'ಮಹಾ' ಸುದ್ದಿ: ಕೃಷಿ ಕಾಯ್ದೆ ವಿರುದ್ಧ ದಕ್ಷಿಣದಲ್ಲೂ ಧಿಕ್ಕಾರದ ಕೂಗು!
ನವದೆಹಲಿ, ಜನವರಿ.24: ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟದ ಕೂಗು ದೇಶಾದ್ಯಂತ ವ್ಯಾಪಿಸುತ್ತಿದೆ. ಮಹಾರಾಷ್ಟ್ರದ 21 ಜಿಲ್ಲೆಗಳಲ್ಲಿಂದ ಸಾವಿರಾರು ರೈತರು ನಾಸಿಕ್ ನಲ್ಲಿ ಒಟ್ಟುಕೂಡಿದ್ದು, ಅಲ್ಲಿಂದ ರಾಜಧಾನಿ ಮುಂಬೈನವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ.
ಮಹಾರಾಷ್ಟ್ರದಾದ್ಯಂತ 180 ಕಿಲೋ ಮೀಟರ್ ಸಂಚರಿಸಲಿರುವ ಪ್ರತಿಭಟನಾ ಮೆರವಣಿಗೆಯು ಮುಂಬೈನ ಅಜಾದ್ ಮೈದಾನಕ್ಕೆ ತಲುಪಲಿದೆ. ಕೇಂದ್ರ ಸರ್ಕಾರ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ಆಡಳಿತ ಪಕ್ಷ ಮಹಾ ವಿಕಾಸ್ ಅಘಾದಿ ದಲ್ಲಿ ಒಂದಾಗಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ಭಾಗಿಯಾಗಲಿದ್ದಾರೆ.
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
ನಾಸಿಕ್ ಮತ್ತು ಮುಂಬೈ ನಗರಗಳ ನಡುವಿನ ಕೇಸರ ಘಾಟ್ ಪ್ರದೇಶದಲ್ಲಿ ಸಾಗರೋಪಾದಿಯಲ್ಲಿ ಪ್ರತಿಭಟನಾನಿರತ ರೈತರು ಹಸಿರು ಬಾವುಟ ಹಿಡಿದು ನಡೆಯುತ್ತಿರುವ ದೃಶ್ಯ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗುತ್ತಿವೆ.
ರೈತರು ಮುಂಬೈ ತಲುಪುವುದು ಯಾವಾಗ?
ಮಹಾರಾಷ್ಟ್ರದ ಸ್ಥಳೀಯ ರೈತ ಸಂಘಟನೆಗಳು ಮತ್ತು ಸಾಮಾನ್ಯ ರೈತರು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾ ಸಂಘಟನೆಯ ಒಕ್ಕೂಟದಿಂದ ಹಿಡಿದು ಸ್ಥಳೀಯ ಸಂಘಟನೆ ಸದಸ್ಯರು ಒಟ್ಟಾಗಿ ರ್ಯಾಲಿ ನಡೆಸುತ್ತಿದ್ದಾರೆ. ರೈತರ ಪ್ರತಿಭಟನಾ ಮೆರವಣಿಗೆಯು ಸೋಮವಾರ ಮುಂಬೈ ಆಜಾದ್ ಮೈದಾನಕ್ಕೆ ತಲುಪಲಿದೆ.
ದೆಹಲಿ ರೈತರನ್ನು ನೋಡಿ ಬೆಂಬಲಿಸಿ ಎಂದ ಪವಾರ್
ನವದೆಹಲಿಯ ಮೈಕೊರೆಯುವ ಚಳಿ ನಡುವೆ ನ್ಯಾಯಕ್ಕಾಗಿ ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ಕಳೆದ ನವೆಂಬರ್.26ರಿಂದ ಇಂದಿನವರೆಗೂ ಕೇಂದ್ರ ಸರ್ಕಾರ ತಮಗೆ ನ್ಯಾಯ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿ ನಡುಬೀದಿಯಲ್ಲೇ ಅಡುಗೆ ಮಾಡಿಕೊಳ್ಳುತ್ತಾ ದಿನ ದೂಡುತ್ತಿದ್ದಾರೆ. ಅನ್ನದಾತರ ಪರವಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ನಾವೂ ಕೂಡಾ ಬೆಂಬಲ ನೀಡಬೇಕಿದೆ. ಇಲ್ಲಿಯೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಎರಡು ವಾರಗಳ ಹಿಂದೆಯಷ್ಟೇ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕರೆ ನೀಡಿದ್ದರು. ಇದಕ್ಕೂ ಒಂದು ತಿಂಗಳ ಹಿಂದೆ ರೈತರ ತಾಳ್ಮೆಯನ್ನು ಪರೀಕ್ಷಿಸದಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ?
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟವು ಹೊಸ ರೂಪ ಪಡೆದುಕೊಳ್ಳುತ್ತಿದೆ. ಜನವರಿ.26ರ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಕ್ಕೆ ಅನುಮತಿ ನೀಡುವಂತೆ ರೈತರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ದೇಶದ ಹಲವು ರಾಜ್ಯಗಳಿಂದ ಅಂದು ರೈತರು ಟ್ರ್ಯಾಕ್ಟರ್ ಗಳಲ್ಲಿ ರಾಷ್ಟ್ರ ರಾಜಧಾನಿಗೆ ತೆರಳುವುದಕ್ಕೆ ತೀರ್ಮಾನಿಸಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ.
ರೈತರು ಕೇಂದ್ರ ಸರ್ಕಾರದ ಸಂಧಾನ ವಿಫಲ
ಕಳೆದ ಅಕ್ಟೋಬರ್.14, 2020ರಂದು ಕೃಷಿ ಕಾಯ್ದೆ ವಿರುದ್ಧ ರೈತರು ಮೊದಲು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ರೈತರೊಂದಿಗೆ ಕೇಂದ್ರ ಸಚಿವರು, ಸರ್ಕಾರದ ಕೃಷಿ ಕಾರ್ಯದರ್ಶಿಗಳು ರೈತ ಸಂಘಟನೆ ಮುಖ್ಯಸ್ಥರ ಜೊತೆಗೆ ನಡೆಸಿದ ಸಂಧಾನ ಸಭೆಗಳೆಲ್ಲ ವಿಫಲವಾಗಿವೆ. 18 ತಿಂಗಳವರೆಗೂ ಕೃಷಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂಬ ಬೇಡಿಕೆಯನ್ನು ಸರ್ಕಾರ ಮಂಡಿಸಿತು. ರೈತರು ಮಾತ್ರ ಈ ಒಪ್ಪಂದವನ್ನು ತಿರಸ್ಕರಿಸಿದ್ದು, ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ರೈತರ ಕಣ್ಣು ಕೆಂಪಾಗಿಸಿರುವ ಕೃಷಿ ಕಾಯ್ದೆಗಳು ಯಾವುವು?
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸದಂತೆ ಸ್ವತಃ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದರ ಹೊರತಾಗಿಯೂ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ಅನ್ನದಾತರು ಪಣ ತೊಟ್ಟಿದ್ದಾರೆ.