ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ; ಶಾಲೆ ತೆರೆಯುವ ಸಮಯ ಬಂದಿದೆ
ನವದೆಹಲಿ, ಜುಲೈ 20: ಕೊರೊನಾ ಸೋಂಕು ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಕೊರೊನಾ ಕೊಟ್ಟಿರುವ ಹೊಡೆತ ಬಲು ದೊಡ್ಡದು. ಕೊರೊನಾ ಕಾರಣವಾಗಿ ಶಾಲಾ ಕಾಲೇಜುಗಳು ಮುಚ್ಚಿ ಹತ್ತಿರತ್ತಿರ ಒಂದೂವರೆ ವರ್ಷಗಳೇ ಕಳೆಯುತ್ತಿವೆ.
ಇದೀಗ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ತಗ್ಗುತ್ತಿವೆ. ಕೊರೊನಾ ಎರಡನೇ ಅಲೆ ಪ್ರಭಾವ ಕ್ಷೀಣಿಸುತ್ತಿದೆ. ಹಲವೆಡೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಇದೀಗ ಶಾಲೆಗಳನ್ನು ಕೂಡ ತೆರೆಯುವ ಕುರಿತು ಸರ್ಕಾರ ಯೋಚಿಸಬೇಕಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಮೊದಲ ದೇಶವ್ಯಾಪಿ ಲಾಕ್ಡೌನ್ ಹೇರಿದ ನಂತರ ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರೆಯುವ ಸಂದರ್ಭ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಓದಿ...
ಒಂದೂವರೆ ವರ್ಷದಿಂದ ಮುಚ್ಚಿರುವ ಶಾಲೆಗಳು
ದೇಶದಲ್ಲಿ ಕೊರೊನಾ ಸೋಂಕಿನ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿ ಲಾಕ್ಡೌನ್ ಹೇರಲಾಯಿತು. ಈ ಸಂದರ್ಭ ಶಾಲೆಗಳನ್ನು ಮುಚ್ಚಲಾಯಿತು. ಆನಂತರ ಶಾಲೆಗಳ ಪುನರಾರಂಭ ಸಾಧ್ಯವಾಗಿಲ್ಲ. ಆನಂತರ ಆನ್ಲೈನ್ ಶಿಕ್ಷಣವನ್ನು ಪರ್ಯಾಯವಾಗಿ ನೀಡಲಾಗುತ್ತಿದೆ. ಆದರೆ ಅದರಲ್ಲೂ ಸಮಸ್ಯೆಗಳು ನೂರಾರಿವೆ. ಕಳೆದ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ, ಶಾಲೆಗಳ ಪುನರಾರಂಭಕ್ಕೆ ಅವಕಾಶ ಕಲ್ಪಿಸಿದರೂ ನಂತರ ಆ ಆದೇಶವನ್ನು ತಕ್ಷಣವೇ ಹಿಂಪಡೆಯಿತು.
ಸರ್ಕಾರಿ ಆಂಗ್ಲ ಶಾಲೆಗಳಿಗೆ ಭಾರೀ ಡಿಮ್ಯಾಂಡ್; ಸಾವಿರ ಹೊಸ ಶಾಲೆ ನಿರ್ಮಾಣ ಯೋಜನೆ
"ಸೋಂಕು ಕಡಿಮೆಯಿರುವ ಕಡೆ ಶಾಲೆ ತೆರೆಯಿರಿ"
"ಸೋಂಕಿನ ಪ್ರಮಾಣ ಕಡಿಮೆಯಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ಆರಂಭಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಅಂಥ ಕಡೆಗಳಲ್ಲಿ ಶಾಲೆಗಳನ್ನು ತೆರೆಯಬೇಕಿದೆ. 5%ಗೂ ಕಡಿಮೆ ಪಾಸಿಟಿವಿಟಿ ದರವಿರುವ ಕಡೆಗಳಲ್ಲಿ ಶಾಲೆಗಳನ್ನು ತೆರೆಯಲು ಹಂತಹಂತವಾಗಿ ಯೋಜನೆಗಳನ್ನು ರೂಪಿಸುವತ್ತ ಸರ್ಕಾರ ಯೋಜನೆ ರೂಪಿಸಬೇಕಿದೆ" ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.
ಸೋಂಕು ಪತ್ತೆಯಾದರೆ ತಕ್ಷಣವೇ ಕ್ರಮ ಕೈಗೊಳ್ಳಿ
"ಆದರೆ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾದರೆ, ಅಂಥ ಸೂಚನೆಗಳು ದೊರೆತರೆ ತಕ್ಷಣವೇ ಶಾಲೆಗಳನ್ನು ಮುಚ್ಚಬೇಕು. ಇದರೊಂದಿಗೆ, ಮಕ್ಕಳನ್ನು ಪರ್ಯಾಯ ದಿನಗಳಲ್ಲಿ ಶಾಲೆಗಳಿಗೆ ಕರೆತರುವ ಆಯ್ಕೆಯನ್ನು ಸೃಷ್ಟಿಸಬೇಕು ಹಾಗೂ ಮತ್ತೆ ಶಾಲೆಗಳನ್ನು ತೆರೆಯುವ ಇತರೆ ಮಾರ್ಗಗಳನ್ನು ಜಿಲ್ಲಾಡಳಿತಗಳು ಯೋಜಿಸಬೇಕು" ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 14 ಲಕ್ಷ ಮಕ್ಕಳ ಬಳಿ ಮೊಬೈಲೇ ಇಲ್ಲ; ಆನ್ಲೈನ್ ಶಿಕ್ಷಣದ ಕಥೆ?
ಶಾಲೆಗಳನ್ನು ತೆರೆಯಲೇಬೇಕಿದೆ
ಈಗ ಶಾಲೆಗಳನ್ನು ತೆರೆದು ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲೇಬೇಕಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತಿ ಮುಖ್ಯವಾದ್ದರಿಂದ ಅವರಿಗೆ ಶೈಕ್ಷಣಿಕ ಜೀವನವನ್ನು ಕಟ್ಟಿಕೊಡಬೇಕಾದ್ದು ನಮ್ಮ ಜವಾಬ್ದಾರಿಯಾಗಿದೆ. ಜೊತೆಗೆ ಇಂಟರ್ನೆಟ್ ಲಭ್ಯತೆಯ ಅಸಮಾನತೆಯನ್ನೂ ಕೊನೆಗಾಣಿಸಬೇಕಿದೆ ಎಂದು ಹೇಳಿದ್ದಾರೆ.
ಭಾರತದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ
ಭಾರತದಲ್ಲಿ ಮಕ್ಕಳು ಈಗಾಗಲೇ ಕೊರೊನಾ ವೈರಸ್ಗೆ ಒಡ್ಡಿಕೊಂಡಿದ್ದಾರೆ ಹಾಗೂ ಅವರಲ್ಲಿ ಅನೇಕರಿಗೆ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ. ಹೀಗಾಗಿ ಭಾರತದಲ್ಲಿ ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೆರೊ ಪಾಸಿಟಿವಿಟಿ ದರ ಹೆಚ್ಚಾಗಿದೆ ಎಂಬುದನ್ನು ಸಮೀಕ್ಷೆಗಳು ಕೂಡ ಸಾಕ್ಷೀಕರಿಸಿವೆ. ಹೀಗಾಗಿ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ಆದರೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮೂಲಕ ಶಾಲೆಗಳನ್ನು ತೆರೆಯಬಹುದಾಗಿದೆ ಎಂದಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡುವ ಕುರಿತು ಶೀಘ್ರವೇ ನಿರ್ಧಾರ
ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆಗಳನ್ನು ನೀಡುವ ಸಂಬಂಧ ಪ್ರಯೋಗಗಳು ನಡೆಯುತ್ತಿವೆ. ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ನಡೆಯುತ್ತಿದ್ದು, ಶೀಘ್ರವೇ ಫಲಿತಾಂಶ ಲಭ್ಯವಾಗಲಿದೆ. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಎರಡು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.