ಹರಿಯಾಣ: ಬ್ಯಾಟರಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಮೂವರು ಕಾರ್ಮಿಕರ ಸಾವು
ನವದೆಹಲಿ, ಮೇ 22: ಹರ್ಯಾಣ ಫರಿದಾಬಾದ್ನಲ್ಲಿ ವಾಹನಗಳಿಗೆ ಬಳಸುವ ಲೀಥಿಯಂ ಬ್ಯಾಟರಿ ಸೆಲ್ಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ದೆಹಲಿಯ ಲಾಲ್ ಕೌನ್ ನಿವಾಸಿಗಳಾದ ಸತ್ಬೀರ್ (27), ಸುನೀಲ್ (22) ಹಾಗೂ ಅಂಕಿತ್ (23) ಎಂದು ಗುರುತಿಸಲಾಗಿದೆ. ಇವರು ಕೆಲವು ದಿನಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
"ಫರಿದಾಬಾದ್ ನ ಆನಂಗ್ ಪುರ್ ಡೇರಿ ಪ್ರದೇಶದ ಸೆಕ್ಟರ್ 37ರಲ್ಲಿ ಲೀಥಿಯಂ ಬ್ಯಾಟರಿ ಸೆಲ್ ತಯಾರಿಕಾ ಕಾರ್ಖಾನೆ ಇದೆ. ಈ ಕಟ್ಟಡವು ನೆಲಮಹಡಿ ಹಾಗೂ ಎರಡು ಅಂತಸ್ತುಗಳನ್ನು ಹೊಂದಿದೆ. ಆದರೆ ಅಗ್ನಿ ಆಕಸ್ಮಿಕ ಸಂಭವಿಸಿದರೆ ಅದನ್ನು ನಂದಿಸಲು ಬೇಕಿರುವ ಸುರಕ್ಷತಾ ಪರಿಕರಗಳೇ ಕಟ್ಟಡದಲ್ಲಿ ಇರಲಿಲ್ಲ. ಘಟನೆ ಕುರಿತು ಮಾಹಿತಿ ರವಾನೆಯಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಒಂದು ಗಂಟೆಯಲ್ಲಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ'' ಎಂದು ಫರಿದಾಬಾದ್ ಅಗ್ನಿಶಾಮಕ ದಳದ ಎಡಿಎಫ್ಒ ಸತ್ಯವಾನ್ ಮಾಹಿತಿ ನೀಡಿದರು.
"ಪ್ರಾಥಮಿಕ ತನಿಖೆಯ ಪ್ರಕಾರ ಮೊದಲು ನೆಲಮಹಡಿಯಲ್ಲಿ ಬೆಂಕಿ ಹತ್ತಿಕೊಂಡಿದೆ. ನಂತರ ಅದು ಮೊದಲನೇ ಅಂತಸ್ತಿಗೆ ವ್ಯಾಪಿಸಿದೆ. ಬ್ಯಾಟರಿಗಳಿಂದ ಹೊರಹೊಮ್ಮಿದ ವಿಷ ಅನಿಲ ಸೇವಿಸಿ ಉಸಿರುಗಟ್ಟಿ ಮೂವರು ಮೃತಪಟ್ಟಿರುವ ಸಾಧ್ಯತೆ ಇದೆ'' ಎಂದು ಅವರು ತಿಳಿಸಿದರು.
"ಘಟನೆಯ ಸಂದರ್ಭದಲ್ಲಿ ನಾಲ್ವರು ಕೆಲಸಗಾರರು ಮೊದಲನೇ ಅಂತಸ್ತಿನಲ್ಲಿದ್ದರು. ಮೊದಲನೇ ಅಂತಸ್ತಿಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಕಟ್ಟಡದಿಂದ ಹೊರಬರಲು ಒಬ್ಬನಿಗೆ ಮಾತ್ರ ಸಾಧ್ಯವಾಯಿತು. ಉಳಿದ ಮೂವರು ಶೌಚಾಲಯಕ್ಕೆ ತೆರಳಿ ರಕ್ಷಣೆ ಪಡೆಯಲು ಪ್ರಯತ್ನಿಸಿದರು. ಆದರೆ ಬ್ಯಾಟರಿಗಳು ಸ್ಫೋಟಿಸಿ, ಇಡೀ ಅಂತಸ್ತಿಗೆ ಬೆಂಕಿ ವ್ಯಾಪಿಸಲು ಆರಂಭವಾಯಿತು. ಅವರು ಅಲ್ಲೇ ಉಸಿರುಗಟ್ಟಿ ಮೃತಪಟ್ಟರು. ಬೆಂಕಿ ತಹಬದಿಗೆ ಬಂದ ನಂತರ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಒಳಗೆ ಪ್ರವೇಶಿಸಿ, ಮೃತದೇಹಗಳನ್ನು ಹೊರಗೆ ತೆಗೆದುಕೊಂಡು ಬಂದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕಾರ್ಖಾನೆಯ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡುತ್ತಿದೆ'' ಎಂದು ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಮ್ಪಾಲ್ ಸಿಂಗ್ ವಿವರಿಸಿದರು.
"ಅಗ್ನಿ ಅವಘಡದಲ್ಲಿ ಮೃತ ಸತ್ಬೀರ್ ನ ಮದುವೆ ಕಳೆದ ವರ್ಷ ಆಯಿತು. ದಂಪತಿಗೆ ಕೆಲವು ದಿನಗಳ ಹಿಂದೆಯಷ್ಟೇ ಮಗಳು ಜನಿಸಿದಳು. ಆದರೆ ಇದು ತುಂಬ ದುಃಖದ ವಿಷಯ. ಈಗ ಮಾತನಾಡಲು ನಮಗೆ ಪದಗಳೇ ಬರುತ್ತಿಲ್ಲ. ಕಾರ್ಖಾನೆಯ ಮಾಲೀಕನ ನಿರ್ಲಕ್ಷ್ಯದಿಂದಾಗಿ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೆ ಜೀವಗಳನ್ನು ಉಳಿಸಬಹುದಿತ್ತು'' ಎಂದು ಸತ್ಬೀರ್ ಸಂಬಂಧಿಕರು ಕಣ್ಣೀರು ಹಾಕಿದರು.
"ಕಾರ್ಖಾನೆಯಲ್ಲಿ 20 ಮಂದಿ ಕೆಲಸ ಮಾಡುತ್ತಾರೆ. ಅವಘಡ ಸಂಭವಿಸಿದ ಸಂದರ್ಭದಲ್ಲಿ ನೆಲ ಮಹಡಿಯಲ್ಲಿ 2-3 ಕೆಲಸಗಾರರು ಇದ್ದರು. ಅವರು ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಕಾರ್ಖಾನೆಯಿಂದ ಹೊರಗೆ ಓಡಿದರು'' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
"ಸ್ಫೋಟದ ಸದ್ದು ಕೇಳುತ್ತಿದ್ದಂತೆ ನಾನು ಕಾರ್ಖಾನೆಯಿಂದ ಹೊರಗೆ ಓಡಿದೆ. ಹೊರಗೆ ಬರಲು ಕಾರ್ಖಾನೆಯಲ್ಲಿ ಕೇವಲ ಒಂದೇ ಒಂದು ಬಾಗಿಲಿದೆ. ತುರ್ತು ನಿರ್ಗಮನ ಬಾಗಿಲು ಇಲ್ಲ. ಕೆಲವು ಬ್ಯಾಟರಿಗಳು ಸ್ಫೋಟಗೊಂಡು, ಸಿಡಿಯಲು ಪ್ರಾರಂಭಿಸಿತು. ಹೆದರಿಕೆಯಿಂದ ಸತ್ಬೀರ್, ಸುನೀಲ್ ಮತ್ತು ಅಂಕಿತ್ ಶೌಚಾಲಯಕ್ಕೆ ಓಡಿ ಹೋಗಿ ಅಡಗಿರಬಹುದು'' ಎಂದು ಕಾರ್ಖಾನೆಯಿಂದ ಹೊರಬಂದು ಜೀವ ಉಳಿಸಿಕೊಂಡ ಅಮ್ರಿತ್ ಮಾಹಿತಿ ನೀಡಿದರು.
"ಲೀಥಿಯಂ ಬ್ಯಾಟರಿ ಸೆಲ್ ತಯಾರಿಕ ಕಾರ್ಖಾನೆ ಆಗಿರುವುದರಿಂದ ಅಗ್ನಿ ಅವಘಡ ತಡೆಯುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಹಾಗೂ ಒಂದೇ ಬಾಗಿಲು ಇರುವುದರಿಂದ ತುರ್ತು ನಿರ್ಗಮನಕ್ಕಾಗಿ ಮತ್ತೊಂದು ಎಕ್ಸಿಟ್ ಬಾಗಿಲು ನಿರ್ಮಿಸುವಂತೆ ಹಲವು ಬಾರಿ ಕಾರ್ಖಾನೆಯ ಮಾಲೀಕರಿಗೆ ಮನವಿ ಮಾಡಿದೆವು. ಆದರೆ ಇದನ್ನು ಅವರು ಕಿವಿಗೆ ಹಾಕಿಕೊಳ್ಳಲಿಲ್ಲ'' ಎಂದು ಅಮ್ರಿತ್ ಬೇಸರ ವ್ಯಕ್ತಪಡಿಸಿದರು.