ಅಮರನಾಥ್ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರ ಪೈಶಾಚಿಕ ಕೃತ್ಯ
ಭಾರೀ ಭದ್ರತಾ ಬಂದೋಬಸ್ತಿನ ನಡುವೆಯೂ ಭಯೋತ್ಪಾದಕರು ಪೈಶಾಚಿಕ ಕೃತ್ಯ ಎಸಗಿದ್ದು, ಅಮರನಾಥ್ ಯಾತ್ರಾರ್ಥಿಗಳ ಮೇಲೆ, ಸೋಮವಾರ (ಜು 10) ನಡೆದ ಗುಂಡಿನ ದಾಳಿ ನಡೆಸಿದ್ದಾರೆ.
ಶ್ರೀನಗರ, ಜುಲೈ 10: ಭಾರೀ ಭದ್ರತಾ ಬಂದೋಬಸ್ತಿನ ನಡುವೆಯೂ ಭಯೋತ್ಪಾದಕರು ಪೈಶಾಚಿಕ ಕೃತ್ಯ ಎಸಗಿದ್ದು, ಅಮರನಾಥ್ ಯಾತ್ರಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಉಗ್ರರ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಒಂಬತ್ತು ಜನ ಗಾಯಗೊಂಡಿದ್ದಾರೆಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ. ಮೃತ ಪಟ್ಟ ಇಬ್ಬರು ಗುಜರಾತ್ ಮೂಲದವರು ಎಂದು ಗುರುತಿಸಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಆರು ಜನ ಸಾವನ್ನಪ್ಪಿದ್ದು, ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ಸಿನ ಮೇಲೆ ಮನಬಂದಂತೆ ಫೈರಿಂಗ್ ನಡೆಸಿ, ಉಗ್ರರು ಪರಾರಿಯಾಗಿದ್ದಾರೆ. ಘಟನಾ ಸ್ಥಳವನ್ನು ಸೇನೆ ಸುತ್ತುವರಿದಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಟೆನ್ಗೋ ಎನ್ನುವಲ್ಲಿ ಈ ಘಟನೆ ನಡೆದಿದೆ. ಹದಿನೇಳು ಯಾತ್ರಾರ್ಥಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು ವಿಸ್ಕೃತ ಚರ್ಚೆ ನಡೆಸಿದ್ದಾರೆ.