ನೋಟು ರದ್ದತಿ ಎಂಬ ಭಯೋತ್ಪಾದನಾ ದಾಳಿ: ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ನವದೆಹಲಿ, ನವೆಂಬರ್ 8: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಮಾಡುವ ನಿರ್ಧಾರ ಪ್ರಕಟಿಸಿ ಶುಕ್ರವಾರಕ್ಕೆ (ನ.8) ಮೂರು ವರ್ಷ. ಈ ದಿನವನ್ನು ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧಪಕ್ಷಗಳು, ಸಂಘಟನೆಗಳು ಕರಾಳ ದಿನ ಎಂದು ಕರೆದಿವೆ.
500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ 2016ರಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಭಯೋತ್ಪಾದನಾ ದಾಳಿ' ಎಂದು ಟೀಕಿಸಿದ್ದಾರೆ.
ನೋಟು ಅಮಾನ್ಯೀಕರಣದಿಂದ ದಿವಾಳಿ: ದಯಾಮರಣಕ್ಕೆ ಅರ್ಜಿ
'ಅಪನಗದೀಕರಣದ ಭಯೋತ್ಪಾದನಾ ದಾಳಿಗೆ ಇಂದು ಮೂರು ವರ್ಷ. ಈ ದಾಳಿಯು ಭಾರತದ ಆರ್ಥಿಕತೆಯನ್ನು ಛಿದ್ರಗೊಳಿಸಿದೆ, ಅನೇಕ ಜೀವಗಳನ್ನು ಬಲಿತೆಗೆದುಕೊಂಡಿದೆ, ಲಕ್ಷಾಂತರ ಸಣ್ಣ ಉದ್ದಿಮೆಗಳನ್ನು ನಾಶಮಾಡಿ, ಲಕ್ಷಗಟ್ಟಲೆ ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ' ಎಂದು ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
'ಈ ಅನೈತಿಕ ದಾಳಿಯ ಹಿಂದೆ ಇದ್ದವರು ಇನ್ನೂ ನ್ಯಾಯ ದೊರಕಿಸಿಕೊಟ್ಟಿಲ್ಲ' ಎಂದು ಅವರು ಆರೋಪಿಸಿದ್ದಾರೆ.
ಹೊಣೆ ಹೊರುವವರು ಯಾರು?
'ಅಪನಗದೀಕರಣಕ್ಕೆ ಮೂರು ವರ್ಷ. ಈ ನಿರ್ಧಾರದ ಬಗ್ಗೆ ಸರ್ಕಾರ ಮಾಡಿದ್ದ ಪ್ರತಿ ಸಮರ್ಥನೆಗಳು ಮತ್ತು ಅದನ್ನು ದುಷ್ಟರ ನಿರ್ಮೂಲನೆಯ ದಿಟ್ಟ ಹೆಜ್ಜೆ ಎಂದು ಪ್ರಶಂಸಿಸುತ್ತಿದ್ದವರೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ. ಇದು ದೊಡ್ಡ ವೈಫಲ್ಯ ಎಂಬುದು ಸಾಬೀತಾಗಿದೆ. ಆದರೆ ಅದಕ್ಕಿಂತಲೂ ಮಿಗಿಲಾಗಿ ನಮ್ಮ ಆರ್ಥಿಕತೆಯನ್ನೇ ನಾಶಪಡಿಸಿದೆ. ಇದಕ್ಕೆ ಈಗ ಯಾರಾದರೂ ಹೊಣೆ ಹೊತ್ತುಕೊಳ್ಳುತ್ತಾರೆಯೇ?' ಎಂದು ಪ್ರಿಯಾಂಕಾ ಗಾಂಧಿ ವಾಧ್ರಾ ಪ್ರಶ್ನಿಸಿದ್ದಾರೆ.
ಅಂಕಿಅಂಶಗಳೇ ತೋರಿಸುತ್ತಿವೆ
'ಅಪನಗದೀಕರಣದ ದುರಂತದ ಮೂರವೇ ವರ್ಷ ಇಂದು. ಈ ಪ್ರಕಟಣೆ ಮಾಡಿದ ಒಂದು ನಿಮಿಷದ ಒಳಗೇ, ಇದು ಆರ್ಥಿಕತೆಯನ್ನು ಮತ್ತು ಲಕ್ಷಾಂತರ ಬದುಕನ್ನು ನಾಶಮಾಡುತ್ತದೆ ಎಂದು ಹೇಳಿದ್ದೆ. ಪ್ರತಿಷ್ಠಿತ ಆರ್ಥಿಕ ತಜ್ಞರು, ಜನಸಾಮಾನ್ಯರು ಮತ್ತು ಎಲ್ಲ ಪರಿಣತರೂ ಈಗ ಅದನ್ನು ಒಪ್ಪುತ್ತಾರೆ. ಆರ್ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇದು ವ್ಯರ್ಥ ಕೆಲಸವಾಗಿತ್ತು ಎಂಬುದನ್ನು ತೋರಿಸುತ್ತಿವೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ನೋಟು ನಿಷೇಧ ಕ್ರಮ: ಮೋದಿಯನ್ನು ಟೀಕಿಸಿದ ಬಾಬಾ ರಾಮ್ದೇವ್
ಬದುಕು ಕಸಿದುಕೊಂಡ ದಿನ
ಈ ದಿನವನ್ನು ನೋಟು ನಿಷೇಧಗೊಂಡ ದಿನ ಎನ್ನುವುದಕ್ಕಿಂತ, ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನವೆನ್ನುವುದೇ ಸೂಕ್ತ. ಅಂದು ಬ್ಯಾಂಕುಗಳ ಮುಂದಿನ ಸರತಿ ಸಾಲಿನಲ್ಲಿ ಆರಂಭಗೊಂಡ ಸಾವಿನ ಸರಪಳಿ ಇಂದಿಗೂ ಜನರ ವ್ಯಾಪಾರ, ಉದ್ಯೋಗವನ್ನು ಕಸಿದುಕೊಳ್ಳುತ್ತಾ ಬಡಜನರ ಬಲಿ ಪಡೆಯುತ್ತಲೇ ಇದೆ - ಸಿದ್ದರಾಮಯ್ಯ
ಮೂರ್ಖತನದ ನೀತಿ ಇನ್ನೊಂದಿಲ್ಲ
ಇಂದು ನೋಟು ರದ್ದತಿ ದುರಂತದ ಮೂರನೇ ವರ್ಷ. ಸ್ವತಂತ್ರ ಭಾರತದಲ್ಲಿ ಇದಕ್ಕಿಂತ ಕೆಟ್ಟ ಚಿಂತನೆ, ಮೂರ್ಖತನದ ನೀತಿಯ ನಿರ್ಧಾರ ಇನ್ನೊಂದಿಲ್ಲ. ನಮ್ಮ ಆರ್ಥಿಕತೆ ಸಂಪೂರ್ಣ ನೆಲಕಚ್ಚಿ ಕೋಟ್ಯಂತರ ಭಾರತೀಯರು ಇಂದಿಗೂ ಪರದಾಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು- ದಿನೇಶ್ ಗುಂಡೂರಾವ್.
ಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆ