ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಸಾಂಸ್ಕೃತಿಕ ಕೇಂದ್ರದಲ್ಲಿ ರಾಮಾಯಣ ಪಠಣ
ಹಿಂದೂ-ಕ್ರಿಶ್ಚಿಯನ್ನರ ಮಧ್ಯೆ ಸೌಹಾರ್ದ ಏರ್ಪಡಿಸುವ ಉದ್ದೇಶದಿಂದ ಕೇರಳದ ಕ್ಯಾಥೋಲಿಕ್ ಸಂಸ್ಥೆಯೊಂದು ಮಾಡುತ್ತಿರುವ ಕಾರ್ಯಕ್ರಮ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಂತ ಅದು ತೀರಾ ಇತ್ತೀಚಿನ ಕಾರ್ಯಕ್ರಮ ಏನಲ್ಲ, ಹತ್ತಕ್ಕೂ ಹೆಚ್ಚು ವರ್ಷದಿಂದ ಮಾಡಿಕೊಂಡು ಬರಲಾಗುತ್ತಿದೆ.
ಏನದು ಕಾರ್ಯಕ್ರಮ ಅಂತೀರಾ. ಕ್ಯಾಥೋಲಿಕ್ ಚರ್ಚ್ ನವರು ನಡೆಸಿಕೊಂಡು ಬರುತ್ತಿರುವ ಚವರ ಸಾಂಸ್ಕೃತಿಕ ಸಂಘದಿಂದ ರಾಮಾಯಣ ಮಾಸ ಆಚರಿಸಲಾಗುತ್ತದೆ. ಮಲಯಾಳಂನ ಕರ್ಕಿಡಕೊಂ ತಿಂಗಳನ್ನು ಕೇರಳದಲ್ಲಿ ರಾಮಾಯಣ ತಿಂಗಳು ಅಂತ ಆಚರಿಸಲಾಗುತ್ತದೆ.
ಆಹಾ, ಎಂಥ ಸುದ್ದಿ! ಉರ್ದುವಿನಲ್ಲಿ ರಾಮಾಯಣ ಬರೆದ ಮುಸ್ಲಿಂ ಮಹಿಳೆ
ಹಿಂದೂ ಭಕ್ತರು ದಿನವೊಂದಕ್ಕೆ ರಾಮಾಯಣದ ಸ್ವಲ್ಪ ಭಾಗವನ್ನಾದರೂ ಓದುತ್ತಾರೆ. ಹಾಗೆ ಓದುತ್ತಾ ಇಡೀ ಗ್ರಂಥವನ್ನು ಒಂದು ತಿಂಗಳಲ್ಲಿ ಓದಿ ಮುಗಿಸುತ್ತಾರೆ. ಚವರದಲ್ಲಿ ಅಂತರ್ ಧರ್ಮೀಯ ಸಭೆ ಏರ್ಪಡಿಸಲಾಗುತ್ತದೆ. ಅದರಲ್ಲಿ ಎಲ್ಲ ಧರ್ಮದವರು ಭಾಗಿಯಾಗುತ್ತಾರೆ. ಈ ವರ್ಷ ಕರ್ಕಿಡಕೊಂನ ಆರಂಭದಲ್ಲಿ ಆಚರಣೆ ಮಾಡಲಾಗಿದೆ.
ಆ ದಿನ ಹಿಂದೂಗಳು ರಾಮಾಯಣದ ಕೆಲ ಭಾಗವನ್ನು ಪಠಣ ಮಾಡುತ್ತಾರೆ. ಚರ್ಚ್ ನ ಸನ್ಯಾಸಿನಿಯರು, ಪಾದ್ರಿಗಳು ಮತ್ತು ಇತರ ಧರ್ಮಾನುಯಾಯಿಗಳು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಇಸ್ಲಾಂ, ಜೈನ್, ಸಿಖ್ಖರು ಕೂಡ ಭಾಗವಹಿಸುತ್ತಾರೆ. ಕೊಚ್ಚಿ ಸುತ್ತ ಮುತ್ತ ವಾಸಿಸುವ ಮಂದಿ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ.
ಯಾವ ರಾಮಾಯಣದ ಭಾಗವನ್ನು ಪಠಣ ಮಾಡಲಾಗುತ್ತದೋ ಅದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಆ ನಂತರ ಅದರ ಕುರಿತು ಚರ್ಚೆ ಕೂಡ ನಡೆಯುತ್ತದೆ. "ನಾವು ಕಳೆದ ಹನ್ನೆರಡು-ಹದಿಮೂರು ವರ್ಷದಿಂದ ರಾಮಾಯಣ ತಿಂಗಳು ಆಚರಿಸುತ್ತಿದ್ದೇವೆ" ಎನ್ನುತ್ತಾರೆ ಚವರ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಫಾದರ್ ರೋಬಿ ಕನ್ನಂಚಿರ.
ವಿವಿಧ ನಂಬಿಕೆಗಳನ್ನು ನಾವು ಬೆಂಬಲಿಸುತ್ತೇವೆ. ಅದು ಕೂಡ ನಮ್ಮ ನಂಬಿಕೆಯನ್ನು ಬಿಡದೆ ಎಂಬ ಸಂದೇಶವನ್ನು ರವಾನಿಸುವುದು ಈ ಕಾರ್ಯಕ್ರಮದ ಉದ್ದೇಶ ಎನ್ನುತ್ತಾರೆ ಅವರು.