ಜಾರ್ಖಂಡ್ ನಲ್ಲಿ ರಾಜಕೀಯ ವಿವಾದ ಧೂಳೆಬ್ಬಿಸಿದ 'ಚುಂಬನ ಸ್ಪರ್ಧೆ'
ರಾಂಚಿ, ಡಿಸೆಂಬರ್ 13: ಇತ್ತೀಚೆಗೆ ಜಾರ್ಖಂಡ್ ನ ಹಳ್ಳಿಯೊಂದರಲ್ಲಿ 'ಚುಂಬನ ಸ್ಪರ್ಧೆ'ಯೊಂದನ್ನು ಆಯೋಜಿಸಲಾಗಿತ್ತು. ರಾಜಕೀಯ ವಿವಾದಕ್ಕೆ ಕಾರಣವಾದ ಈ 'ಸ್ಪರ್ಧೆ'ಯ ಬಗ್ಗೆ ತನಿಖೆಗೆ ಸರಕಾರ ತನಿಖಾ ತಂಡವನ್ನು ನೇಮಿಸಿದೆ. ಇಬ್ಬರ ಈ ತನಿಖಾ ತಂಡ ದುಮಾರಿಯಾ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಂದ ಮಾಹಿತಿ ಪಡೆದಿದೆ.
ಚುಂಬನ ಸ್ಪರ್ಧೆ
ಜಾರ್ಝಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕ ಸೈಮನ್ ಮರಾಂಡಿ ಶನಿವಾರ ಸಂಜೆ ದುಮಾರಿಯಾ ಗ್ರಾಮದಲ್ಲಿ ಈ ಚುಂಬನ ಸ್ಪರ್ಧೆಯನ್ನು ಆಯೋಜಿಸಿದ್ದರು. ಕಳೆದ 37 ವರ್ಷಗಳಿಂದ ನಡೆದು ಬರುತ್ತಿರುವ ದುಮಾರಿಯಾ ಮೇಳದ ಅಂಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವಿವಾಹಿತ ಜೋಡಿಗಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಬುಡಕಟ್ಟು ಜನಾಂಗಗಳಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನ ಪ್ರಕರಣಗಳು, ದಂಪತಿ ನಡುವಿನ ವೈಮನಸ್ಸನ್ನು ಕಡಿಮೆ ಮಾಡಲು ಈ ಕಿಸ್ಸಿಂಗ್ ಸ್ಪರ್ಧೆ ಆಯೋಜಿಸಿದ್ದೆ ಎಂಬುದು ಮರಾಂಡಿ ಅಂಬೋಣ.
ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರೈತ ಘಟಕ ಮತ್ತು ಆಲ್ ಆದಿವಾಸಿ ಯೂತ್ ಆ್ಯಂಡ್ ಸ್ಟೂಡೆಂಟ್ಸ್ ಯೂನಿಯನ್ ಸೋಮವಾರ ಪ್ರತಿಭಟನೆ ನಡೆಸಿದೆ. ಜತೆಗೆ ಮರಾಂಡಿ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಸ್ಪರ್ಧೆ ಸಂಬಂಧ ಮರಾಂಡಿ ಕ್ಷಮಾಪಣೆ ಕೇಳಬೇಕು ಎಂದು ಪಕುರ್ ಜಿಲ್ಲಾ ಪರಿಷತ್ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬಾಬುಧಾನ್ ಮುರ್ಮು ಹೇಳಿದ್ದಾರೆ.
ಹೀಗೆ ಬುಟಕಟ್ಟು ಜನಾಂಗದಲ್ಲಿ ನಡೆದ ಚುಂಬನ ಸ್ಪರ್ಧೆಯೊಂದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.