'ಇಚಾ' ಲವ್ಸ್ 'ಪೊಣ್ಣಿ': ಇದು ಕೇರಳದ ರಕ್ತಸಿಕ್ತ ಪ್ರೇಮ ಅಧ್ಯಾಯ
ಆ ಹುಡುಗನ ಹೆಸರು ಕೆವಿನ್. ಆದರೆ ಅವಳು ಪ್ರೀತಿಯಿಂದ 'ಇಚಾ' ಅಂತ ಕರೆಯುತ್ತಿದ್ದಳು. ಅವಳ ಹೆಸರು 'ನೀನು'. ಅವನು 'ಪೊಣ್ಣಿ' ಎನ್ನುತ್ತಿದ್ದ. ಕೇರಳದವರಾದ ಈ ಇಬ್ಬರ ಪ್ರೀತಿಗೆ ಅದ್ಯಾರ ಕಣ್ಣು ಬಿತ್ತೋ? ಈಗ ಆ ಹುಡುಗಿ ಪಾಲಿಗೆ ಇಚಾ ಇಲ್ಲ. ತನ್ನ ತಂದೆ ಹಾಗೂ ಸೋದರ ಜೈಲಿನಲ್ಲಿದ್ದಾರೆ. ಪ್ರತಿ ಕ್ಷಣವೂ ತನ್ನ ಹುಡುಗನ ನೆನಪು ಕಾಡುತ್ತದೆ. ಕೈ ಹಿಡಿದು ಜಗ್ಗುತ್ತದೆ.
"ನೀನು ಯೋಚನೆ ಮಾಡಬೇಡ ಪೊಣ್ಣಿ. ನಿನ್ನ ಕುಟುಂಬದವರು ಏನು ಹೇಳಬಹುದು? ಹೆಚ್ಚಂದರೆ ನನ್ನನ್ನು ಒಂದು ಸಲ ಹೊಡೆಯಬಹುದು, ಆದರೆ ಆಮೇಲೆ ನಮ್ಮನ್ನು ಒಪ್ಪಿಕೊಳ್ತಾರೆ. ನಾಳೆ ಬೆಳಗ್ಗೆ 5.45ಕ್ಕೆ ನನ್ನನ್ನು ಎಬ್ಬಿಸು"- ಇದು 'ನೀನು'ಗೆ ಕೆವಿನ್ ಹೇಳಿದ ಕೊನೆಯ ಮಾತುಗಳು. ಆ ನಂತರ ಆಕೆ ತನ್ನ ಜೀವವೇ ಆಗಿದ್ದ ಕೆವಿನ್ ನನ್ನು ಜೀವಂತ ನೋಡಲೇ ಇಲ್ಲ.
ಇದು ನನ್ನ ಪ್ರೀತಿಯ ಕಥೆ, ಆದರೆ ಯಾರಿಗೂ ಆದರ್ಶವಲ್ಲ...
ಕೇರಳ ಮಾತ್ರವಲ್ಲ, ಇಡೀ ದೇಶದಲ್ಲೇ ಚರ್ಚೆಗೆ ಒಳಗಾಗುತ್ತಿರುವ ರಕ್ತಸಿಕ್ತ ಪ್ರೇಮ ಪ್ರಕರಣದ ಅಧ್ಯಾಯವಿದು. ಇಪ್ಪತ್ತೊಂದು ವರ್ಷದ ಯುವತಿ 'ನೀನು' ಆಗಷ್ಟೇ ಟಿವಿ ಚಾನಲ್ ವೊಂದರಲ್ಲಿ ಸಂದರ್ಶನ ನೀಡಿದ್ದಳು. ಆಕೆಯ ತಂದೆ ಚಾಕೋ ಕೋರ್ಟ್ ನಲ್ಲಿ ಹಾಕಿಕೊಂಡಿದ್ದ ಅರ್ಜಿಗೆ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲದಿಂದ ಸಾಕಷ್ಟು ಪತ್ರಕರ್ತರು ಆ ಮನೆಯಲ್ಲಿ ಕಾತರದಿಂದ ಇದ್ದರು.
ಕೆವಿನ್ ನ ಶವ ಕಾಲುವೆಯಲ್ಲಿ ತೇಲಿತ್ತು
ಅಂದಹಾಗೆ ಚಾಕೋ ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ತನ್ನ ಮಗಳನ್ನು ಆಶ್ರಯ ಮನೆಗೆ ಕಳುಹಿಸಬೇಕು. ಆಕೆಯ ಮಾನಸಿಕ ಆರೋಗ್ಯ ಸರಿಯಿಲ್ಲ. ತಿರುವನಂತಪುರಂನ ಅನಂತಪುರಿ ಆಸ್ಪತ್ರೆಯ ಡಾ.ವೃಂದಾ ಅವರ ಬಳಿ ಚಿಕಿತ್ಸೆ ಕೊಡಿಸಿದ್ದೀವಿ. ಆಕೆ ಸದ್ಯಕ್ಕೆ ವಾಸವಿರುವ 'ಅಪರಿಚಿತರ ಮನೆ'ಯಿಂದ ಸ್ಥಳಾಂತರ ಆಗಬೇಕು ಎಂದು ಆತ ಹೇಳಿಕೊಂಡಿದ್ದಾನೆ. ನಾನು ಸಾಕಷ್ಟು ಕೆಟ್ಟ ಸುದ್ದಿ ಕೇಳಿ ರೂಢಿ ಆಗಿಬಿಟ್ಟಿದ್ದೀನಿ. ಆದರೆ ನನಗೆ ಈಗ ತಂದೆಯಿಂದ ಆಗುತ್ತಿರುವ ದ್ರೋಹದಿಂದ ಆಘಾತವಾಗಿದೆ ಎಂದು ಹೇಳಿದ್ದಾಳೆ ನೀನು. ಕಳೆದ ಸೋಮವಾರದಂದು ಇಪ್ಪತ್ಮೂರು ವರ್ಷದ ಕೆವಿನ್ ನ ಶವ ಕೇರಳದ ಕೊಲ್ಲಂ ಜಿಲ್ಲೆಯ ಚಾಲಿಯೆಕ್ಕರದ ಕಾಲುವೆಯಲ್ಲಿ ಸಿಕ್ಕಿತ್ತು. ನೀನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಯುವಕ ಆತ.
ಪೋಷಕರನ್ನೇ ಬೈದು ಕಳಿಸಿದ್ದರಂತೆ
ನೀನುಳ ಸ್ವತಃ ಸೋದರ ಶಾನು ಚಾಕೋನೇ ಕೆವಿನ್ ನನ್ನು ಆತನ ತಾತನ ಮನೆಯಿಂದ ಮಧ್ಯರಾತ್ರಿ ವೇಳೆ ಅಪಹರಿಸಿದ್ದ. ಪಿತೂರಿ ಹಾಗೂ ಕೊಲೆ ಆರೋಪದಲ್ಲಿ ಶಾನು ಹಾಗೂ ಚಾಕೋನನ್ನು ಬಂಧಿಸಲಾಗಿದೆ. "ನಾನು ಮಾನಸಿಕ ಅಸ್ವಸ್ಥೆ ಅಂತ ನನ್ನ ತಂದೆ ಹೇಳಲು ಹೇಗೆ ಸಾಧ್ಯ? ನಾನು ಹನ್ನೆರಡನೇ ತರಗತಿ ಓದುವಾಗ ವೃಂದಾ ಅನ್ನೋ ಸಲಹೆಗಾರ್ತಿ ಹತ್ತಿರ ಕರೆದುಕೊಂಡು ಹೋಗಿದ್ದು ಹೌದು. ನನ್ನ ಮಾತೆಲ್ಲ ಕೇಳಿಸಿಕೊಂಡ ನಂತರ ನನಗಲ್ಲ, ನನ್ನ ಕುಟುಂಬಕ್ಕೆ ಕೌನ್ಸೆಲಿಂಗ್ ಅಗತ್ಯವಿದೆ ಎಂದು ಆಕೆ ಹೇಳಿದ್ದರು" ಎಂದು ನೀನು ಹೇಳಿದ್ದಾಳೆ. ಆಕೆಯನ್ನು ಹಾಗೆ ಕರೆದುಕೊಂಡು ಹೋಗಿದ್ದಾದರೂ ಏಕೆ ಅಂದರೆ, ಚಾಕೋ- ರೇಹಾ ದಂಪತಿ ಜಗಳವಾಡಿ, ನೀನುಳನ್ನು ಕೋಲಿನಿಂದ ವಿಪರೀತ ಹೊಡೆಯುತ್ತಿದ್ದರು. ಒಂದು ಹಂತದ ನಂತರ ತನ್ನ ಪೋಷಕರನ್ನು ಈ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಕ್ಕೆ ಮಗಳಿಗೆ ಮಾನಸಿಕ ಸಮಸ್ಯೆ ಎಂದು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದರು.
ಆ ದಂಪತಿಗೆ ಜಾತಿ- ವರ್ಗದ ಬಗ್ಗೆ ಮಾತ್ರ ಪ್ರೇಮವಿತ್ತು
ಈ ದಂಪತಿಯಾದರೂ ಆರ್ಥಿಕ ಸ್ಥಿತಿವಂತರು. ಜತೆಗೆ ಮೇಲ್ವರ್ಗದ- ಮೇಲ್ಪಂಗಡದ ಕ್ರಿಶ್ಚಿಯನ್ನರು. ನೀನುಗೆ ಮೊದಲ ಸಲ ಒಂಬತ್ತನೇ ಕ್ಲಾಸಿನಲ್ಲಿ ಒಬ್ಬ ಹುಡುಗ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಗಾಬರಿ ಬಿದ್ದ ಅವಳು ಬಂದು ಮನೆಯಲ್ಲಿ ಹೇಳಿಕೊಂಡರೆ, ಆಕೆಯ ತಂದೆ- ಸೋದರ ಆ ಹುಡುಗನನ್ನು ಸಾಯೋಬರುವ ಹಾಗೆ ಥಳಿಸುತ್ತಾರೆ. ಈ ರೀತಿ ಒಂದೆರಡು ಸಲ ಆದ ಮೇಲೆ ಈ ಹುಡುಗಿ ಮನೆಯಲ್ಲಿ ಅಂಥ ವಿಚಾರವನ್ನೇ ಹೇಳುವುದು ಬಿಟ್ಟುಬಿಡ್ತಾಳೆ. ಆ ನಂತರ ಮನೆಯಿಂದ ದೂರದಲ್ಲಿ ಓದುವ ಸಂದರ್ಭ ಬರುತ್ತದೆ. ಅಲ್ಲಿ ಕೆವಿನ್ ಪರಿಚಯ ಆಗುತ್ತದೆ. ಆತ ಕ್ರಿಶ್ಚಿಯನ್ನರಲ್ಲೇ ದಲಿತ ವರ್ಗಕ್ಕೆ ಸೇರಿದವನು. ಜತೆಗೆ ಅಂಥ ಆರ್ಥಿಕ ಸ್ಥಿತಿವಂತ ಕುಟುಂಬವೂ ಅಲ್ಲ. ಆದರೂ ಇಬ್ಬರ ಮಧ್ಯೆ ಪ್ರೀತಿ ಮೊಳೆಯುತ್ತದೆ. ಈ ವಿಚಾರವನ್ನು ಹುಡುಗ- ಹುಡುಗಿ ಇಬ್ಬರೂ ತಮ್ಮ ಮನೆಯಲ್ಲಿ ಹೇಳಲ್ಲ.
ಮನೆಯಲ್ಲಿ ಮದುವೆ ಪ್ರಯತ್ನ ಆರಂಭವಾಯಿತು
ಆದರೆ, ಯಾವಾಗ ನೀನುಗಾಗಿ ಮನೆಯಲ್ಲಿ ಮದುವೆಗೆ ಹುಡುಗನನ್ನು ಹುಡುಕಲು ಆರಂಭಿಸುತ್ತಾರೋ ಆಗ ಆಕೆ ಗಾಬರಿ ಬೀಳುತ್ತಾಳೆ. ಕೆವಿನ್ ಧೈರ್ಯ ಹೇಳಿ, ಆಕೆಯನ್ನು ಕರೆದುಕೊಂಡು ಹೊರಡುತ್ತಾನೆ. ಈ ವೇಳೆ ನೀನು ತನ್ನ ಪ್ರೀತಿಯ ಬಗ್ಗೆ ಫೋನ್ ನಲ್ಲಿ ಪೋಷಕರಲ್ಲಿ ಹೇಳಿಕೊಳ್ಳುತ್ತಾಳೆ. ಆದರೆ ಅವರು ಒಪ್ಪುವುದಿಲ್ಲ. ಆಗ ಇಬ್ಬರೂ ವಿವಾಹಕ್ಕೆ ನೋಂದಣಿ ಮಾಡಿಸುತ್ತಾರೆ. "ನೀನು ಯೋಚನೆ ಮಾಡಬೇಡ ಪೊಣ್ಣಿ. ನಿನ್ನ ಕುಟುಂಬದವರು ಏನು ಹೇಳಬಹುದು? ಹೆಚ್ಚಂದರೆ ನನ್ನನ್ನು ಒಂದು ಸಲ ಹೊಡೆಯಬಹುದು, ಆದರೆ ಆಮೇಲೆ ನಮ್ಮನ್ನು ಒಪ್ಪಿಕೊಳ್ತಾರೆ. ನಾಳೆ ಬೆಳಗ್ಗೆ 5.45ಕ್ಕೆ ನನ್ನನ್ನು ಎಬ್ಬಿಸು"- ಎಂದು ಕೆವಿನ್ ಹೇಳುತ್ತಾನೆ. ಆದರೆ ಅವನನ್ನು ಅಪಹರಿಸಿಕೊಂಡು ಹೋದ ಶಾನು, ಕೊಂದು ಹಾಕಿದ್ದಾನೆ.
ಗೆಳೆಯನ ಸಾವಿನ ವಿರುದ್ಧ ಆಕೆಯ ಹೋರಾಟ
ಪ್ರೀತಿಸಿ ಮದುವೆಯಾದವರು ಕುಟುಂಬಗಳ ಸದಸ್ಯರಿಂದಲೇ ಕೊಲೆ ಆಗುತ್ತಿದ್ದಾರೆ. ಅದಕ್ಕೆ ಅಂತಸ್ತು, ಜಾತಿ- ಧರ್ಮ ಹೀಗೆ ನಾನಾ ಕಾರಣಗಳು. ತಮಿಳುನಾಡಿನಲ್ಲೂ ಸಹ ಕೌಸಲ್ಯಾ- ಶಂಕರ್ ದಂಪತಿ ಕಥೆ ಇದೇ. ಶಂಕರ್ ನನ್ನು ಹಾಡಹಗಲೇ ಕೌಸಲ್ಯಾ ಕುಟುಂಬದವರು ಕೊಲೆ ಮಾಡಿದರು. ಈಗ ಆಕೆ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಳೆ. ಇದೀಗ ಕೆವಿನ್ ನ ಪೋಷಕರ ಜತೆಗೆ ಇರುವ 'ನೀನು' ಸಹ ತನ್ನ ಕನಸುಗಳನ್ನು ಹಂಚಿಕೊಳ್ಳಬೇಕಿದ್ದ ಹುಡುಗನ ಪರವಾಗಿ ಹೋರಾಟ ನಡೆಸುವ ಸಂಕಲ್ಪ ಮಾಡಿದ್ದಾಳೆ. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಅನ್ನೋದು ಆಕೆಯ ಮಾತು.