ಉತ್ತರ-ತತ್ತರ, ಇನ್ನೂ 3 ದಿನ ಮುಂದುವರೆಯಲಿದೆ ಬಿರುಗಾಳಿಯ ಆರ್ಭಟ
ನವದೆಹಲಿ, ಮೇ 04: ಉತ್ತರ ಭಾರತದ ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಎರಡು ದಿನಗಳಿಂದ ಭಾರಿ ಸಾವು ನೋವು ಉಂಟು ಮಾಡಿರುವ ಭಾರಿ ಬಿರುಗಾಳಿ ಮತ್ತು ಮಳೆ ಇನ್ನೂ ಮೂರು ದಿನ ಹೀಗೆ ಮುಂದುವರೆಯುತ್ತದೆಯಂತೆ.
ಬುಧವಾರ ರಾತ್ರಿಯಿಂದ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಧೂಳು ಮಿಶ್ರಿತ ಭಾರಿ ಬಿರುಗಾಳಿ ಮತ್ತು ಮಳೆ ವಿನಾಶ ಸೃಷ್ಠಿಸಿದ್ದು, ಈ ವರೆಗೆ 127 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ.
ಉತ್ತರ ಭಾರತ ಮೇಘಸ್ಫೋಟ: ಸಾವಿಗೀಡಾದವರ ಸಂಖ್ಯೆ 96 ಕ್ಕೆ ಏರಿಕೆ
ಈ ಭಾರಿ ಬಿರುಗಾಳಿ ಮತ್ತು ಮಳೆ ಇನ್ನೂ ಮೂರು ದಿನ ಅಂದರೆ ಮೇ 07ರವರೆಗೆ ನಿಲ್ಲುವ ಲಕ್ಷಣ ತೋರುತ್ತಿಲ್ಲ, ಇನ್ನೂ ಹೆಚ್ಚಿನ ಹಾನಿಯನ್ನು ಮಾಡುವ ಜೊತೆಗೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಇನ್ನಷ್ಟು ವಿನಾಶದ ಮುನ್ಸೂಚನೆ ನೀಡಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮೇ 05ರಂದು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಾಂಡ್ ಗಳಲ್ಲಿ ಭಾರಿ ಗುಡುಗು ಸಹಿತ ಮಳೆ ಬೀಳಲಿದೆ ಮತ್ತು ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಂ, ತ್ರಿಪುರಾ, ಒಡಿಸ್ಸಾ ಮತ್ತು ಕೇರಳದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಕೆ ಮುನ್ಸೂಚನೆ ನೀಡಿದೆ.
ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ಮಣಿಪುರ ಮಿಝೋರಂ, ತ್ರಿಪುರಾಗಳಲ್ಲಿ ಅತಿಯಾದ ಮಳೆ ಆಗುವ ಸಂಬವ ಇದ್ದರೆ ಪಶ್ಚಿಮ ರಾಜಸ್ಥಾನದಲ್ಲಿ ಬಿಸಿ ಗಾಳಿ ಏಳುವ ಸಂಭವವಿದೆ.
ಮೇ 07ರಂದು ಹಿಮಾಚಲ ಪ್ರದೇಶದ ಬಹುತೇಕ ಕಡೆ ಭಾರಿ ಮಳೆ, ಗಾಳಿ ಜೊತೆಗೆ ಆಲಿಕಲ್ಲು ಉದುರುಲಿದೆ. ಜಮ್ಮು ಕಾಶ್ಮೀರ, ಉತ್ತರಾಖಾಂಡ್, ಪಂಜಾಬ್, ಹರಿಯಾಣಾ, ಚಂಡೀಘಡ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಬೀಳಲಿದೆ.