ಕಲ್ಲಿದ್ದಲು ಹಗರಣ: ಗುಪ್ತಾ ಸೇರಿ ಮೂವರಿಗೆ 2 ವರ್ಷ ಜೈಲು, ಕ್ಷಣದಲ್ಲೇ ಬೇಲು
ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಹಾಗೂ ಇತರೆ ಇಬ್ಬರು ಅಧಿಕಾರಿಗಳಿಗೆ ಪಟಿಯಾಲಾದ ಸಿಬಿಐ ವಿಶೇಷ ಕೋರ್ಟ್ ಇಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆನ್ನಿಗೆ ಜಾಮೀನೂ ಮಂಜ
ನವದೆಹಲಿ, ಮೇ 22: ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ದೋಷಿಗಳಾಗಿದ್ದ ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಹಾಗೂ ಇತರೆ ಇಬ್ಬರು ಅಧಿಕಾರಿಗಳಿಗೆ ಪಟಿಯಾಲಾದ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೆನ್ನಿಗೆ ಜಾಮೀನೂ ಮಂಜೂರು ಮಾಡಲಾಗಿದೆ.
ಸಿಬಿಐ ವಿಶೇಷ ಕೋರ್ಟ್ ಕಳೆದ ಶುಕ್ರವಾರ ಎಚ್.ಸಿ ಗುಪ್ತಾರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಮಧ್ಯ ಪ್ರದೇಶದ ಖಾಸಗಿ ಕಂಪನಿಗೆ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಕ್ರಿಮಿನಲ್ ಸಂಚು ರೂಪಿಸಿದ ಪ್ರಕರಣದಲ್ಲಿ ಅವರ ಮೇಲಿನ ಆರೋಪ ಸಾಬೀತಾಗಿತ್ತು. ಇದರ ಶಿಕ್ಷೆಯ ಪ್ರಮಾಣವನ್ನು ವಿಶೇಷ ನ್ಯಾಯಾಲಯ ಇಂದು ಘೋಷಿಸುವುದಾಗಿ ಹೇಳಿತ್ತು.
ಅದರಂತೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ ಗುಪ್ತಾ, ಅಂದಿನ ಕಲ್ಲಿದ್ದಲು ಇಲಾಖೆ ಜಂಟಿ ಕಾರ್ಯದರ್ಶಿ ಕೆ.ಎಸ್. ಕ್ರೊಫಾ ಹಾಗೂ ಇಲಾಖೆಯ ಅಂದಿನ ನಿರ್ದೇಶಕ ಕೆ.ಸಿ. ಸಮಾರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿದೆ. ಜತೆಗೆ ಅಕ್ರಮ ಎಸಗಿದ ಕಲ್ಲಿದ್ದಲು ಕಂಪನಿ ಕೆಎಸ್ಎಸ್ಪಿಎಲ್ ಗೆ 1 ಕೋಟಿ ರೂ. ದಂಡ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಕುಮಾರ್ ಅಹ್ಲುವಾಲಿಯಾಗೆ 3 ವರ್ಷ ಜೈಲು ಮತ್ತು 30 ಲಕ್ಷ ರೂ. ದಂಡ ವಿಧಿಸಿದೆ.
ಮಧ್ಯಪ್ರದೇಶದ ರುದ್ರಪುರಿ ಕಲ್ಲಿದ್ದಲು ಗಣಿಯನ್ನು ಕೆಎಸ್ಎಸ್ಪಿಎಲ್ ಕಂಪೆನಿಗೆ ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರ ವಿರುದ್ಧ ಸಿಬಿಐ 2012 ಅಕ್ಬೋಬರ್ ನಲ್ಲಿ ಎಫ್ಐಆರ್ ದಾಖಲಿಸಿತ್ತು. ಇನ್ನು ನ್ಯಾಯಾಲಯ ಪ್ರಕರಣದ ಮತ್ತೊಬ್ಬ ಆರೋಪಿ ಸಿಎ ಅಮಿತ್ ಗೋಯಲ್ ರನ್ನು ಎಲ್ಲಾ ಆರೋಪಗಳಿಂದ ಮುಕ್ತ ಮಾಡಿದೆ.
ಆದರೆ ಶಿಕ್ಷೆ ನೀಡಿದ ಕೆಲವೇ ಗಂಟೆಗಳಲ್ಲಿ ಅಪರಾಧಿಗಳಿಗೆ ಇದೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಎಚ್.ಸಿ ಗುಪ್ತಾ, ಕೆ.ಎಸ್ ಕ್ರೊಫಾ, ಮತ್ತು ಕೆ.ಸಿ ಸಮಾರಿಯಾಗೆ ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಒಬ್ಬರ ಭದ್ರತೆಯ ಮೇಲೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಇನ್ನು ಪವನ್ ಕುಮಾರ್ ಅಹ್ಲುವಾಲಿಯಾಗೂ ಜಾಮೀನು ಮಂಜೂರು ಮಾಡಲಾಗಿದೆ.