ಅವನಿಯ ಮರಿಗಳೂ ನರಭಕ್ಷಕವಾಗಿವೆ... ಭಾವುಕನಾಗಿ ಶೂಟರ್ ಹೇಳಿದ ಮಾತು!
ಯಾವತ್ಮಾಳ್(ಮಹಾರಾಷ್ಟ್ರ), ನವೆಂಬರ್ 05: 'ಅವನಿಯ ಮರಿಗಳೂ ನರಭಕ್ಷಕವಾಗಿವೆ... ಅವಕ್ಕೆ ಮನುಷ್ಯನ ಮಾಂಸವಲ್ಲದೆ ಬೇರೆ ಯಾವುದೂ ರುಚಿಸುತ್ತಿಲ್ಲ...ಅವನಿಯನ್ನು ಕೊಂದಿದ್ದು ನನಗೆಂದಿಗೂ ಸಂತೋಷ ನೀಡುವುದಿಲ್ಲ. ರಾಷ್ಟ್ರ ಪ್ರಾಣಿಯನ್ನು ಕೊಲ್ಲುವುದು ಯಾರಿಗೆ ಖುಷಿ ನೀಡುವುದಕ್ಕೆ ಸಾಧ್ಯ?' ಹಾಗೆಂದು ಭಾವುಕರಾಗಿ ಪ್ರಶ್ನಿಸಿದ್ದು ಅವನಿ ಹೆಣ್ಣು ಹುಲಿಯನ್ನು ಗುಂಡಿಕ್ಕಿ ಕೊಂದ ಶಾರ್ಪ್ ಶೂಟರ್ ಅಸ್ಘರ್ ಖಾನ್.
'ಅವನಿಯನ್ನು ಗುಂಡಿಕ್ಕಿ ಕೊಲ್ಲುವ ಅಧಿಕಾರವನ್ನು ನಿಮಗೆ ಕೊಟ್ಟವರ್ಯಾರು?', survival of the fittest ಎಂಬುದು ಸತ್ಯವಿದ್ದೀತು, ಹಾಗಂತ ಮಾನವೀಯತೆ ಮರೆತರೆ ಹೇಗೆ? ಹುಲಿ ನರಭಕ್ಷಕವಾದ ಮೇಲೆ, 13 ಜನರನ್ನು ಕೊಂದಮೇಲೂ ಅದನ್ನು ಮಾನವೀಯ ನೆಲೆಗಟ್ಟಿನಿಂದ ಉಳಿಸುವುದು ಎಷ್ಟು ಸರಿ...?
ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು
ಮಹಾರಾಷ್ಟ್ರದ ಯಾವತ್ಮಾಳ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಗುಂಡೇಟಿಗೆ ಬಲಿಯಾದ ಅವನಿಯ ಸಾವಿನ ಸುತ್ತ ಎದ್ದ ಚರ್ಚೆಗಳಿವು. ಅವನಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಮಹಾರಾಷ್ಟ್ರ ಸರ್ಕಾರವೇ ಆದೇಶ ಹೊರಡಿಸಿದ್ದು ವಿವಾದ ಸೃಷ್ಟಿಸಿದೆ. ಮನುಷ್ಯ ಉಳಿಯಬೇಕು ಎಂಬ ಕಾರಣಕ್ಕೆ ಹುಲಿಯನ್ನು ಅಮಾನವೀಯವಾಗಿ ಸಾಯಿಸುವುದು ಸರಿಯೇ ಎಂಬ ಪ್ರಶ್ನೆ ಎದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಸಮಯದಲ್ಲಿ ಅಸ್ಘರ್ ಖಾನ್ ಮಾತನಾಡಿದ್ದಾರೆ.
ಗಾಬರಿ ಮೂಡಿಸಿದ್ದ ಅವನಿಯ ವಿಲಕ್ಷಣ ವರ್ತನೆ
'ಅವನಿ ಕಳೆದ ಎರಡು ವರ್ಷಗಳಿಂದ ನರಭಕ್ಷಕ ಹುಲಿಯಾಗಿ ಬದಲಾಗಿತ್ತು. ಈ ಭಾಗದ 13 ಜನರನ್ನು ಅವನಿ ಕೊಂದಿತ್ತು. ಅದರ ವಿಲಕ್ಷಣ ವರ್ತನೆ ಗಾಬರಿ ಮೂಡಿಸುವಂತಿತ್ತು. ಮನುಷ್ಯನ ಮಾಂಸದ ರುಚಿ ಹತ್ತಿದ್ದರಿಂದ ಅದು ಯಾವತ್ಮಾಳ್ ಅರಣ್ಯದ ಬಳಿಯ ಹಳ್ಳಿಯೊಂದರ ಸಮೀಪ ಪ್ರತಿದಿನ ಬೆಳಿಗ್ಗೆ ತಪ್ಪದೇ ಬರುತ್ತಿತ್ತು. ಶೌಚಾಲಯ ಇಲ್ಲದ ಕಾರಣ, ಬೆಳಿಗ್ಗೆ ಶೌಚಕ್ಕೆಂದು ಬಯಲಿಗೆ ಹೋಗುತ್ತಿದ್ದ ಜನರನ್ನು ಹೊಂಚುಹಾಕಿ ಕೊಂದು ತಿನ್ನುತ್ತಿತ್ತು. ಪ್ರತಿದಿನ ಬೆಳಿಗ್ಗೆ ನಸುಕಿನಲ್ಲಿ ಈ ಊರಿನ ಮೇಲೆ ಕಣ್ಣಿಡುತ್ತಿದ್ದ ಅವನಿಯ ವರ್ತನೆ ತೀರಾ ವಿಲಕ್ಷಣವಾಗಿತ್ತು' ಎನ್ನುತ್ತಾರೆ ಅಸ್ಘರ್.
ನರಭಕ್ಷಕ 'ಅವನಿ ಹುಲಿ' ಇನ್ನಿಲ್ಲ! 13 ಜನರನ್ನು ಕೊಂದಿದ್ದ ಹುಲಿಗೆ ಗುಂಡೇಟು!
ನರಭಕ್ಷಕವಾದ ಮರಿಗಳು
'ಅವನಿ ಹುಲಿಗೆ ಎರಡು ಮರಿಗಳಿವೆ. ಆ ಎರಡು ಮರಿಗಳಿಗೂ ಮನುಷ್ಯರ ಮಾಂಸವನ್ನೇ ಅಭ್ಯಾಸ ಮಾಡಿಸಿರುವುದರಿಂದ ಒಂದು ವರ್ಷ ವಯಸ್ಸಿನ ಆ ಮರಿಗಳೂ ಈಗ ನರಭಕ್ಷಕವಾಗಿವೆ. ಇವು ಒಮ್ಮೆ ನರಭಕ್ಷಕವಾಗಿ ಬದಲಾದರೆ ಅವು ಮತ್ತೆ ಪ್ರಾಣಿಗಳ ಮಾಂಸ ತಿನ್ನುವುದು ಕಷ್ಟ. ಈ ಮರಿಗಳೂ ಮುಂದೆ ಅಪಾಯ ತಂದೊಡ್ಡಬಹುದು ಎಂಬುದೇ ಖೇದದ ಸಂಗತಿ' ಎನ್ನುತ್ತಾರೆ ಅಸ್ಘರ್ ಖಾನ್.
ಇದನ್ನು ಯಶಸ್ವೀ ಕಾರ್ಯಾಚರಣೆ ಅನ್ನೋಲ್ಲ!
ಹೈದರಾಬಾದ್ ಮೂಲದ 36 ವರ್ಷ ವಯಸ್ಸಿನ ಶಾರ್ಪ್ ಶೂಟರ್ ಅಸ್ಘರ್ ಅಲಿ ಖಾನ್ ಅವರನ್ನು ಅವನಿಯನ್ನು ಕೊಲ್ಲಲು ನೇಮಿಸಲಾಗಿತ್ತು. ಯಾವತ್ಮಾಳ್ ಕಾಡಿನಲ್ಲಿ ಶುಕ್ರವಾರ ರಾತ್ರಿ ಕೇವಲ 6-7 ಮೀಟರ್ ದೂರದಲ್ಲಿ ನಿಂತಿದ್ದ 6 ಅಡಿ ಎತ್ತರದ ಅವನಿಯನ್ನು ಅಸ್ಘರ್ ಗುಂಡಿಕ್ಕಿ ಸಾಯಿಸಿದ್ದರು. 'ಇದನ್ನು ಯಶಸ್ವೀ ಕಾರ್ಯಾಚರಣೆ ಎಂದು ನಾನು ಕರೆಯುವುದಿಲ್ಲ. ಒಂದು ಜೀವವನ್ನು ಹತ್ಯೆ ಮಾಡುವುದು ಯಶಸ್ವೀ ಕಾರ್ಯಾಚರಣೆ ಆಗುವುದಿಲ್ಲ. ಆದರೆ ಈ ಭಾಗದ ಜನರ ಜೀವ ತೆಗೆಯುತ್ತಿದ್ದ ಕಾರಣ ಈ ಹುಲಿಯನ್ನು ಕೊಲ್ಲದೆ ವಿಧಿಯಿರಲಿಲ್ಲ, ಅದನ್ನು ಜೀವಂತವಾಗಿ ಹಿಡಿಯುವುದಕ್ಕೂ ಸಾಧ್ಯವಿರಲಿಲ್ಲ' ಎಂದು ಅಸ್ಘರ್ ಪ್ರತಿಕ್ರಿಯೆ ನೀಡಿದ್ದಾರೆ.
ಮನೇಕಾ ಗಾಂಧಿ ಕಿಡಿನುಡಿ
ವನ್ಯಜೀವಿ ಹೋರಾಟಗಾರ್ತಿ ಮತ್ತು ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಅವನಿ ಹತ್ಯೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ಕ್ರಮವನ್ನು ಕಾನೂನಾತ್ಮಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ನಾನಿದನ್ನು ವಿರೋಧಿಸುತ್ತೇನೆ. ಇದನ್ನು ಹೇಯ ಅಪರಾಧ ಕೃತ್ಯ ಎಂದು ನಾನು ಕರೆಯುತ್ತೇನೆ. ಪ್ರಾಣಿಗಳನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಇಂಥ ಆದೇಶ ನೀಡುವುದು, ಪ್ರಾಣಿಯನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ' ಎಂದು ಮನೇಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.