ತಂದೆಯನ್ನು ಮಣಿಸುವುದು ನನಗೆ ಖುಷಿ ತರದು: ಅಖಿಲೇಶ್ ಯಾದವ್
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಂದೆ ಮುಲಾಯಂ ಸಿಂಗ್ ವಿರುದ್ಧವೇ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಸ್ಪರ್ಧಿಸಲಿದ್ದಾರೆ.
ಲಖ್ನೋ, ಜನವರಿ 17: "ನನ್ನ ಜನ್ಮದಾತನನ್ನು ಸೋಲಿಸಿ ಪಡೆಯುವ ಗೆಲವು ಖಂಡಿತವಾಗಿಯೂ ನನಗೆ ಸಂತೋಷ ನೀಡುವುದಿಲ್ಲ. ಆದರೆ, ಈ ಯುದ್ಧ ಅನಿವಾರ್ಯ''. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಂದರ್ಶನವೊಂದರಲ್ಲಿ ಹೇಳಿರುವ ಮಾತುಗಳಿವು.
ಶೀಘ್ರದಲ್ಲೇ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ಅವರು, ಇತ್ತೀಚಿನ ದಿನಗಳಲ್ಲಿ ತಮ್ಮ ವಿರುದ್ಧ ಸಡ್ಡು ಹೊಡೆದಿರುವ ಅಖಿಲೇಶ್ ಯಾದವ್ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರು, ಮೇಲಿನಂತೆ ಉತ್ತರಿಸಿದ್ದಾರೆ.
"ಸೋಮವಾರ ಸಂಜೆ ಚುನಾವಣಾ ಆಯೋಗವು ನನ್ನನ್ನು ಸಮಾಜವಾದಿ ಪಕ್ಷದ ಅಧಿಕೃತ ನಾಯಕನನ್ನಾಗಿ ಘೋಷಿಸಿ, ಪಕ್ಷದ ಚಿಹ್ನೆಯನ್ನು ನಮ್ಮ ಬಣದವರಿಗೆ ಉಪಯೋಗಿಸಲು ಅನುವು ಮಾಡಿಕೊಟ್ಟಿದೆ. ಅದೇನೇ ಇರಲಿ. ಮುಲಾಯಂ ಅವರು ನನ್ನ ತಂದೆ. ಆಯೋಗದ ಸೂಚನೆ ಹೊರಬಿದ್ದ ಮೇಲೂ ನಾನು ನೇರವಾಗಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದೇನೆ'' ಎಂದು ಅವರು ತಿಳಿಸಿದ್ದಾರೆ.
ವಿಧಿಯೆಂದರೆ, ಇದೇ ಏನೋ ಗೊತ್ತಿಲ್ಲ. ಆದರೆ, ಕಾಲ ಧರ್ಮದನುಸಾರ ಎರಡು ದೇಹ, ಒಂದೇ ಜೀವ ಎನ್ನುವಂತಿದ್ದ ಅಪ್ಪ-ಮಗ, ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಇಂದು ಪರಸ್ಪರ ಎದುರಾಳಿಗಳಾಗಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಮುಲಾಯಂ ಸಿಂಗ್ ಯಾದವ್ ಅವರು, ರಕ್ತ ಬೆವರು ಬಸಿದು ಕಟ್ಟಿದ್ದ ಸಮಾಜವಾದಿ ಪಕ್ಷವು ಇಂದು ಇಬ್ಭಾಗವಾಗಿದೆ. ಅಪ್ಪ ಮುಲಾಯಂ ಪರವಾಗಿ ಪಕ್ಷದ ಕೆಲವರು ನಿಂತಿದ್ದರೆ, ಯುವ ಸಾಮ್ರಾಟನಂತಿರುವ ಅಖಿಲೇಶ್ ಯಾದವ್ ಅವರಿಗೆ ಹೆಚ್ಚಿನ ಕಾರ್ಯಕರ್ತರ ಬೆಂಬಲ ಲಭ್ಯವಾಗಿವೆ.
ಇದರ ಫಲವಾಗಿ, ಪಕ್ಷದ ಚುನಾವಣಾ ಚಿಹ್ನೆಯಾದ ಸೈಕಲ್ ಇಂದು ಅಖಿಲೇಶ್ ಪಾಲಾಗಿದೆ. ಸೋಮವಾರ, ಚುನಾವಣಾ ಆಯೋಗವು, ಸಮಾಜವಾದಿ ಪಕ್ಷದ ಅಧಿಕೃತ ನಾಯಕನಾಗಿ ಅಖಿಲೇಶ್ ಯಾದವ್ ಅವರನ್ನೇ ಪರಿಗಣಿಸಿದ್ದು, ಪಕ್ಷದ ಚಿಹ್ನೆಯೂ ಅವರಿಗೇ ಸೇರಬೇಕೆಂಬ ಮಹತ್ವದ ತೀರ್ಪು ನೀಡಿದೆ.
ಇದು, ಮುಲಾಯಂ, ಅಖಿಲೇಶ್ ನಡುವಿನ ಕಂದರವು ಮತ್ತಷ್ಟು ದೊಡ್ಡದಾಗಲು ಕಾರಣವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಮುಲಾಯಂ ಅವರು ಹೊಸ ಪಕ್ಷ ಹಾಗೂ ಹೊಸ ಚಿಹ್ನೆಯನ್ನು ಹೊಂದುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಆದರೆ, ಚುನಾವಣಾ ಆಯೋಗದ ತೀರ್ಪಿನ ವಿರುದ್ಧ ಉತ್ತರ ಪ್ರದೇಶ ಹೈಕೋರ್ಟ್ ನಲ್ಲಿ ದಾವೆ ಹೂಡಲು ಮುಲಾಯಂ ಬಣ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.