5W-1H: ಕೊರೊನಾವೈರಸ್ 3ನೇ ಅಲೆ ಬಗ್ಗೆ ನಿಮಗೆ ತಿಳಿಯದ ಸುದ್ದಿ!
ನವದೆಹಲಿ, ಜೂನ್ 18: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಯಾವಾಗ ಶುರುವಾಗುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇನ್ನೂ ಒಂದು ವರ್ಷ ಕೊವಿಡ್-19 ಸೋಂಕಿನ ಕಾಟ ತಪ್ಪಿದ್ದಲ್ಲ ಎಂದು ರಾಯಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ದೇಶದಲ್ಲಿ ಅಕ್ಟೋಬರ್ ತಿಂಗಳಿನಿಂದ ಕೊರೊನಾವೈರಸ್ ಮೂರನೇ ಅಲೆ ಶುರುವಾಗಲಿದ್ದು, 2ನೇ ಅಲೆಗಿಂತ ಬೇಗ ಮೂರನೇ ಅಲೆ ನಿಯಂತ್ರಿಸುವುದಕ್ಕೆ ಸಾಧ್ಯವಿದೆ. ಅದಾಗ್ಯೂ, ಮುಂದಿನ 12 ತಿಂಗಳವರೆಗೂ ಕೊವಿಡ್-19 ಸೋಂಕಿನ ಭೀತಿ ಮರೆಯಾಗುವುದಿಲ್ಲ ಎಂದು ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೋಷಕರೇ ಓದಿ: ಕೊರೊನಾವೈರಸ್ 3ನೇ ಅಲೆಯ ಕಣ್ಣು ಮಕ್ಕಳ ಮೇಲಿಲ್ಲ
ಕಳೆದ ಜೂನ್ ತಿಂಗಳಿನಲ್ಲಿ 3-17ಸಮೀಕ್ಷೆಗಳನ್ನು ನಡೆಸಲಾಗಿದೆ. 40 ಆರೋಗ್ಯ ತಜ್ಞರು, ವೈದ್ಯರು, ವಿಜ್ಞಾನಿಗಳು, ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಪ್ರಾಧ್ಯಾಪಕರು ಸೇರಿದಂತೆ ವಿದೇಶಿ ವೈದ್ಯಕೀಯ ಸಂಶೋಧಕರು ಕೂಡಾ ಈ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದದ್ರು. ಈ ವೈದ್ಯಕೀಯ ತಜ್ಞರ ಪ್ರಕಾರ, "ಲಸಿಕೆ ಪಡೆಯುವ ಮೂಲಕ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ಸಾಧ್ಯ," ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ 3ನೇ ಅಲೆ ಬಗ್ಗೆ ವೈದ್ಯಕೀಯ ತಜ್ಞರು ಮಾತು
"ರಾಯಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.85ರಷ್ಟು ವೈದ್ಯಕೀಯ ತಜ್ಞರು ಕೊರೊನಾವೈರಸ್ 3ನೇ ಅಲೆಯು ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿದೆ", ಎಂದು ಭವಿಷ್ಯ ನುಡಿದಿದ್ದಾರೆ. 24 ತಜ್ಞರ ಪೈಕಿ 21 ತಜ್ಞರು ಒಂದೇ ರೀತಿ ಅಭಿಪ್ರಾಯ ಮಂಡಿಸಿದರೆ, ಉಳಿದ ಮೂರು ತಜ್ಞರು ಭಿನ್ನರಾಗ ಹಾಡಿದ್ದಾರೆ. "ಆಗಸ್ಟ್ ಅಥವಾ ಸಪ್ಟೆಂಬರ್12ರ ವೇಳೆಗೆ ಭಾರತದಲ್ಲಿ ಕೊವಿಡ್-19 ಮೂರನೇ ಅಲೆ ಶುರುವಾಗಲಿದೆ," ಎಂದು ಎಚ್ಚರಿಕೆ ನೀಡಿದ್ದಾರೆ.
ಕೊವಿಡ್-19 ನಿಯಂತ್ರಣದ ಬಗ್ಗೆ ತಜ್ಞರ ಅಭಿಪ್ರಾಯ?
"ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಗಿಂತ ಮೂರನೇ ಅಲೆಯ ನಿಯಂತ್ರಣ ಸುಲಭವಾಗಿರುತ್ತದೆ ಎಂದು ಶೇ.70ರಷ್ಟು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. 34 ವೈದ್ಯಕೀಯ ತಜ್ಞರ ಪೈಕಿ 24 ತಜ್ಞರು ಮೂರನೇ ಅಲೆಯು ಸಾಧ್ಯವಾದಷ್ಟು ಬೇಗ ನಿಯಂತ್ರಣಕ್ಕೆ ಬರಲಿದೆ," ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಕೊರೊನಾವೈರಸ್ ಲಸಿಕೆ ಅಭಾವ, ಔಷಧಿ, ಆಸ್ಪತ್ರೆಯಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಕೊರತೆ ರೀತಿಯ ವೈದ್ಯಕೀಯ ಸವಾಲು ಹೆಚ್ಚಾಗಿರುವುದಿಲ್ಲ ಎಂದು ಹೇಳಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡವರ ಲೆಕ್ಕ?
ಕೊವಿಡ್-19 ಹರಡುವಿಕೆ ವೇಗದಲ್ಲಿ ಇಳಿಮುಖ
"ದೇಶದಲ್ಲಿ ಎರಡು ಬಾರಿ ಕೊರೊನಾವೈರಸ್ ಸೋಂಕಿನ ಅಲೆಗಳಿಗೆ ಹೋಲಿಸಿದ್ದರೆ, ಮುಂದಿನ ದಿನಗಳಲ್ಲಿ ಸೋಂಕು ಹರಡುವಿಕೆ ವೇಗ ಇಳಿಮುಖವಾಗಲಿದೆ. ಕೊವಿಡ್-19 ಲಸಿಕೆ ವಿತರಣೆ ಮತ್ತು ನೈಸರ್ಗಿಕವಾಗಿ ಜನರಲ್ಲಿ ವೃದ್ಧಿ ಆಗಿರುವ ಪ್ರತಿಕಾಯ ವ್ಯವಸ್ಥೆಯಿಂದಾಗಿ ಸೋಂಕು ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ," ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ಪಾಲಿಗೆ ಕೊವಿಡ್-19 ಮೂರನೇ ಅಲೆಯ ಅಪಾಯ
ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿಯೇ ಎಂಬ ಪ್ರಶ್ನೆಗೆ ಶೇ.3ರ 2ರಷ್ಟು ವೈದ್ಯಕೀಯ ತಜ್ಞರು ಹೌದು ಎಂದು ಉತ್ತರಿಸಿದ್ದಾರೆ. 3ನೇ ಅಲೆಯಲ್ಲಿ ಮಕ್ಕಳು ಅತಿಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದಾರೆ ಎಂದು 40 ತಜ್ಞರ ಪೈಕಿ 26 ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. "ವಯಸ್ಕರಿಗೆ ಹೋಲಿಸಿದ್ದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿದಿಲ್ಲ, ಈ ಕಾರಣದಿಂದಲೇ ಹದಿಹರೆಯ ವಯಸ್ಸಿನವರು ಹಾಗೂ ಮಕ್ಕಳು ಹೆಚ್ಚು ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ," ಎಂದು ನಿಮ್ಹಾನ್ಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರದೀಪ್ ಬನಂದೂರ್ ಹೇಳಿದ್ದಾರೆ.
ಮಕ್ಕಳಿಗೆ ಕೊರೊನಾವೈರಸ್ ಚಿಕಿತ್ಸೆ ವ್ಯವಸ್ಥೆ?
""ಒಂದು ವೇಳೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿದ್ದೇ ಆದರೆ ನಾವು ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಅಣಿಯಾಗಿಲ್ಲ. ಕೊನೆಯ ಹಂತದಲ್ಲಿ ಯಾವುದೇ ಪರಿಣಾಮಕಾರಿ ಬದಲಾವಣೆಗಳನ್ನು ಅಥವಾ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ," ಎಂದು ನಾರಾಯಣ ಹೃದಯಾಲಯ ಹಾಗೂ ಕರ್ನಾಟಕ ಕೊವಿಡ್-19 ನಿರ್ವಹಣಾ ಪಡೆಯ ಸದಸ್ಯ ಡಾ. ದೇವಿ ಶೆಟ್ಟಿ ಹೇಳಿದ್ದಾರೆ. "ಕೊರೊನಾವೈರಸ್ ಮೂರನೇ ಅಲೆಯು ಇಡೀ ದೇಶದಲ್ಲಿ ವ್ಯತಿರಿಕ್ತ ಪ್ರಭಾವ ಬೀರಲಿದೆ. ಶಿಶುವೈದ್ಯರು, ನವಜಾತ ಶಿಶುಗಳು ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ತುರ್ತು ನಿಗಾ ಘಟಕದ ಹಾಸಿಗೆಗಳ ಸಂಖ್ಯೆ ತೀರಾ ಕಡಿಮೆಯಾಗಿದೆ," ಎಂದಿದ್ದಾರೆ.
ಕೊರೊನಾವೈರಸ್ ಮೂರನೇ ಅಲೆಯ ಬಗ್ಗೆ ತಪ್ಪು ಪರಿಕಲ್ಪನೆ
ರಾಯಟರ್ಸ್ ನಡೆಸಿದ ಸಮೀಕ್ಷೆಯಲ್ಲಿ, "14 ವೈದ್ಯಕೀಯ ತಜ್ಞರ ಕೊರೊನಾವೈರಸ್ ಸೋಂಕಿನ ಮೂರನೇ ಅಲೆಯಿಂದ ಮಕ್ಕಳಿಗೆ ಯಾವುದೇ ರೀತಿ ಹೆಚ್ಚಿ ಅಪಾಯ ಇರುವುದಿಲ್ಲ," ಎಂದು ಅಭಿಪ್ರಾಯ ಮಂಡಿಸಿದ್ದಾರೆ. "ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳ ಮೇಲೆ ಅತಿಹೆಚ್ಚಾಗಿ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಮಕ್ಕಳು ಅತಿಹೆಚ್ಚು ಅಪಾಯಕ್ಕೆ ಸಿಲುಕಲಿದ್ದಾರೆ ಎಂಬ ಸುದ್ದಿಗಳು ಆಧಾರ ರಹಿತವಾಗಿವೆ. ಈ ಸುದ್ದಿಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ," ಎಂದು ಇತ್ತೀಚಿಗಷ್ಟೇ ಏಮ್ಸ್ ಸ್ಪಷ್ಟಪಡಿಸಿತ್ತು.
ದೇಶದಲ್ಲಿ ಇನ್ನೆಷ್ಟು ವರ್ಷ ಕೊವಿಡ್-19 ಕಾಟ?
ಕೊರೊನಾವೈರಸ್ ಮೊದಲು, ಎರಡು, ಮೂರು ಹೀಗೆ ಇನ್ನೂ ಎಷ್ಟು ವರ್ಷಗಳವರೆಗೂ ಭಾರತದಲ್ಲಿ ಸಾಂಕ್ರಾಮಿಕ ಪಿಡುಗು ಅಟ್ಟಹಾಸ ತೋರುತ್ತಿದೆ ಎಂಬುದಕ್ಕೂ ವೈದ್ಯಕೀಯ ತಜ್ಞರು ಉತ್ತರ ನೀಡಿದ್ದಾರೆ. ಪ್ರಸ್ತುತ ಬಳಕೆಯಲ್ಲಿ ಇರುವ ಕೊವಿಡ್-19 ಲಸಿಕೆಗಳು ಮುಂದಿನ ರೂಪಾಂತರ ತಳಿಗಳ ಮೇಲೆ ಪರಿಣಾಮಕಾರಯಾಗಿ ಕೆಲಸ ಮಾಡುವುದಿಲ್ಲ ಎಂದು 38ರಲ್ಲಿ 25 ವೈದ್ಯಕೀಯ ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. 41 ಜನರಲ್ಲಿ 30 ವೈದ್ಯಕೀಯ ತಜ್ಞರು ಮುಂದಿನ ಒಂದು ವರ್ಷ ಭಾರತದಲ್ಲಿ ಕೊರೊನಾವೈರಸ್ ಕಾಟ ತಪ್ಪಿದ್ದಲ್ಲ ಎಂದಿದ್ದಾರೆ. 15 ತಜ್ಞರು ಎರಡು ವರ್ಷ ಕೊರೊನಾವೈರಸ್ ಹಾವಳಿ ಇರಲಿದೆ ಎಂದರೆ 13 ವೈದ್ಯಕೀಯ ತಜ್ಞರು 2 ವರ್ಷಕ್ಕಿಂತ ಹೆಚ್ಚು ದಿನಗಳವರೆಗೂ ಕೊವಿಡ್-19 ರೋಗ ಅಟ್ಟಹಾಸ ತೋರಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊವಿಡ್-19 ಸೋಂಕಿತ ತಪಾಸಣೆ?
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಜೊತೆ ಪರೀಕ್ಷೆ ವೇಗವೂ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 19,29,476 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 38,7167,696 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 62,480 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 88,977 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 1,587 ಮಂದಿ ಪ್ರಾಣ ಬಿಟ್ಟಿದ್ದಾರೆ.
ದೇಶದಲ್ಲಿ ಒಟ್ಟು 2,97,62,793 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,85,80,647 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,83,490 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ7,98,656 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾವೈರಸ್ ಲಸಿಕೆ ವಿತರಣೆ ಅಂಕಿ-ಸಂಖ್ಯೆ
ಭಾರತದಲ್ಲಿ ಮೇ 1ರಿಂದ ಈವರೆಗೂ 4,93,56,276 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, 10,58,514 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.
1,00,95,383 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 70,32,270 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,69,96,277 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 89,63,142 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 7,84,18,488 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 1,23,95,893 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 6,37,34,314 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 2,06,15,357 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.