ಏಪ್ರಿಲ್ 1 ರಿಂದ ಗಣತಿ: ಸುಳ್ಳು ಮಾಹಿತಿ ನೀಡಿದರೆ ದಂಡ
ನವದೆಹಲಿ, ಜನವರಿ 17: ಸಿಎಎ, ಎನ್ಆರ್ಸಿ, ಎನ್ಪಿಆರ್ ಗೊಂದಲ ಬಗೆಹರಿಯುವ ಮೊದಲೇ ಎನ್ಪಿಆರ್ ಗೆ ದಿನಾಂಕ ನಿಗದಿ ಆಗಿದ್ದು, ಏಪ್ರಿಲ್ 1 ರಿಂದ ಎಲ್ಲೆಡೆ ಗಣತಿ ಆರಂಭ ಆಗಲಿದೆ.
ಸಿಎಎ, ಎನ್ಸಿಆರ್ ಕುರಿತು ಪ್ರತಿಭಟನೆಗಳು ಇನ್ನೂ ಶಾಂತವಾಗಿಲ್ಲ. 'ಸಿಎಎ, ಎನ್ಸಿಆರ್, ಎನ್ಪಿಆರ್ ಗಳಿಗೆ ತಪ್ಪು ಮಾಹಿತಿ ನೀಡಿ' ಎಂದು ಅರುಂಧತಿ ರಾಯ್ ಸೇರಿದಂತೆ ಇನ್ನೂ ಕೆಲವು ಖ್ಯಾತರು ಕರೆ ನೀಡಿದ್ದಾರೆ. ಹಾಗೊಂದು ವೇಳೆ ಎನ್ಪಿಆರ್ ಗೆ ತಪ್ಪು ಮಾಹಿತಿ ನೀಡಿದರೆ ದಂಡ ತೆರಬೇಕಾಗುತ್ತದೆ.
ಹೌದು, ಏಪ್ರಿಲ್ ಒಂದರಿಂದ ಎನ್ಪಿಆರ್ ಆರಂಭವಾಗುತ್ತಿದ್ದು, ಜನಗಣತಿ ದೇಶದಾದ್ಯಂತ ನಡೆಯಲಿದೆ. ಒಂದು ವೇಳೆ ಎನ್ಪಿಆರ್ ಗೆ ಸುಳ್ಳು ಮಾಹಿತಿ ನೀಡಿದರೆ ಒಂದು ಸಾವಿರ ರೂಪಾಯಿ ದಂಡವನ್ನು ತೆರಬೇಕಾಗುತ್ತದೆ. ಈ ಕುರಿತು ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ನಾಗರಿಕತ್ವ ನಿಯಮ-17ರ ಪ್ರಕಾರ ತಪ್ಪು ಮಾಹಿತಿ ನೀಡಿದವರಿಗೆ ರೂ.1 ಸಾವಿರ ದಂಡ ಹಾಕಲು ಅವಕಾಶವಿದೆ ಎಂದು ಹೇಳಿದೆ. ಆದರೆ, 2011 ಹಾಗೂ 2015ರಲ್ಲಿ ನಡೆದ ಎನ್ಆರ್ಪಿ ಪ್ರಕ್ರಿಯೆ ವೇಳೆ ಈ ನಿಯಮವನ್ನು ಹೆಚ್ಚು ಬಳಕೆ ಮಾಡಿರಲಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಪಿಆರ್ ಮೂಲಕ ಮನೆಗಳಲ್ಲಿ ಲಭ್ಯವಿರುವ ಶೌಚಾಲಯ, ವಾಹನಗಳ ಸಂಖ್ಯೆ ಮತ್ತಿತರ ಬಗ್ಗೆಯೂ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಬಳಸು ಧಾನ್ಯಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ಸಿಎಎ-ಎನ್ಸಿಆರ್-ಎನ್ಪಿಆರ್ ಈ ಮೂರೂ ಪರಸ್ಪರ ಪೂರಕವಾಗಿವೆ ಎಂದು ಹಲವರು ಈ ಮೂರಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರವು ಈ ಮೂರೂ ಪರಸ್ಪರ ಬೇರೆ-ಬೇರೆ. ಎನ್ಪಿಆರ್ ಕೇವಲ ಗಣತಿ ಅಷ್ಟೆ ಎಂದು ಹೇಳಿದೆ.