ಹೀನಾಯ ಸೋಲಿನ ಮುನ್ಸೂಚನೆಯಿಂದಲೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಅಮಿತ್ ಶಾ?
ದೆಹಲಿ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಆಮ್ ಆದ್ಮಿ ಪಕ್ಷ ವಿಜಯ ಪತಾಕೆ ಹಾರಿಸಿದೆ ಎನ್ನುವುದಕ್ಕಿಂತ ಬಿಜೆಪಿ ಮತ್ತು ಕಾಂಗ್ರೆಸ್ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ನೆಲಕಚ್ಚಿದೆ. ಅರವತ್ತಕ್ಕೂ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದರೆ, ಇದೆಂತಹ ಮುಖಭಂಗ ಎಂದು ಅರ್ಥವಾಗಬಹುದು.
ಕಳೆದ ಚುನಾವಣೆಗೆ ಹೋಲಿಸಿದರೆ, ಬಿಜೆಪಿಗೆ, ಸೀಟು ಮತ್ತು ಮತಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವುದಷ್ಟೇ ನೆಮ್ಮದಿ ತರುವ ವಿಚಾರ. ಬಿಜೆಪಿ ಸೋಲನ್ನು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ, ಅಧ್ಯಕ್ಷ ಹುದ್ದೆಯನ್ನು ಇನ್ನೊಬ್ಬರಿಗೆ ಹಸ್ತಾಂತರಿಸಿದ್ದು.
ದೆಹಲಿ ಫಲಿತಾಂಶ: ಖಾಲಿ ಕೈಯಲ್ಲಿ ಬಂದು, ಖಾಲಿ ಕೈಯಲ್ಲೇ ವಾಪಸ್ ಹೋದ ಕಾಂಗ್ರೆಸ್
ಆಮ್ ಆದ್ಮಿ ಪಕ್ಷವನ್ನು ಭಾರತಕ್ಕೆ, ಬಿಜೆಪಿಯವನ್ನು ಪಾಕಿಸ್ತಾನಕ್ಕೆ ಹೋಲಿಸುವ ಮೇಮ್ಸ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಕಾರಣ, ಬಿಜೆಪಿ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡದೇ, ಪಾಕಿಸ್ತಾನ, ಶಹೀನ್ ಬಾಗ್ ವಿಷಯವನ್ನು ಅಗತ್ಯಕ್ಕಿಂತೆ ಹೆಚ್ಚು ಪ್ರಚಾರದಲ್ಲಿ ಪ್ರಸ್ತಾವಿಸಿದ್ದು.
ದೆಹಲಿಯಲ್ಲಿ ಬಿಜೆಪಿ ಸೋಲ್ತಾ ಇದೆ, ಹಾಗಾಗಿ ಇವಿಎಂ (ವೋಟಿಂಗ್ ಮೆಷಿನ್) ಸರಿಯಿರುತ್ತೆ ಬಿಡಿ
ಅಸಲಿಗೆ, ಬಿಜೆಪಿಯ ಪ್ರಚಾರ ತಂತ್ರ ಸರಿಯಿರಲಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗುವುದು ಈ ವಿಚಾರದಲ್ಲೇ. ಅದೇ, ಆಮ್ ಆದ್ಮಿ ಪಕ್ಷ, ಹೋದ ಪ್ರಣಾಳಿಕೆಯಲ್ಲಿ ಹೇಳಿದ್ದೇನು, ಸಾಧಿಸಿದ್ದೇನು ಎನ್ನುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿತ್ತು. ವೈಯಕ್ತಿಕ ಟೀಕೆಗೆ ಮುಂದಾಗಲಿಲ್ಲ. ಸಾಫ್ಟ್ ಹಿಂದುತ್ವವನ್ನು ಎಷ್ಟು ಬೇಕೋ, ಅಷ್ಟು ಬಳಸಿಕೊಂಡಿತು.
ಸೋತರೂ, ಗೆದ್ದರೂ, ಅದನ್ನು ತಲೆಗೆ ಕಟ್ಟುವುದು ಮೋದಿ, ಶಾ ಮೇಲೆಯೇ ಅದು ವಾಸ್ತವತೆ
ಬಿಜೆಪಿ ಪ್ರಚಾರಕ್ಕೆ ಎತ್ತಿಕೊಂಡಂತಹ ವಿಷಯಗಳು, ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದರೂ, ದೆಹಲಿಯಲ್ಲಿ ಮಾತ್ರ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಈ ಬಾರಿಯೂ, ಆಮ್ ಆದ್ಮಿ ಮುಂದೆ ಆಟ ನಡೆಯುವುದಿಲ್ಲ ಎನ್ನುವುದನ್ನು ಅರಿತೇ ಅಮಿತ್ ಶಾ ರಾಷ್ಟ್ರಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದರೇ ಎನ್ನುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ. ಆದರೆ, ಸೋತರೂ, ಗೆದ್ದರೂ, ಅದನ್ನು ತಲೆಗೆ ಕಟ್ಟುವುದು ಮೋದಿ, ಶಾ ಮೇಲೆಯೇ ಎನ್ನುವುದು ವಾಸ್ತವತೆ.
ಜೆ.ಪಿ.ನಡ್ಡಾ ಮೊದಲ ಪ್ರಯತ್ನದಲ್ಲೇ ಸೋಲು
ನೂತನ ಅಧ್ಯಕ್ಷ ಜೆ.ಪಿ.ನಡ್ಡಾ ಮೊದಲ ಪ್ರಯತ್ನದಲ್ಲೇ ಸೋಲು ಅನುಭವಿಸಿದ್ದಾರೆ. ಇದು ಬರೀ ಸೋಲಲ್ಲ ನಡ್ಡಾ ರಾಜಕೀಯ ಬದುಕಿನ ಬಹುದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಯಾಕೆಂದರೆ, ಸೋಲಿನ ನಂತರ ಬಿಜೆಪಿಯ ನಾಯಕರೇ ಹೇಳುವಂತೆ, "ಕಳೆದ 22ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೇರಲು ಸಾಧ್ಯವಾಗಲಿಲ್ಲ ಎನ್ನುವ ನೋವು ನಮ್ಮನ್ನು ಕಾಡುತ್ತಿದೆ" ಎಂದು.
ಜವಾಬ್ದಾರಿಯನ್ನು, ನಡ್ಡಾಗೆ ವಹಿಸಿದ್ದೇಕೆ
ಪಕ್ಷದ ಆಂತರಿಕ ವಲಯದಲ್ಲಿ ಚಾಣಾಕ್ಯ ಎಂದು ಕರೆಯಲ್ಪಡುವ ಅಮಿತ್ ಶಾ, ಬಹುಮುಖ್ಯವಾದ ದೆಹಲಿ ಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಲದೇ, ಚುನಾವಣೆಗೆ ಮೂರು ವಾರ ಇರುವಂತೆಯೇ ಜವಾಬ್ದಾರಿಯನ್ನು, ನಡ್ಡಾಗೆ ವಹಿಸಿದ್ದೇಕೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಏನೇ ರಣತಂತ್ರ ರೂಪಿಸಿದರೂ, ದೆಹಲಿ ಮತದಾರನ ಮೂಡ್ , ಕೇಜ್ರಿವಾಲ್ ಪರ ಇರುವುದನ್ನು ಅರಿತ ಅಮಿತ್ ಶಾ, ಮುಂಜಾಗೃತೆಯಾಗಿ ಕೆಳಗಿಳಿದರೇ ಎನ್ನುವ ಪ್ರಶ್ನೆಗೆ ಉತ್ತರ ಇಂದಲ್ಲಾ, ನಾಳೆ ಸಿಗಬಹುದು.
ಬಿಜೆಪಿ ಆಂತರಿಕ ವಲಯದಿಂದ ಕೇಳಿಬರುತ್ತಿರುವ ಮಾತು
ಅಮಿತ್ ಶಾ ಅಧ್ಯಕ್ಷರಾಗಿದ್ದರೆ, ಫಲಿತಾಂಶ ಬಿಜೆಪಿ ಪರ ವಾಲುತ್ತಿತ್ತು ಎಂದು ಹೇಳಲಾಗದಿದ್ದರೂ, ಕಾರ್ಯಕರ್ತರಿಗೆ ಮತ್ತು ಮತದಾರರಿಗೂ ಸ್ವಲ್ಪಮಟ್ಟಿನ ವ್ಯತ್ಯಾಸ ಇದರಿಂದ ಕಾಣಬಹುದಾಗಿತ್ತು ಎನ್ನುವುದು ಬಿಜೆಪಿ ಆಂತರಿಕ ವಲಯದಿಂದ ಕೇಳಿಬರುತ್ತಿರುವ ಮಾತು. ಯಾಕೆಂದರೆ, ಈಗ ತಾನೇ ಅಧಿಕಾರ ತೆಗೆದುಕೊಂಡಿರುವ ನಡ್ಡಾಗೆ ಸ್ವಲ್ಪವಾದರೂ ಉಸಿರಾಡಲು ಅವಕಾಶ ನೀಡದೇ ನಿರ್ಣಾಯಕ ಚುನಾವಣೆಯ ವೇಳೆ ಅಮಿತ್ ಶಾ ಕೆಳಗಿಳಿದ್ದು ಸರಿಯಲ್ಲ ಎನ್ನುವುದು ಒಟ್ಟಾರೆಯಾಗಿ ಕೇಳಿಬರುತ್ತಿರುವ ಮಾತು.
ಹೀನಾಯ ಸೋಲಿನ ಮುನ್ಸೂಚನೆ
ದೆಹಲಿಯಲ್ಲಿ ಸೋಲು ನಿಶ್ಚಿತ ಎನ್ನುವುದು ಬಿಜೆಪಿ ಮುಖಂಡರಿಗೂ ತಿಳಿದಿತ್ತು ಎನ್ನುವುದು ಆ ಪಕ್ಷದ ಮುಖಂಡರ ಪ್ರತಿಕ್ರಿಯೆಯಿಂದ ತಿಳಿದುಕೊಳ್ಲಬಹುದಾಗಿದೆ. ಈಗಾಗಲೇ, ಹಲವು ರಾಜ್ಯಗಳಲ್ಲಿ ಸೋಲು ಕಂಡಿರುವುದರಿಂದ ಮತ್ತು ಮಹಾರಾಷ್ಟ್ರದಲ್ಲೂ ಕೈಗೆ ಬಂದ ಬಾಯಿಗೆ ಬರದ ಹಿನ್ನಲೆಯಲ್ಲಿ ಅಮಿತ್ ಶಾ ನಿಜವಾದ ಚಾಣಕ್ಯನಾ ಎನ್ನುವ ಪ್ರಶ್ನೆ ಏಳಲಾರಂಭಿಸಿತ್ತು. ಇಂತಹ ಸಂದರ್ಭದಲ್ಲಿ ದೆಹಲಿ ಸೋಲು ತನಗಾಗುವ ಮತ್ತೊಂದು ಹಿನ್ನಡೆ ಎಂದೇ ಅಮಿತ್ ಶಾ, ಚುನಾವಣೆಗೆ ಸ್ವಲ್ಪದಿನ ಮುನ್ನ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದರು, ಎನ್ನುವ ಮಾತು ಚಾಲ್ತಿಯಲ್ಲಿದೆ.