ಕಾಶ್ಮೀರದಲ್ಲಿ ಮೊದಲು ಹೂಡಿಕೆ ಮಾಡಲಿರುವ ಕನ್ನಡಿಗ ಯಾರು?
ದುಬೈ, ಸೆಪ್ಟೆಂಬರ್ 19: ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಆಸ್ತಿ ಖರೀದಿಸಲು ಇದ್ದ ನಿಷೇಧ ತೆರವುಳಿಸಿರುವ ಹಿನ್ನೆಲೆ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಜಮ್ಮು ಕಾಶ್ಮೀರದಲ್ಲಿ ಬೃಹತ್ ಫಿಲ್ಮ್ ಸಿಟಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ.
ಅರಬ್ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಬಿ.ಆರ್. ಶೆಟ್ಟಿ, ಜಮ್ಮು-ಕಾಶ್ಮೀರ ಅತ್ಯಂತ ರಮಣೀಯ ಸ್ಥಳವಾಗಿದ್ದು, ನಾನು ಅಲ್ಲಿಗೆ ಬಂದು ಚಿತ್ರಗಳನ್ನು ಚಿತ್ರೀಕರಿಸಬಹುದು.
ನನಗೆ ಈಗಾಗಲೇ ಜಮ್ಮು ಕಾಶ್ಮೀರ ಮತ್ತು ಲಡಾಕ್ ನಲ್ಲಿ ಸುಮಾರು 3 ಸಾವಿರ ಎಕರೆಯಷ್ಟು ಜಾಗ ನೀಡುವುದಾಗಿ ಆಫರ್ಗಳು ಬಂದಿವೆ. ಆಗಸ್ಟ್ನಲ್ಲಿ ನರೇಂದ್ರ ಅವರು ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ 7 ಸಾವಿರ ಕೋಟಿ ರೂ ಹೂಡಿಕೆ ಮಾಡುವುದಾಗಿ ಬಿ.ಆರ್. ಶೆಟ್ಟಿ ಪ್ರಕಟಿಸಿದ್ದರು.
ಸಂವಿಧಾನದ ವಿಧಿ 35 ಎ ವಿಧಿ ಕಾಶ್ಮೀರದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಿತ್ತು. ಕಾಶ್ಮೀರದ ನಿವಾಸಿಗಳನ್ನು ಹೊರತುಪಡಿಸಿ ಅನ್ಯ ರಾಜ್ಯದವರು ಆಸ್ತಿ ಖರೀದಿಸಲು ಅವಕಾಶ ಇರಲಿಲ್ಲ. ಆದರೆ, ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದುಗೊಳಿಸಿರುವುದರಿಂದ ಅನುಕೂಲವಾಗಿದೆ.