲ್, ಹಲವು ವರ್ಷಗಳ ಹಿಂದೆ ಈ ಮಾಣಿಕ್ಯ ತುಂಡಾಗಿದ್ದು ನಿಜ. ಆದರೆ, ಇದು ಕಾಣೆಯಾಗಿದೆ ಎನ್ನುವುದು ಸುಳ್ಳು. ಈ ಮಾಣಿಕ್ಯವನ್ನು ಭಕ್ತರ ಸಮ್ಮುಖದಲ್ಲಿ ಪ್ರದರ್ಶಿಸಲು ಸಿದ್ದವಿದ್ದೇವೆ. ಆದರೆ, ಆಗಮ ಶಾಸ್ತ್ರದಲ್ಲಿ ದೇವರ ಆಭರಣವನ್ನು ಪ್ರದರ್ಶಿಸಲು ಅನುಮತಿ ಇದೆಯಾ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ತಿಮ್ಮಪ್ಪ ಕ್ಷಮಿಸಿದರೂ, ಭಕ್ತರು ಕ್ಷಮಿಸುವುದು ಡೌಟು
ತಿರುಪತಿ ದೇವಾಲಯದ ಪ್ರತೀ ವಿದ್ಯಮಾನಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರಲಾಗುತ್ತಿದೆ. ಕೇಂದ್ರ ಸರಕಾರ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರೀ ಪ್ರಯತ್ನ ನಡೆಸುತ್ತಿದೆ ಎನ್ನುವುದು ಆಡಳಿತ ತೆಲುಗುದೇಶಂ ಪಕ್ಷದ ಆರೋಪ. ಎನ್ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಗೆಬಂದ ಮೇಲೆ ಇದು ಇನ್ನಷ್ಟು ಜಾಸ್ತಿಯಾಗುತ್ತಿದೆ. ಒಂದು ವೇಳೆ, ಪ್ರಧಾನ ಅರ್ಚಕರ ಮತ್ತು ವಿರೋಧ ಪಕ್ಷದ ನಾಯಕರ ಹೇಳಿಕೆ ನಿಜವಾಗಿದ್ದಲ್ಲಿ, ತಿಮ್ಮಪ್ಪ ಕ್ಷಮಿಸಿದರೂ, ಭಕ್ತರು ಇವರನ್ನೆಲ್ಲಾ ಕ್ಷಮಿಸುವುದು ಡೌಟು.