ಮೋದಿ ಡಿವೈಡರ್ ಅಲ್ಲ, ಯುನಿಫೈರ್: ಉಲ್ಟಾ ಹೊಡೆದ ಟೈಮ್ ಮ್ಯಾಗಜೀನ್
ನವದೆಹಲಿ, ಮೇ 28: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಕಟಿಸಿದ ಲೇಖನದಲ್ಲಿ ಮೋದಿ ಅವರನ್ನು 'ಭಾರತದ ವಿಭಜನೆಯ ಮುಖ್ಯಸ್ಥ' (ಡಿವೈಡರ್ ಇನ್ ಚೀಫ್) ಎಂದು ಟೀಕಿಸಿದ್ದ ಅಮೆರಿಕದ ಟೈಮ್ ಮ್ಯಾಗಜೀನ್, ಈಗ ಅದಕ್ಕೆ ತದ್ವಿರುದ್ಧ ಲೇಖನ ಪ್ರಕಟಿಸಿದೆ.
'ಇಷ್ಟು ದಶಕಗಳಲ್ಲಿ ಯಾವ ಪ್ರಧಾನಿಯೂ ಮಾಡದಂತೆ ಮೋದಿ ಅವರು ಭಾರತವನ್ನು ಒಗ್ಗೂಡಿಸಿದ್ದಾರೆ' ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಲಾಗಿದೆ.
ಮಂಗಳವಾರ ಪ್ರಕಟವಾಗಿರುವ ಲೇಖನದಲ್ಲಿ ಟೈಮ್, 'ಬಹುಶಃ ವಿಭಜನಾ ಶಕ್ತಿ ಆಗಬೇಕಿದ್ದ ಅವರು ಅಧಿಕಾರವನ್ನು ಮರಳಿ ಪಡೆಯುವುದರಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ತಮ್ಮ ಬೆಂಬಲದ ಮಟ್ಟವನ್ನೂ ಹೆಚ್ಚಿಸಿಕೊಂಡಿದ್ದು ಹೇಗೆ?' ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರವನ್ನೂ ವರದಿಯಲ್ಲಿ ನೀಡಲಾಗಿದೆ. 'ಮುಖ್ಯವಾದ ಅಂಶವೇನೆಂದರೆ ಮೋದಿ ಅವರು ಭಾರತದ ಅತಿ ದೊಡ್ಡ ಪ್ರಮಾದವಾದ ವರ್ಗೀಯ ವಿಭಜನೆಯನ್ನು ಮೀರುವಲ್ಲಿ ಸಫಲರಾದರು' ಎಂದು ವಿಶ್ಲೇಷಿಸಲಾಗಿದೆ.
'ಟೈಮ್' ಮುಖಪುಟದಲ್ಲಿ ಮೋದಿ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'
ಸಾಮಾಜಿಕವಾದ ಪ್ರಗತಿಪರ ನೀತಿಗಳ ಮೂಲಕ ಹಿಂದೂ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಅನೇಕ ಭಾರತೀಯರನ್ನು ಒಂದೆಡೆ ತಂದಿದ್ದಾರೆ. ಹಿಂದಿನ ಯಾವುದೇ ಸರ್ಕಾರಕ್ಕಿಂತ ವೇಗವಾಗಿ ಬಡತನವನ್ನು ಮಟ್ಟಹಾಕುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಚುನಾವಣೆ ನಡೆಯುವ ವೇಳೆ ಈ ತಿಂಗಳ ಆರಂಭದಲ್ಲಿ ಅಮೆರಿಕದ ವಾರಪತ್ರಿಕೆ 'ಟೈಮ್'ನ ಮುಖಪುಟ ಲೇಖನವಾಗಿ ನರೇಂದ್ರ ಮೋದಿ ಅವರ ಕುರಿತು ಲೇಖನ ಪ್ರಕಟಿಸಿತ್ತು. ಮೇ 10, 2019ರ ಸಂಚಿಕೆಯಲ್ಲಿ ನರೇಂದ್ರ ಮೋದಿ ಭಾವಚಿತ್ರವನ್ನು ಹಾಕಿ, 'ಇಂಡಿಯಾಸ್ ಡಿವೈಡರ್ ಇನ್ ಚೀಫ್' ಎಂಬ ಶೀರ್ಷಿಕೆಯ ವಿವಾದಾತ್ಮಕ ವರದಿಯನ್ನು ಪ್ರಕಟಿಸಲಾಗಿತ್ತು.
ಭಾರತೀಯ ಪತ್ರಕರ್ತೆ ತವ್ಲೀನ್ ಸಿಂಗ್ ಮತ್ತು ಪಾಕಿಸ್ತಾನದ ಪಂಜಾಬ್ನ ಗವರ್ನರ್ ಆಗಿದ್ದ ಸಲ್ಮಾನ್ ತಸೀರ್ ಅವರ ಮಗ ಆತೀಶ್ ತಸೀರ್ ಈ ಲೇಖನ ಬರೆದಿದ್ದರು.
ಭಾರತದ ಏಕೀಕರಣ ಶಕ್ತಿ
ಬರಹಗಾರ ಮನೋಜ್ ಲಾಡ್ವಾ ಅವರು, ಹಿಂದುಳಿದ ವರ್ಗದಲ್ಲಿ ಹುಟ್ಟಿದ ಮೋದಿ ಅವರು ಏಕೀಕರಣದ ಶಕ್ತಿಯಾಗಿ ಬೆಳೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಮೇಲ್ವರ್ಗದ ಪ್ರಾಬಲ್ಯ ಎಂದು ಕರೆಯುವ ಪಾಶ್ಚಿಮಾತ್ಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಮೋದಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ವಾಸ್ತವವನ್ನು ಮರೆಮಾಚುತ್ತವೆ ಎಂದು ಟೀಕಿಸಿದ್ದಾರೆ.
'ಡಿವೈಡರ್ ಇನ್ ಚೀಫ್' ಎಂದು ಜರಿದ ಪತ್ರಕರ್ತನ ವಿಶ್ವಾಸಾರ್ಹತೆ ಪ್ರಶ್ನಿಸಿದ ಮೋದಿ
ನೆಹರೂ-ಗಾಂಧಿ ವಂಶಾಡಳಿತಕ್ಕೆ ಸಾಧ್ಯವಿಲ್ಲ
'ನರೇಂದ್ರ ಮೋದಿ ಅವರು ದೇಶದ ಸಾಮಾಜಿಕವಾಗಿ ಅತ್ಯಂತ ಸೌಲಭ್ಯವಂಚಿತ ಜಾತಿಯಲ್ಲಿ ಹುಟ್ಟಿದವರು. ಅವರು ಈ ಉನ್ನತ ಸ್ಥಾನಕ್ಕೆ ತಲುಪಲು ಶ್ರಮಿಕ ವರ್ಗದ ಅಕಾಂಕ್ಷೆಗಳನ್ನು ವೈಯಕ್ತೀಕರಿಸಿಕೊಂಡರು. ದೇಶದ ಅತ್ಯಂತ ಬಡಜನರೊಂದಿಗೆ ತಮ್ಮ ಅಸ್ಮಿತೆಯನ್ನು ಅವರು ತೋರಿಸಿಕೊಳ್ಳಬಹುದು. ಇದು ಸ್ವಾತಂತ್ರ್ಯನಂತರ 72 ವರ್ಷ ಆಡಳಿತ ನಡೆಸಿದ ನೆಹರೂ-ಗಾಂಧಿ ರಾಜಕೀಯ ವಂಶಾಡಳಿತಕ್ಕೆ ಸಾಧ್ಯವೇ ಇಲ್ಲ.
ಭಾರತೀಯ ಮತದಾರರನ್ನು ಒಂದುಗೂಡಿಸಿದರು
ಮೋದಿ ಅವರ ಮೊದಲ ಅವಧಿ ಆಡಳಿತ ಮತ್ತು ಈ ಸುದೀರ್ಘ ಚುನಾವಣೆಯಲ್ಲಿ ಅವರ ನೀತಿಗಳ ವಿರುದ್ಧ ಪ್ರಬಲವಾದ ಮತ್ತು ನ್ಯಾಯಯುತವಲ್ಲದ ಟೀಕಾಪ್ರಹಾರಗಳು ನಡೆದರೂ, ಕಳೆದ ಸುಮಾರು ಐದು ದಶಕಗಳಲ್ಲಿ ಯಾವ ಪ್ರಧಾನಿಯಿಂದಲೂ ಸಾಧ್ಯವಾಗದ ಭಾರತೀಯ ಮತದಾರರನ್ನು ಒಗ್ಗೂಡಿಸುವಿಕೆಯ ಕೆಲಸವನ್ನು ಮೋದಿ ಮಾಡಿದರು ಎಂದು ಲೇಖನದಲ್ಲಿ 1971ರಲ್ಲಿನ ಇಂದಿರಾ ಗಾಂಧಿ ಅವರ ಭರ್ಜರಿ ವಿಜಯವನ್ನು ಉಲ್ಲೇಖಿಸಿ ಹೇಳಿದ್ದಾರೆ.
ಆರ್ಥಿಕ ಸುಧಾರಣೆಯಲ್ಲಿ ಸಾಧನೆ
ಟೈಮ್ನಲ್ಲಿಯೇ ಪ್ರಕಟವಾಗಿರುವ ಮತ್ತೊಂದು ಚುನಾವಣೋತ್ತರ ವಿಶ್ಲೇಷಣೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದಲ್ಲಿ ವಿದೇಶಾಂಗ ಇಲಾಖೆಯ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದ ಅಲಿಸ್ಸಾ ಅಯ್ರೆಸ್, ಎರಡನೆಯ ಅವಧಿಗೆ ಮೋದಿ ಅವರು ಆರ್ಥಿಕ ಸುಧಾರಣೆಯಲ್ಲಿ ಮಹತ್ವದ ಸಾಧನೆ ಮಾಡಲಿದ್ದಾರೆ ಎಂದು ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ.
'ಆರ್ಥಿಕ ಸುಧಾರಣೆಯ ದಿಟ್ಟ ಕಾರ್ಯಸೂಚಿಯೊಂದು ಮುಂದೆ ಬರುವ ಸಾಧ್ಯತೆಯಿದೆ. ಇತ್ತೀಚಿನ ಕಾರ್ಯ ಸಾಧನೆಗಳ ಆಧಾರದಲ್ಲಿ ಹಂತ ಹಂತವಾಗಿ ಕಠಿಣ ಸುಧಾರಣೆಯ ಅಭಿವೃದ್ಧಿ ಯೋಜನೆಗಳು ಹಾಗೂ ಆರ್ಥಿಕತೆ ವಿಚಾರದಲ್ಲಿ ಹೆಚ್ಚು ರಾಷ್ಟ್ರೀಯವಾದಿ ನಿಲುವು ಬರಲಿದೆ' ಎಂದಿದ್ದಾರೆ.
ಹಿಂದೂ-ಮುಸ್ಲಿಂ ವಿಭಜನೆ
ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಮುಸ್ಲಿಮರನ್ನು ವಿಭಜನೆ ಮಾಡುತ್ತಿದೆ. ಮೋದಿಯ ವಿಜಯವು ಅಪನಂಬಿಕೆಯ ಭಾವಾಭಿವ್ಯಕ್ತಿ. ನೆಹರೂ ಅವರ ಜಾತ್ಯತೀತತೆ, ಸಮಾಜವಾದದ ಮೇಲೆ ದಾಳಿ ನಡೆಸಲಾಗಿದೆ. ಮೋದಿ "ಕಾಂಗ್ರೆಸ್ ಮುಕ್ತ" ಭಾರತದ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರ ಮಧ್ಯೆ ಸೋದರತ್ವ ಬೆಳೆಸುವ ಯಾವ ಇಚ್ಛೆಯನ್ನು ಅವರು ವ್ಯಕ್ತಪಡಿಸಿಲ್ಲ ಎಂದು ಟೈಮ್ ಮ್ಯಾಗಜಿನ್ ಈ ಹಿಂದೆ ಪ್ರಕಟಿಸಿದ್ದ ಲೇಖನದಲ್ಲಿ ಟೀಕಿಸಲಾಗಿತ್ತು.