ಕೆಲವು ಸಂದರ್ಭ, ಕಾರಣಗಳಿಗಾಗಿ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ
ಮಂಗಳೂರು, ಅಕ್ಟೋಬರ್.23: ವೀರ ಮಣಿಕಂಠನ ಸನ್ನಿಧಾನ ಶಬರಿಮಲೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ಮಹಿಳೆಯರ ಪ್ರವೇಶಕ್ಕೆ ಆದೇಶ ನೀಡಿದರೂ ಮಹಿಳೆಯರು ದೇಗುಲ ಪ್ರವೇಶಿಸಲು ಆಗಿಲ್ಲ.
ಈ ನಡುವೆ ಹರಿಹರ ಸುತನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತಡೆಯಲು ಅಯ್ಯಪ್ಪನ ಭಕ್ತರು ದೇಶಾದ್ಯಂತ ಜನಾಂದೋಲನ ನಡೆಸಲು ದಾಪುಗಾಲಿಟ್ಟಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?
ಈ ತೀರ್ಪು ಹೊರಬಂದ ಬಳಿಕ ಮೊದಲ ಬಾರಿಗೆ ಅಕ್ಟೋಬರ್ 17 ರಂದು 5 ದಿನಗಳಿಗಾಗಿ ಅಯ್ಯಪ್ಪನ ಸನ್ನಿಧಾನದ ಬಾಗಿಲು ತೆರೆದಿತ್ತು. ಈ ಐದು ದಿನಗಳ ಕಾಲ ದೇವಾಲಯವನ್ನು ಪ್ರವೇಶಿಸಲು ಮುಂದಾದ 12 ಮಹಿಳೆಯರ ಪ್ರಯತ್ನವನ್ನು ಅಯ್ಯಪ್ಪನ ಭಕ್ತರು ಸೇರಿದಂತೆ ಬಿಜೆಪಿ ಮತ್ತು ಸಂಘಪರಿವಾರದವರು ವಿಫಲಗೊಳಿಸಿದ್ದರು.
ಈ ನಡುವೆ ದೇಗುಲ ಪ್ರವೇಶದ ಸಂಪ್ರದಾಯದ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ದೇಶದಲ್ಲಿ ವಿಶಿಷ್ಟ ಸಂಪ್ರದಾಯಗಳನ್ನು ಅಳವಡಿಸಿಕೊಂಡಿರುವ ಹಲವಾರು ದೇವಾಲಯಗಳ ಬಗ್ಗೆ ಗಮನ ಹರಿಸಲಾಗುತ್ತಿದ್ದು, ದೇಶದ ಕೆಲವು ದೇವಾಲಯಗಳಲ್ಲಿ ಮಾತ್ರ ಮಹಿಳೆಯರಿಗೆ ಪ್ರವೇಶವಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ?
ಆದರೆ ಅಲ್ಲಿ ಪುರುಷರಿಗೆ ಪ್ರವೇಶ ನಿಷೇಧ. ಇಂತಹ ಕೆಲ ಪ್ರಮುಖ ದೇವಾಲಯಗಳ ಮಾಹಿತಿ ಇಲ್ಲಿದೆ.
ಚಕ್ಕುಲತುಕವು ಮಂದಿರ
ಇದು ಕೇರಳದಲ್ಲಿರುವ ಭಗವತಿ ದೇವಿಯ ದೇವಾಲಯ. ಇಲ್ಲಿ ವಾರ್ಷಿಕವಾಗಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು, ಡಿಸೆಂಬರ್ ಮೊದಲ ವಾರದ ಶುಕ್ರವಾರದಿಂದ 10 ದಿನಗಳ ಕಾಲ ಉಪವಾಸ ವ್ರತ ಆಚರಿಸುವ ಮಹಿಳಾ ಭಕ್ತರ ಪಾದ ತೊಳೆಯುವರು. ಇಲ್ಲಿ ಕೆಲವು ಸಂದರ್ಭಗಳಲ್ಲಿ ಪುರುಷರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೊಟ್ಟುಂಕುಲಂರ ದೇವಾಲಯ
ಇದು ಕೇರಳದ ಪ್ರಸಿದ್ಧ ಭಗವತಿ ಮಂದಿರ. ಇಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯ ಮಹಿಳೆಯರಿಗೆ ಮಾತ್ರ ಮೀಸಲು. ಇಲ್ಲಿ ಪುರುಷರು ಮಹಿಳೆಯರ ವೇಷ ಧರಿಸಿ ಬಂದು ಮಹಿಳೆಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ
ಮಾತಾ ಮಂದಿರ
ಬಿಹಾರದ ಮುಝಫ್ಫರಪುರದಲ್ಲಿರುವ ಈ ಮಂದಿರಕ್ಕೆ ಕೆಲವು ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ. ಆ ಸಂದರ್ಭದಲ್ಲಿ ಮಂದಿರದ ಒಳಗೆ ಪುರುಷ ಅರ್ಚಕರಿಗೂ ಪ್ರವೇಶವಿಲ್ಲ. ಕೆಲವು ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ಇಲ್ಲಿಗೆ ಪ್ರವೇಶ.
ಕಾಮಾಖ್ಯ ದೇವಾಲಯ
ಇದು ಆಂಧ್ರದ ಗುಹವಾತಿ ಎಂಬಲ್ಲಿರುವ ಕಾಮಾಖ್ಯ ದೇವಾಲಯ. ತಿಂಗಳಿನ ಕೆಲ ದಿನ ಇಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ. ದೇವಿ ತನ್ನ ನಿಸರ್ಗದ ಕ್ರಿಯೆಯಲ್ಲಿ ಇರುತ್ತಾಳೆ ಎಂಬ ನಂಬಿಕೆ ಇದ್ದು ಆ ಸಂದರ್ಭ ಪುರುಷರಿಗೆ ಪ್ರವೇಶ ಇಲ್ಲ.
ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್ಲೈನ್
ಬ್ರಹ್ಮ ದೇವಾಲಯ
ರಾಜಸ್ಥಾನದ ಪುಷ್ಕರ್ ನಲ್ಲಿ ಈ ಮಂದಿರವಿದೆ. ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶ ನಿಷಿದ್ಧ. ಬ್ರಹ್ಮ ದೇವರು ಪುಷ್ಕರ ಸರೋವರದಲ್ಲಿ ಯಜ್ಞವೊಂದನ್ನು ಆಯೋಜಿಸುವರು. ಆದರೆ ಅವರ ಪತ್ನಿ ಸರಸ್ವತಿ ಇಲ್ಲಿಗೆ ಆಗಮಿಸಲು ವಿಳಂಬ ಮಾಡುವರು. ಇದರಿಂದ ಬ್ರಹ್ಮ ದೇವರು ಗಾಯತ್ರಿ ದೇವಿಯನ್ನು ಮದುವೆಯಾಗುವರು ಮತ್ತು ವಿಧಿವಿಧಾನಗಳನ್ನು ಪೂರೈಸುವರು.
ಇದರಿಂದ ಕೋಪಿತರಾದ ಸರಸ್ವತಿ ದೇವಿಯು ಈ ದೇವಾಲಯಕ್ಕೆ ವಿವಾಹಿತ ಪುರುಷರು ಪ್ರವೇಶಿಸಬಾರದು ಮತ್ತು ಹಾಗೊಂದು ವೇಳೆ ಪ್ರವೇಶಿಸಿದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಶಾಪ ನೀಡಿದ್ದಾಳೆ ಎಂದು ಪುರಾಣ ಹೇಳುತ್ತದೆ.
ಭಗತಿ ಮಾ ಮಂದಿರ
ಈ ಮಂದಿರವು ಕನ್ಯಾಕುಮಾರಿಯಲ್ಲಿದೆ. ಕನ್ಯಾ ಮಾತೆ ಭಗವತಿ ದುರ್ಗೆಯು ಸಮುದ್ರ ನಡುವಿನ ಏಕಾಂತ ಪ್ರದೇಶಕ್ಕೆ ಹೋಗಿ ಶಿವನು ತನ್ನ ಪತಿಯಾಗಬೇಕೆಂದು ತಪಸ್ಸನ್ನು ಆಚರಿಸುವರು. ಪುರಾಣಗಳ ಪ್ರಕಾರ ಸತಿಯ ಬೆನ್ನುಹುರಿಯು ಈ ದೇವಾಲಯದಲ್ಲಿ ಬೀಳುತ್ತದೆ. ಈ ದೇವಿಯನ್ನು ಸನ್ಯಾಸ ದೇವಿಯೆಂದು ಕರೆಯಲಾಗುತ್ತದೆ.
ಈ ಕಾರಣದಿಂದಾಗಿ ಸನ್ಯಾಸಿ ಪುರುಷರಿಗೆ ಮಂದಿರದ ಆವರಣದ ತನಕ ಮಾತ್ರ ಪ್ರವೇಶವಿದೆ. ಆದರೆ ವಿವಾಹಿತ ಪುರುಷರಿಗೆ ಸಂಪೂರ್ಣ ನಿಷೇಧವಿದೆ.
ಅಟ್ಟುಕಲ್ ಮಂದಿರ
ಕೇರಳದ ಅಟ್ಟುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯದಲ್ಲಿ ಸುಮಾರು ಮೂರು ಮಿಲಿಯನ್ ಮಹಿಳೆಯರು ಸೇರಿ ಪೊಂಗಲ್ ಆಚರಣೆ ಮಾಡಿ ಗಿನ್ನಿಸ್ ದಾಖಲೆಗೆ ಬರೆದಿದ್ದಾರೆ. ಹಬ್ಬದ ವೇಳೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸೇರುವ ಕಾರಣದಿಂದಾಗಿ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ.