'ಥ್ಯಾಂಕ್ಯೂ, ಪ್ರಜಾತಂತ್ರ ದೀರ್ಘಕಾಲ ಬಾಳಲಿ!'
ನವದೆಹಲಿ, ಮಾರ್ಚ್ 11 : "ಥ್ಯಾಂಕ್ಯೂ, ಪ್ರಜಾತಂತ್ರ ದೀರ್ಘಕಾಲ ಬಾಳಲಿ!" ಇದು ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಸ್ಮರಣೀಯ ಗೆಲುವು ಸಾಧಿಸಿದ್ದಕ್ಕೆ ರಾಹುಲ್ ಗಾಂಧಿ ಮೋದಿಯವರನ್ನು ಅಭಿನಂದಿಸಿದ್ದಕ್ಕಾಗಿ ಪ್ರಧಾನಿ ನೀಡಿದ ಪ್ರತಿಕ್ರಿಯೆ.
ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಆನಂದತುಂದಿಲರಾಗಿರುವ ನರೇಂದ್ರ ಮೋದಿಯವರು, ಗೆಲುವು ತಂದುಕೊಟ್ಟ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದು, ಗೆಲುವಿನಿಂದಾಗಿ ಮನತುಂಬಿಬಂದಿದೆ ಎಂದು ಹೇಳಿದ್ದಾರೆ. [ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]
ಪ್ರತಿಷ್ಠೆಯ ಕಣವಾಗಿದ್ದ ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ, 320ಕ್ಕೂ ಹೆಚ್ಚು ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಮತ್ತು ಅಂಗ ಪಕ್ಷಗಳು ಪಡೆದುಕೊಂಡಿದ್ದರೆ, ಉತ್ತರಾಖಂಡ್ ನಲ್ಲಿ 70 ಕ್ಷೇತ್ರಗಳಲ್ಲಿ 59 ಸ್ಥಾನಗಳನ್ನು ಬಾಚಿಕೊಂಡು ಕಮಲದ ಹೂವು ಗೆಲುವಿನ ನಗೆ ಬೀರಿದೆ.
Thank you. Long live democracy! https://t.co/hJoGsO5lGA
— Narendra Modi (@narendramodi) March 11, 2017
"ಸಮಾಜದ ಎಲ್ಲ ವರ್ಗದವರು ನಮ್ಮನ್ನು ಬೆಂಬಲಿಸಿದ್ದಕ್ಕೆ ನನ್ನ ಮನತುಂಬಿಬಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯುವಜನತೆಯಿಂದ ಬೆಂಬಲ ಸಿಕ್ಕಿದ್ದು ಹೆಚ್ಚು ಸಂತೋಷ ತಂದಿದೆ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.[ಬಿಜೆಪಿ ಭರ್ಜರಿ ಜಯದ ಹಿಂದೆ ಅಮಿತ್ ಶಾ ತಂತ್ರಗಾರಿಕೆ ಹೀಗಿತ್ತು!]
ಮತನೀಡಿದ ಜನರು ಮತ್ತು ಪಕ್ಷದ ಕಾರ್ಯಕರ್ತರ ಜೊತೆ ಗೆಲುವಿನ ಪ್ರಮುಖ ರೂವಾರಿಗಳಾದ ಅಮಿತ್ ಶಾ, ರಾಜ್ಯದ ಪದಾಧಿಕಾರಿಗಳು ಪಕ್ಷವನ್ನು ಇಷ್ಟು ಉನ್ನತ ಸ್ಥಿತಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಅಭಿನಂದನೆಗಳು ಮೋದಿ ಸಲ್ಲಿಸಿದ್ದಾರೆ.
Gratitude to the people of India for the continued faith, support and affection for the BJP. This is very humbling & overwhelming.
— Narendra Modi (@narendramodi) March 11, 2017
ಬಿಜೆಪಿ ಕಾರ್ಯಕರ್ತರ ಕಠಿಣಶ್ರಮಕ್ಕೆ ನನ್ನ ಸೆಲ್ಯೂಟ್. ಅವರು ತಳಮಟ್ಟದಲ್ಲಿ ಮಾಡಿದ ಅಭೂತಪೂರ್ವ ಕೆಲಸದಿಂದಾಗಿ ಜನರ ನಂಬಿಕೆಯನ್ನು ಗಳಿಸಲು ಸಾಧ್ಯವಾಗಿದ್ದು. ನಮ್ಮ ಪ್ರತಿಕ್ಷಣವೂ ದೇಶದ ಜನರ ಒಳಿತಿಗಾಗಿ ಚಿಂತಿಸುತ್ತಿರುತ್ತೇವೆ. ನಮಗೆ 125 ಕೋಟಿ ಭಾರತೀಯರ ಮೇಲೆ ನಂಬಿಕೆಯಿದೆ ಎಂದು ಮೋದಿ ಹೇಳಿದ್ದಾರೆ.
ಪಂಜಾಬ್ ನಲ್ಲಿ 10 ವರ್ಷಗಳ ಕಾಲ, ಶಿರೋಮಣಿ ಅಕಾಲಿ ದಳದೊಂದಿಗೆ ಬಿಜೆಪಿ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ, ಮತ್ತು ಈ ಚುನಾವಣೆಯಲ್ಲಿ ಮತಹಾಕಿದ ಪಂಜಾಬ್ ಜನತೆಗೂ ಅವರು ಧನ್ಯವಾದ ಅರ್ಪಿಸಿದರು. [ಉತ್ತರಪ್ರದೇಶ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಮೋದಿ 9 ಹೇಳಿಕೆ]