ಸಿಬಿಐ ಮುಖ್ಯಸ್ಥ ಅಲೋಕ್ ಮೇಲೆ ಕಣ್ಗಾವಲು ಸುದ್ದಿಗೆ ರೆಕ್ಕೆಪುಕ್ಕ!
ನವದೆಹಲಿ, ಅಕ್ಟೋಬರ್ 25: ಇಲ್ಲಿ ಗುರುವಾರ ಬೆಳಗ್ಗೆ ಭಾರೀ ಸುದ್ದಿ ಮಾಡಿದ ವಿಚಾರವೊಂದು ಮಧ್ಯಾಹ್ನದ ಹೊತ್ತಿಗೆ ಠುಸ್ ಪಠಾಕಿ ಆಗಿದೆ. ಸದ್ಯಕ್ಕೆ ಕಿತ್ತೊಗೆಯಲಾದ ಸಿಬಿಐ ಮುಖ್ಯಸ್ಥ ಅಲೋಕ್ ಕುಮಾರ್ ವರ್ಮಾರ ಮನೆಯ ಬಳಿ, ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಅವರು ಬೇಹುಗಾರಿಕೆ ಮಾಡುತ್ತಿದ್ದರು ಎಂದು ಸುದ್ದಿ ಹರಡಿತ್ತು.
ಆದರೆ, ಇಂಥ ಯಾವುದೂ ಇಲ್ಲ. ನಮ್ಮ (ಗುಪ್ತಚರ ಇಲಾಖೆ) ಸಿಬ್ಬಂದಿ ಕಾರ್ಯ ನಿರ್ವಹಿಸುವ ಬಗೆಯೇ ಇದು ಎಂದು ಗುಪ್ತಚರ ಇಲಾಖೆ ಸ್ಪಷ್ಟಪಡಿಸಿದೆ. ಜನಪಥ್ ರಸ್ತೆಯಲ್ಲಿ ಹಲವಾರು ಗಣ್ಯ ಪ್ರಮುಖರ ವಸತಿಗಳಿವೆ. ಆದ್ದರಿಂದ ಗುಪ್ತಚರ ದಳದ ಸಿಬ್ಬಂದಿಯನ್ನು ಯಾವಾಗಲೂ ಆ ಭಾಗದಲ್ಲಿ ನೇಮಿಸಲಾಗುತ್ತದೆ ಎಂದು ಹೇಳಲಾಗಿದೆ.
ಅಲೋಕ್ ವರ್ಮಾ ಮನೆ ಮುಂದಿದ್ದ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ
ಬೇಹುಗಾರಿಕೆ ಮಾಡುತ್ತಿದ್ದರು ಎಂದು ಆರೋಪಿಸಿರುವ ನಾಲ್ವರನ್ನು ಧೀರಜ್ ಕುಮಾರ್, ಅಜಯ್ ಕುಮಾರ್, ಪ್ರಶಾಂತ್ ಕುಮಾರ್ ಹಾಗೂ ವಿನೀತ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ಆಂತರಿಕ ಭದ್ರತೆ ಮೇಲೆ ನಿಗಾ ಇಡುವುದು ಹಾಗೂ ಸನ್ನಿವೇಶದ ಮೇಲೆ ಕಣ್ಗಾವಲು ಇಡುವುದು ಗುಪ್ತಚರ ಇಲಾಖೆ ಕೆಲಸ. ಇದು ಬೇಹುಗಾರಿಕೆ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ನಮ್ಮ ತಂಡವು ಸ್ಥಳೀಯ ತನಿಖಾ ಸಂಸ್ಥೆಗಳ ಜತೆಗೂಡಿ ಕೆಲಸ ಮಾಡುತ್ತದೆ. ಇನ್ನೂ ಕೆಲವು ಸಲ ಅಚ್ಚರಿ ಎಂಬ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ಮಾಧ್ಯಮಗಳಿಗೆ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.
ವರ್ಮಾರ ಮನೆಗೆ ಬಂದು-ಹೋಗುವವರು ಯಾರು ಎಂಬ ಕಣ್ಗಾವಲು
ಮತ್ತೊಂದು ಮೂಲದ ಪ್ರಕಾರ, ವರ್ಮಾ ಮನೆಗೆ ಬಂದುಹೋಗುವವರು ಯಾರು ಎಂದು ನಿಗಾ ಮಾಡುವುದಕ್ಕೆ ಅಂತಲೇ ಅವರನ್ನು ನಿಯೋಜಿಸಲಾಗಿತ್ತು. ಅದೇನೂ ಗುಮಾನಿ ಪಡುವಂಥದ್ದಲ್ಲ ಎನ್ನುತ್ತಾರೆ. ಸದ್ಯಕ್ಕೆ ಅವರ ಐಡಿ ಮತ್ತು ಫೋನ್ ಗಳನ್ನು ತೆಗೆದುಕೊಳ್ಳಲಾಗಿದೆ. ಇದು ಕಣ್ಗಾವಲು ಅಂದುಕೊಳ್ಳಬೇಕಿಲ್ಲ. ಯಾರೂ ಕಣ್ಣಿಗೂ ಕಾಣಿಸಿಕೊಳ್ಳದಂತೆ ಕೆಲಸ ಮಾಡಲಾಗುತ್ತದೆ ಎಂದು ಕೂಡ ಗುಪ್ತಚರ ಇಲಾಖೆ ಹೇಳಿದೆ. ಅಂಥದೇ ಒಂದು ಗುಂಪು ಗುರುವಾರ ಬೆಳಗ್ಗೆ ಜನಪಥ್ ನಲ್ಲಿ ಒಟ್ಟಾಗಿತ್ತು. ಮಾಮೂಲಿಗಿಂತ ಹೆಚ್ಚಿನ ಸಂಖ್ಯೆ ಜನರಿದ್ದರಿಂದ ಅದನ್ನು ಪರೀಕ್ಷಿಸಲು ಆ ಗುಂಪು ನಿಯೋಜನೆ ಆಗಿತ್ತು. ಇದು ಬಹಳ ಸುರಕ್ಷತೆ ಹೆಚ್ಚಾಗಿರಬೇಕಾದ ಸ್ಥಳ. ಅತಿ ಗಣ್ಯರೆಲ್ಲ ವಾಸವಿದ್ದಾರೆ. ದುರದೃಷ್ಟ ಏನೆಂದರೆ ಇದನ್ನು ಬೇರೆ ರೀತಿ ಬಿಂಬಿಸಲಾಯಿತು ಎಂದು ಇಲಾಖೆ ಹೇಳಿದೆ.
ಪೊಲೀಸ್ ಮೂಲಗಳು ಹೇಳುವುದು ಬೇರೆ
ಪೊಲೀಸ್ ದಾಖಲೆಗಳ ಪ್ರಕಾರ, ಯಾರನ್ನೂ ಬಂಧಿಸಿಲ್ಲ. ಗುಪ್ತಚರ ಇಲಾಖೆಯು ಯಾವುದೇ ಸ್ಪಷ್ಟೀಕರಣ ನೀಡಿದ್ದರೂ ಈ ಘಟನೆಯಿಂದ ಅಲೋಕ್ ವರ್ಮಾ ಮೇಲೆ ಕಣ್ಣಿಡಲಾಗಿದೆ ಎಂಬ ಅಂಶವನ್ನೇ ಪುಷ್ಟೀಕರಿಸುತ್ತಿದೆ. ಏಕೆಂದರೆ ಅವರನ್ನು ದಿಢೀರನೇ ರಜಾ ಮೇಲೆ ಕಳುಹಿಸಿತ್ತು ಸರಕಾರ. ಮಧ್ಯಂತರ ಮುಖ್ಯಸ್ಥರಾಗಿ ನಾಗೇಶ್ವರ್ ರಾವ್ ರನ್ನು ನೇಮಿಸಲಾಯಿತು. ತಮ್ಮ ನಂತರದ ಸ್ಥಾನದಲ್ಲಿದ್ದ ರಾಕೇಶ್ ಅಸ್ತಾನಾ ವಿರುದ್ಧ ತನಿಖೆ ಆರಂಭಿಸಿದ ಒಂದೇ ದಿನಕ್ಕೆ ಅಲೋಕ್ ವರ್ಮಾರನ್ನು ರಜಾ ಮೇಲೆ ಕಳುಹಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಅಸ್ತಾನಾ ವಿರುದ್ಧದ ತನಿಖೆಗೆ ವರ್ಮಾ ನೇಮಿಸಿದ್ದ ತಂಡದ ಸದಸ್ಯರ ಪೈಕಿ ಆರಕ್ಕೂ ಹೆಚ್ಚು ಮಂದಿಯನ್ನು ಸಾಮೂಹಿಕ ವರ್ಗಾವಣೆ ಮಾಡಿ, ನಾಗೇಶ್ವರ್ ರಾವ್ ಆದೇಶಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಎರಡು ಗಂಟೆಗೆ ಸಿಬಿಐ ನಿರ್ದೇಶಕರಾಗಿ ನಾಗೇಶ್ವರ ರಾವ್ ಅಧಿಕಾರ ವಹಿಸಿಕೊಂಡಿದ್ದರು.
ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯಲು ಕೇಂದ್ರಕ್ಕೆ ಅಧಿಕಾರವಿಲ್ಲ : ಪ್ರಶಾಂತ್
ಅಜಿತ್ ದೋವಲ್ ಆಣತಿಯಂತೆ ನಡೆಯಿತು
ಈ ಎಲ್ಲ ರಾತ್ರೋರಾತ್ರಿ ಚಟುವಟಿಕೆಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿಗಾದಲ್ಲಿ ನಡೆದಿದ್ದವು. ವರ್ಮಾರಿಂದ ಅಧಿಕಾರ ವಾಪಸ್ ಪಡೆಯುವುದು, ಮಧ್ಯಂತರ ಮುಖ್ಯಸ್ಥರನ್ನು ಕೂರಿಸುವುದು ಇವೆಲ್ಲ ದೋವಲ್ ಆಲೋಚನೆ ಆಗಿತ್ತು. ರಾತ್ರಿ ಒಂದು ಗಂಟೆಗೆ ಹೊಸ ನಿರ್ದೇಶರ ನೇಮಕ ಆದೇಶ ಹೊರಡಿಸಿ, ರಾತ್ರಿ ಎರಡು ಗಂಟೆ ಹೊತ್ತಿಗೆ ಪೊಲೀಸರ ಕಾರುಗಳ ಕಾವಲಿನಲ್ಲಿ ಸಿಬಿಐ ಮುಖ್ಯ ಕಚೇರಿಗೆ ಬಂದ ನಾಗೇಶ್ವರ ರಾವ್ ಜವಾಬ್ದಾರಿ ವಹಿಸಿಕೊಂಡಿದ್ದರು.
ಪ್ರಧಾನಮಂತ್ರಿಗೆ ಅಸ್ತಾನ ಆಪ್ತ ಎಂದು ರಾಹುಲ್ ಆರೋಪ
ಈ ರೀತಿಯ ಬೆಳವಣಿಗೆಗಳು ವಿರಳಾತಿವಿರಳ. ಸಿಬಿಐನ ಮೊದಲೆರಡು ಸ್ಥಾನದಲ್ಲಿ ಇರುವವರ ಮಧ್ಯೆ ತಿಕ್ಕಾಟ ಏರ್ಪಟ್ಟು, ಸಿಬಿಐನಿಂದ ಅಸ್ತಾನಾ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಅಸ್ತಾನ ಅವರನ್ನು 'ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀಲಿಗಣ್ಣಿನ ಹುಡುಗ' ಅಂತಲೇ ಕರೆಯಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.