ಉಚ್ಚಾಟಿಸಿದ ಪಕ್ಷವನ್ನೇ ಮುಗಿಸಿದ ಪ್ರಳಯಾಂತಕ ಯುವ ರಾಜಕಾರಣಿ
ಚಂಡೀಗಢ, ಅ 25: ತನ್ನ ರಕ್ತಸಂಬಂಧಿಗಳೇ ಸೇರಿ, ಯಾವ ಪಕ್ಷದಿಂದ ತನ್ನನ್ನು ಉಚ್ಚಾಟಿಸಿದರೋ, ಅದೇ ಪಕ್ಷವನ್ನು ಇದೀಗ ಮುಕ್ತಾಯಗೊಂಡ ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಮಕಾಡೆ ಮಲಗಿಸಿದ ಯುವಕನ ಕಥೆಯಿದು.
ಇವರ ವಯಸ್ಸು ಮೂವತ್ತು, ರಾಜಕಾರಣಿಗಳ ಲೆಕ್ಕದಲ್ಲಿ ಹೇಳುವುದಾದರೆ ಇನ್ನೂ ಬಚ್ಚಾ..! ಆದರೆ, ಈತ ಚುನಾವಣೆಯಲ್ಲಿ ತೋರಿದ ಸಾಧನೆ, ಯಾವ ಪಕ್ಷದಿಂದ ಉಚ್ಚಾಟಿತಗೊಂಡರೋ, ಆ ಪಕ್ಷದ ಮುಖಂಡರು, ಜೊತೆಗೆ, ಅಮಿತ್ ಶಾ ಕೂಡಾ ಬೆರಗಾಗುವಂತೆ ಮಾಡಿದ್ದಾರೆ.
ಹರ್ಯಾಣದ ಅತಂತ್ರ ಸ್ಥಿತಿ: ಜೆಜೆಪಿ ಕಿಂಗ್ ಮೇಕರ್, ಸಿಎಂ ಕುರ್ಚಿ ಮೇಲೆ ದುಷ್ಯಂತ್ ಕಣ್ಣು
ಇವರ ಹೆಸರು ದುಷ್ಯಂತ್ ಚೌತಾಲ, ಸನ್ ಆಫ್ ಅಜಯ್ ಚೌತಾಲ. ಓಂ ಪ್ರಕಾಶ ಚೌತಾಲ ಅವರ ಮೊಮ್ಮಗ. ಮಾಜಿ ಉಪಪ್ರಧಾನಿ ದೇವಿಲಾಲ್ ಅವರ ಮರಿಮೊಮ್ಮಗ. ಹರಿಯಾಣದಲ್ಲಿ ಚೌತಾಲ ಕುಟುಂಬಕ್ಕೆ ದೊಡ್ಡ ಹೆಸರು ಇದೆ.
ಹರ್ಯಾಣದ ಮುಂದಿನ ಸಿಎಂ ಆಗಿ ದುಷ್ಯಂತ್ ಆಯ್ಕೆ: ಕಾಂಗ್ರೆಸ್ಸಿನ ಘೋಷಣೆ
ಹತ್ತು ತಿಂಗಳ ಹಿಂದೆ, ಅಂದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ದುಷ್ಯಂತ್ ಸಿಂಗ್, INLD ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. ಇದಕ್ಕೆ ಕಾರಣ, ಅಪ್ಪ ಮತ್ತು ಚಿಕ್ಕಪ್ಪ ನಡುವಿನ ದಾಯಾದಿ ಕಲಹ. ಹೀಗಾಗಿ, ಅಜ್ಜ, ಮೊಮ್ಮಗನನ್ನೇ ಪಕ್ಷದಿಂದ ಹೊರಹಾಕ ಬೇಕಾಯಿತು.
ಹರಿಯಾಣದ ಹಿಸ್ಸಾರ್ ಕ್ಷೇತ್ರ
ಅಮೆರಿಕಾದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪದವೀಧರನಾದ ನಂತರ ದುಷ್ಯಂತ್, ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಲಾ ಕೂಡಾ ಮುಗಿಸಿದ್ದರು. ಎದುರಿಸಿದ ಮೊದಲ ಚುನಾವಣೆಯಲ್ಲೇ, 2014ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಹಿಸ್ಸಾರ್ ಕ್ಷೇತ್ರದಿಂದ, ದುಷ್ಯಂತ್ 31,847 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ಮೂಲಕ, ಹದಿನಾರನೇ ಲೋಕಸಭೆಯಲ್ಲಿ, ಅತ್ಯಂತ ಸಣ್ಣ ವಯಸ್ಸಿನ ಸದಸ್ಯ ಎನ್ನುವ ಹಿರಿಮೆಗೆ ಪಾತ್ರರಾದರು.
ಜನನಾಯಕ ಜನತಾ ಪಾರ್ಟಿ
ಅಪ್ಪ ಅಜಯ್ ಚೌತಾಲ ಮತ್ತು ಚಿಕ್ಕಪ್ಪ ಅಭಯ್ ಚೌತಾಲ ನಡುವಿನ ಕಲಹ ತಾರಕ್ಕೇರಿದಾಗ, ದುಷ್ಯಂತ್ ರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇದಾದ ಕೆಲವೇ ದಿನಗಳಲ್ಲಿ ದುಷ್ಯಂತ್ 'ಜನನಾಯಕ ಜನತಾ ಪಾರ್ಟಿ' ಎನ್ನುವ ಪಕ್ಷವನ್ನು ಹುಟ್ಟುಹಾಕಿದರು. ಅಂದು (09.12.2018) ನಡೆದ ಭಾರೀ ಸಾರ್ವಜನಿಕ ಸಭೆಯಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಮುತ್ತಾತ, ತಾತನ ಹೆಸರನ್ನು ದುಷ್ಯಂತ್ ಭರ್ಜರಿಯಾಗಿ ಇಲ್ಲಿ ಬಳಸಿಕೊಂಡರು. ಐಎನ್ಎಲ್ ಡಿ ಪಕ್ಷಕ್ಕೆ ಬಿಸಿಮುಟ್ಟಿದ್ದು ಇಲ್ಲೇ.
ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ ನಮ್ಮ ಪಕ್ಷದ ಪ್ರಮುಖ ಆದ್ಯತೆ
ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ ನಮ್ಮ ಪಕ್ಷದ ಪ್ರಮುಖ ಆದ್ಯತೆ ಎನ್ನುವ ಮೂಲಕ ದುಷ್ಯಂತ್, ಪ್ರಮುಖವಾಗಿ ಯುವಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಎದುರಿಸಿದ ಮೊದಲ ಅಸೆಂಬ್ಲಿ ಉಪಚುನಾವಣೆಯಲ್ಲಿ (ಜಿಂದ್, ಹರಿಯಾಣ) ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಬರುವ ಮೂಲಕ, ಇತರರಿಗೆ ಪೈಪೋಟಿ ನೀಡಿದರು. ಮೊದಲ ಪ್ರಯತ್ನದಲ್ಲೇ INLD ಪಕ್ಷವನ್ನು ದುಷ್ಯಂತ್ ಹಿಂದಿಕ್ಕಿದ್ದರು.
INLD ಪಕ್ಷವನ್ನು ನಾಮಾವೇಶ ಇಲ್ಲದಂತೇ ಮುಖಭಂಗ
ಇದೀಗ ಮುಕ್ತಾಯಗೊಂಡ ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ ದುಷ್ಯಂತ್ ಚೌತಾಲ ಅವರ ಜೆಜೆಪಿ (ಜನನಾಯಕ ಜನತಾ ಪಾರ್ಟಿ) ಪಕ್ಷ, ಅಕ್ಷರಸ: INLD ಪಕ್ಷವನ್ನು ಇನ್ನಿಲ್ಲದಂತೇ ಮುಖಭಂಗ ಮಾಡಿ ಕಳುಹಿಸಿದೆ. ಚಿಕ್ಕಪ್ಪ INLD ಪಕ್ಷ, ಕಳೆದ ಚುನಾವಣೆಯಲ್ಲಿ ಇಪ್ಪತ್ತು ಸ್ಥಾನವನ್ನು ಗೆದ್ದಿತ್ತು. ಈಗಿನ ಚುನಾವಣೆಯಲ್ಲಿ ಗೆದ್ದದ್ದು ಕೇವಲ ಒಂದೇ ಒಂದು ಕ್ಷೇತ್ರವನ್ನು. (ಚಿತ್ರದಲ್ಲಿ: ಓಂ ಪ್ರಕಾಶ್ ಚೌತಾಲ)
ದುಷ್ಯಂತ್ ಚೌತಾಲ ಯಶಸ್ವಿಯಾಗಿದ್ದಾರೆ. ಜೊತೆಗೆ, ಕಿಂಗ್ ಮೇಕರ್
ಅದೇ, ಹತ್ತು ತಿಂಗಳ ಹಿಂದೆ ಹುಟ್ಟುಹಾಕಿದ ತನ್ನ ಪಕ್ಷವನ್ನು ಹತ್ತು ಕ್ಷೇತ್ರದಲ್ಲಿ ದಡ ಸೇರಿಸುವಲ್ಲಿ ದುಷ್ಯಂತ್ ಚೌತಾಲ ಯಶಸ್ವಿಯಾಗಿದ್ದಾರೆ. ಜೊತೆಗೆ, ಕಿಂಗ್ ಮೇಕರ್ ಕೂಡಾ ಆಗಿ ಹೊರಹೊಮ್ಮಿದ್ದಾರೆ. ರಾಜಕೀಯ ಪಂಡಿತರ ಪ್ರಕಾರ, ದುಷ್ಯಂತ್ ಸಾಗುತ್ತಿರುವ ವೇಗ ನೋಡಿದರೆ, ಹರಿಯಾಣದಲ್ಲಿ ಬರೀ INLD ಪಕ್ಷಕ್ಕಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೂ, ಭರ್ಜರಿ ಪೈಪೋಟಿ ನೀಡುವುದರಲ್ಲಿ ಸಂಶಯವೇ ಇಲ್ಲ. ಒಟ್ಟಿನಲ್ಲಿ ದಾಯಾದಿಗಳ ಕಲಹದಲ್ಲಿ, ಇನ್ನೊಬ್ಬ ಯುವ ನಾಯಕನ ಉದಯವಾಗಿದೆ.