ತಿರುಪತಿ ತಿಮ್ಮಪ್ಪನನ್ನೇ ಬಿಡದ ಕಳ್ಳರು ಕನಕ ದುರ್ಗೆಯನ್ನು ಬಿಟ್ಟಾರಾ?
ಕರಾಗ್ರೇ ವಸತೇ ಲಕ್ಷೀ ಕರಮಧ್ಯೆ ಸರಸ್ವತಿ, ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ ಎಂದು ಬೆಳಗ್ಗೆ ಎದ್ದು ಹರಿನಾಮಸ್ಮರಣೆ ಮಾಡುತ್ತೇವೆ. ಸ್ವಲ್ಪಹೊತ್ತು ಬಿಟ್ಟು ದಿನಪತ್ರಿಕೆಯತ್ತ ಕಣ್ಣಾಡಿಸಿದಾಗ, ದೇವರ ಮೈಮೇಲಿನ ಆಭರಣಗಳನ್ನು ಕಳ್ಳರು ದೋಚಿದ ಸುದ್ದಿಗಳನ್ನು ಓದುತ್ತೇವೆ..
ಚಿನ್ನದ ಬೆಲೆಯ ಅರಿವು ಎಲ್ಲರಿಗಿಂತ ಹೆಚ್ಚಾಗಿ ಗೊತ್ತಿರುವುದು ಕಳ್ಳನಿಗಂತೆ.. ಹಾಗಾಗಿ ಅವನಿಗೆ ದೇವರ ಮೇಲಿದ್ದ ಒಡವೆಗಳಾದರೇನು, ಹೆಣ್ಣುಮಕ್ಕಳ ತಾಳಿಯಾದರೇನು? ಆದರೆ ಬೇಲಿಯೇ ಎದ್ದು ಹೊಲಮೇಯ್ದರೆ? ಅಂದರೆ ಅರ್ಚಕರು ಮತ್ತು ಆಡಳಿತ ಮಂಡಳಿಯವರೇ ಶಾಮೀಲಾಗಿ ದೇವರ ಆಭರಣಗಳನ್ನು ಲಪಟಾಯಿಸಿದರೆ?
ತಿರುಪತಿ ತಿಮ್ಮಪ್ಪನ 'ಮಾಣಿಕ್ಯ' ಮಿಸ್ಸಿಂಗ್ : ಹೊಸ ಬಾಂಬ್ ಸಿಡಿಸಿದ ರೆಡ್ಡಿ
ವಿಜಯನಗರ ಸಾಮ್ರಾಜ್ಯದ ಅರಸರು ಮತ್ತು ಮೈಸೂರು ಮಹಾರಾಜರು ತಿರುಪತಿ ವೆಂಕಟೇಶ್ವರನಿಗೆ ನೀಡಿದ, ಇಂದಿನ ಮಾರುಕಟ್ಟೆಯಲ್ಲಿ ಬೆಲೆಕಟ್ಟಲಾಗದ ಆಭರಣಗಳು ಕಾಣೆಯಾಗಿರುವ ಸುದ್ದಿಯನ್ನು ಕೇಳಿದ್ದೇವೆ. ಟಿಟಿಡಿ ದೇವಾಲಯದ ಪ್ರಧಾನ ಅರ್ಚಕರೇ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ಗೊತ್ತಿರುವ ವಿಚಾರ.
ಈ ಸುದ್ದಿ ಇನ್ನೂ ಆಸ್ತಿಕವಲಯದಲ್ಲಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇರುವ ಈ ಹೊತ್ತಿನಲ್ಲಿ, ಆಂಧ್ರಪ್ರದೇಶದ ಮತ್ತೊಂದು ಮಹಾನ್ ಕಾರ್ಣಿಕ ದೇವಾಲಯಗಳಲ್ಲೊಂದು ಎಂದೇ ಖ್ಯಾತಿ ಪಡೆದಿರುವ ಕನಕ ದುರ್ಗ ದೇವಾಲಯದಲ್ಲೂ ಇಂತಹ ಘಟನೆಯೊಂದು ವರದಿಯಾಗಿದೆ.
ಭಕ್ತರು ಕನಕ ದುರ್ಗಿಗೆ ಕಾಣಿಕೆ ರೂಪದಲ್ಲಿ ನೀಡಿದ ವಸ್ತು, ಹೀಗೆ ಹೋಗಿ ಹಾಗೇ ಬರುವಷ್ಟರಲ್ಲಿ ನಾಪತ್ತೆಯಾಗಿದೆ. ಅದಕ್ಕೆ ಸರಿಯಾಗಿ ದೇವಾಲಯದ ಗರ್ಭಗುಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕೂಡಾ ಕೈಕೊಟ್ಟಿದೆ. ಭಕ್ತರು ರೋಸಿ ಹೋಗಿದ್ದಾರೆ, ಇಂತಹ ಖದೀಮರನ್ನು ಯಾಕಮ್ಮಾ ಸುಮ್ಮನೆ ಬಿಟ್ಟಿದ್ದೀಯಾ ಎಂದು ಕನಕ ದುರ್ಗೆಯನ್ನು ಭಕ್ತರು ಬೇಡಿಕೊಂಡಿದ್ದಾರೆ.
ಐತಿಹಾಸಿಕ ಕನಕದುರ್ಗ ದೇವಾಲಯ
ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಕನಕ ದುರ್ಗ ದೇವಾಲಯದಲ್ಲಿ ನಡೆದ ಘಟನೆಯ ಬಗ್ಗೆ ಕೆಂಡಾಮಂಡಲವಾಗಿರುವ ಆಂಧ್ರ ಮತ್ತು ತೆಲಂಗಾಣದ ಸಿಎಂಗಳು ದೇವಾಲಯದ ಆಡಳಿತ ಮಂಡಳಿಯನ್ನು ಹಿಗ್ಗಾಮುಗ್ಗ ಬೆಂಡೆತ್ತಿದ್ದಾರೆ. ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ತನಿಖೆಗೆ ಆದೇಶಿಸಿದ್ದಾರೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಹರಸು ಎಂದು ತಾಯಿಯನ್ನು ಬೇಡಿಕೊಳ್ಳುತ್ತೇವೆ.. ಈಗ ತಾಯಿಯ ವಸ್ತುಗಳನ್ನು ರಕ್ಷಿಸುವವರು ಯಾರು? ನಮ್ಮ ನಂಬಿಕೆಗಳಿಗೆ ಬೆಲೆಯಿಲ್ಲವೇ ಎಂದು ಭಕ್ತರು ಬೇಸರಿಸಿಕೊಂಡಿದ್ದಾರೆ.
ಸುಮಾರು ಇಪ್ಪತ್ತು ಸಾವಿರ ಬೆಲೆಬಾಳುವ ಸಿಲ್ಕ್ ಸೀರೆ
ಸುಮಾರು ಇಪ್ಪತ್ತು ಸಾವಿರ ಬೆಲೆಬಾಳುವ ಸಿಲ್ಕ್ ಸೀರೆಯನ್ನು ಭಕ್ತರು ಕನಕ ದುರ್ಗ ದೇವಾಲಯಕ್ಕೆ ಸೇವಾರ್ಥವಾಗಿ ನೀಡಿದ್ದರು. ದೇವಿಯ ವಿಗ್ರಹದ ಮೇಲೆ ಸ್ವಲ್ಪಹೊತ್ತು ಸೀರೆಯನ್ನಿಟ್ಟು, ನಂತರ ಅದನ್ನು ದೇವಾಲಯದ ಪ್ರಧಾನ ಅರ್ಚಕರೇ ಸೂರ್ಯಲತಾ ಎನ್ನುವವರ ಜೊತೆ ಕೊಟ್ಟುಕಳುಹಿಸಿದ್ದರು. ದೇವಿಗೆ ಉಡಿಸಿದ ಸೀರೆ ನಿಮಿಷಾರ್ಧದಲ್ಲಿ ಕಾಣೆಯಾಗಿದ್ದನ್ನು ಅರಿತು, ಸುಮಾರು ಇನ್ನೂರು ಲಲಿತಾ ಸಹಸ್ರನಾಮ ಪಠಿಸುತ್ತಿದ್ದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆಗೆ ಆದೇಶ ನೀಡಬೇಕೆಂದು ದೇವಾಲಯದ ಆಡಳಿತಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯ ಅಧಿಕಾರಿಗಳು ತನಿಖೆ ನಡೆಸಿದಾಗ, ಸೂರ್ಯಲತಾ ತಪ್ಪೊಪ್ಪಿಕೊಂಡಿದ್ದಾರೆ.
ಆಂಧ್ರದ ಹಿಂದೂ ಧರ್ಮ ಪರಿರಕ್ಷಣ ಸಮಿತಿ
ಆಂಧ್ರದ ಹಿಂದೂ ಧರ್ಮ ಪರಿರಕ್ಷಣ ಸಮಿತಿಯ ಪ್ರಕಾರ, ಆಂಧ್ರಪ್ರದೇಶ ಸರಕಾರವು ಕನಕದುರ್ಗ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ನಡೆಸುತ್ತಿದ್ದಾರೆ ಎನ್ನಲಾಗುತ್ತಿರುವ ಅವ್ಯವಹಾರಗಳನ್ನು ನೋಡಿಯೂ ಸುಮ್ಮನಾಗಿದೆ. ಭಕ್ತರ ಭಾವನೆಗಳನ್ನು ಕೆರಳಿಸುವ ಕೆಲಸ ಇಲ್ಲಿನ ಅರ್ಚಕರಿಂದ ನಡೆಯುತ್ತಿದೆ ಎನ್ನುವ ದೂರಿಗೂ ಸರಕಾರ ಕಿವಿಗೊಡುತ್ತಿಲ್ಲ. ಇತ್ತೀಚೆಗೆ ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ , ಮೂಗುತ್ತಿಯನ್ನು ಕನಕದುರ್ಗೆಗೆ ಅರ್ಪಿಸುವ ಸಂದರ್ಭದಲ್ಲೂ, ಭಕ್ತರು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಅವರ ಬಳಿ ದೂರನ್ನಿತ್ತಿದ್ದರು.
ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಕಲ್ಲೇಶ್ವರಂ ದೇವಾಲಯ
ಇದಲ್ಲದೇ ತೆಲಂಗಾಣದ ಎರಡು ಪ್ರಸಿದ್ದ ದೇವಾಲಯಗಳಾದ ಜಗಿತ್ಯಾಲ್ ಜಿಲ್ಲೆಯ ಧರ್ಮಪುರಿಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆರು ಲಕ್ಷ ಬೆಲೆಬಾಳುವ ವಜ್ರಖಚಿತ ಬಳೆಗಳು ಕಾಣೆಯಾಗಿದ್ದವು. ಬುಲಪಲ್ಲಿ ಜಿಲ್ಲೆಯಲ್ಲಿರುವ ಕಲ್ಲೇಶ್ವರಂ ದೇವಾಲಯದ ಸಿಲ್ಕ್ ಸೀರೆ ಕೂಡಾ ನಾಪತ್ತೆಯಾಗಿದ್ದವು. ಇದರಲ್ಲಿ ಬಳೆಗಳನ್ನು ಅನಿವಾಸಿ ಭಾರತೀಯರೊಬ್ಬರು ನೀಡಿದ್ದರೆ, ಸಿಲ್ಕ್ ಸೀರೆಯನ್ನು ಖುದ್ದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರೇ ನೀಡಿದ್ದರು.
ಕಾಣೆಯಾಗಿರುವ ಮಾಣಿಕ್ಯ ಜಿನಿವಾದಲ್ಲಿ ಹರಾಜಿನ ವೇಳೆ ಕಾಣಿಸಿಕೊಂಡಿತ್ತು
1945ರಲ್ಲಿ ಮೈಸೂರು ರಾಜಮನೆತನದವರು ಅತೀ ಅಪರೂಪದ ಮಾಣಿಕ್ಯವನ್ನು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ್ದರು, ಈ ಮಾಣಿಕ್ಯ ಕಾಣೆಯಾಗಿರುವುದು ದೇವಾಲಯದ ರಿಜಿಸ್ಟರ್ (inventory) ನಲ್ಲಿ ಉಲ್ಲೇಖವಾಗಿದೆ ಎಂದು ಪ್ರಧಾನ ಅರ್ಚಕ ರಮಣ ದೀಕ್ಷಿತಲು ಹೇಳಿಕೆ ನೀಡಿದ್ದರು. ದೇವಾಲಯದ ಬ್ರಹ್ಮೋತ್ಸವದ ವೇಳೆ ಮೂಲ ವಿಗ್ರಹದ ಹೃದಯದಲ್ಲಿ ಇಡಲಾಗುತ್ತಿದ್ದ ಈ ಮಾಣಿಕ್ಯವನ್ನು ಕಳೆದ ಸುಮಾರು ಹದಿನೆಂಟು ವರ್ಷಗಳಿಂದ ಅಲಂಕಾರಕ್ಕೆ ಬಳಸುತ್ತಿಲ್ಲ. ಕಾಣೆಯಾಗಿರುವ ಈ ಮಾಣಿಕ್ಯ ಸ್ವಿಜರ್ಲ್ಯಾಂಡಿನ ಜಿನಿವಾದಲ್ಲಿ ಹರಾಜಿನ ವೇಳೆ ಕಾಣಿಸಿಕೊಂಡಿತ್ತು ಎಂದು ರಮಣ ದೀಕ್ಷಿತಲು ಹೇಳಿದ್ದರು. ಇದಾದ ನಂತರ, ತಿಮ್ಮಪ್ಪನಿಗೆ ಸೇರಿದ ಎಲ್ಲಾ ಆಭರಣಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.