ದೇಶದಲ್ಲಿ 39 ವರ್ಷಗಳಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಮಾಹಿತಿ...
Recommended Video
ಶ್ರೀನಗರ, ಫೆಬ್ರವರಿ 15: ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಅಧಿಕ ಸೈನಿಕರ ಜೀವ ತೆಗೆದ ಭೀಕರ ದಾಳಿಯ ಬಗ್ಗೆ ಇಡೀ ದೇಶ ಮಮ್ಮಲ ಮರುಗುತ್ತಿದೆ. ಎಲ್ಲೆಡೆ ದುಃಖ, ನೋವು, ಸೇಡು ತೀರಿಸಿಕೊಳ್ಳುವ ಆಕ್ರೋಶ, ರಾಜಕೀಯ ಕೆಸರಾಟದ ಬಗ್ಗೆ ಅಸಹನೆ ವ್ಯಕ್ತವಾಗುತ್ತಿವೆ.
ಗುರುವಾರ ಸಂಜೆಯಿಂದಲೂ ದೇಶದಾದ್ಯಂತ ಶೋಕದ ವಾತಾವರಣವಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಪಡೆಗಳು ಅದಕ್ಕೆ ತಕ್ಕ ಪ್ರತೀಕಾರ ಪಡೆದುಕೊಳ್ಳುವುದಾಗಿ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಬೆಂಬಲಕ್ಕೆ ಇರುವುದಾಗಿ ವಿರೋಧಪಕ್ಷಗಳು ಸಹ ತಿಳಿಸಿವೆ.
ಭಯೋತ್ಪಾದನಾ ದಾಳಿಗಳು ಭಾರತಕ್ಕೂ ಹೊಸತಲ್ಲ. ಆದರೆ, ಈ ಹಿಂದೆ ನಾಗರಿಕರನ್ನು ಗುರಿಯನ್ನಾಗಿರಿಸಿಕೊಂಡು ಹೆಚ್ಚಿನ ದಾಳಿಗಳು ನಡೆಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ಸೈನಿಕರೇ ಮುಖ್ಯ ಟಾರ್ಗೆಟ್ ಆಗುತ್ತಿದ್ದಾರೆ. ಪಠಾಣ್ ಕೋಟ್, ಉರಿ ದಾಳಿಗಳು ಸೇನಾ ಶಿಬಿರಗಳನ್ನೇ ಗುರಿಯಾಗಿರಿಸಿಕೊಂಡು ನಡೆದಿದ್ದವು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿ ಕೂಡ ಸೈನಿಕರನ್ನೇ ಗುರಿಯನ್ನಾಗಿರಿಸಿಕೊಂಡು ನಡೆದಿದೆ.
ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಭಾರತ ಮತ್ತು ಪಾಕಿಸ್ತಾನ ದೇಶಗಳ ವಿಭಜನೆಯಾದ ಸಂದರ್ಭದಿಂದಲೂ ದೇಶದಲ್ಲಿ ಉಗ್ರರ ದಾಳಿಗಳು ನಡೆಯುತ್ತಿವೆ. ಉಗ್ರರ ಸಂಘಟನೆಗಳು ಕಾಲಾವಧಿಯಲ್ಲಿ ಇನ್ನಷ್ಟು ಹೆಚ್ಚಾಗಿವೆ. ಈ ಎಲ್ಲ ಸಂಘಟನೆಗಳಿಗೂ ಪಾಕಿಸ್ತಾನವೇ ಮೂಲ ಎನ್ನುವುದು ಭಾರತದ ಆರೋಪ. ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದ ಪ್ರಮುಖ ಭಯೋತ್ಪಾದನಾ ದಾಳಿಗಳ ಮಾಹಿತಿ ಇಲ್ಲಿವೆ.
18 ಸಾವಿರ ಮಂದಿ ಬಲಿ
ಭಾರತ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 1970-2015ರ ಅವಧಿಯಲ್ಲಿ ದೇಶದಲ್ಲಿ 9,982 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಅದರಲ್ಲಿ 18,842 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 28,814 ಮಂದಿ ಗಾಯಗೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. 2015ರಲ್ಲಿಯೇ 883 ಭಯೋತ್ಪಾದನಾ ದಾಳಿ ಘಟನೆಗಳು ನಡೆದಿದ್ದವು.
ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ?
2016ರ ವರದಿ
2016ರ ಜುಲೈನಲ್ಲಿ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2005ರಿಂದ ದೇಶದಲ್ಲಿ ನಡೆದ ಭಯೋತ್ಪಾದನಾ ದಾಳಿಗಳಲ್ಲಿ 707 ಮಂದಿ ಜೀವ ಕಳೆದುಕೊಂಡಿದ್ದಾರೆ. 3,200 ಮಂದಿ ಗಾಯಗೊಂಡಿದ್ದಾರೆ.
350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋದಲ್ಲಿ ತಂದು ಬಸ್ ಗೆ ಗುದ್ದಿದ ದಾಳಿಕೋರ
ಹತ್ಯಾಕಾಂಡಗಳು, ಸ್ಫೋಟಗಳು
* ಮಾಂಡೈ ಹತ್ಯಾಕಾಂಡ: ತ್ರಿಪುರಾದ ಮಾಂಡ್ವಿ ಗ್ರಾಮದಲ್ಲಿ 1980ರ ಜೂನ್ 8ರಂದು ಬುಡಕಟ್ಟು ಸೇನಾ ಉಗ್ರರು ನಡೆಸಿದ ದಾಳಿಯಲ್ಲಿ ಸುಮಾರು 400 ಸ್ಥಳೀಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.
* ತಮಿಳುನಾಡಿನಲ್ಲಿ 1984ರ ಆಗಸ್ಟ್ 2ರಂದು ನಡೆದ ಮೀನಾಂಬಕ್ಕಮ್ ಬಾಂಬ್ ಸ್ಫೋಟದಲ್ಲಿ 30 ಮಂದಿ ಮೃತಪಟ್ಟಿದ್ದರೆ, 25 ಮಂದಿ ಗಾಯಗೊಂಡಿದ್ದರು.
* 1989ರ ಜುಲೈ 7ರಂದು ಹರಿಯಾಣದಲ್ಲಿ ನಡೆದ ಉಗ್ರರ ದಾಳಿಯಲ್ಲಿ 36 ಮಂದಿ ಮೃತಪಟ್ಟಿದ್ದರೆ 60 ಮಂದಿ ಗಾಯಗೊಂಡಿದ್ದರು.
* 1991ರ ಜೂನ್ 25ರಂದು ಪಂಜಾಬ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 126 ಮಂದಿ ಬಲಿಯಾಗಿದ್ದರೆ, 200 ಮಂದಿ ಗಾಯಗೊಂಡಿದ್ದರು.
* 1991ರ ಅಕ್ಟೋಬರ್ 17ರಂದು ಉತ್ತರಾಖಂಡದ ರುದ್ರಾಪುರದಲ್ಲಿ ಬಾಂಬ್ ಸ್ಫೋಟದಲ್ಲಿ 41 ಜನ ಸಾವಿಗೀಡಾಗಿದ್ದರು.
* 1993ರ ಮಾರ್ಚ್ 12ರಂದು ಮುಂಬೈ ಸರಣಿ ಸ್ಫೋಟವು ಸುಮಾರು 800 ಮಂದಿಯ ಬಲಿಪಡೆದುಕೊಂಡಿತ್ತು. 1500ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
* 1998ರ ಕೊಯಮತ್ತೂರು ಬಾಂಬ್ ಸ್ಫೋಟದಲ್ಲಿ 58 ಮಂದಿ ಜೀವ ಕಳೆದುಕೊಂಡಿದ್ದರು.
'ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!
ಸಂಸತ್ ಭವನದ ಮೇಲೆ ದಾಳಿ
* 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಪರಿಷತ್ ಸಮೀಪ ಕಾರ್ ಬಾಂಬ್ ಸ್ಫೋಟದಲ್ಲಿ 38 ಮಂದಿ ಬಲಿಯಾಗಿದ್ದರು.
* 2001ರ ಡಿಸೆಂಬರ್ 13ರಂದು ದೇಶದ ಸಂಸತ್ ಭವನದ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ಏಳು ಮಂದಿ ಸತ್ತಿದ್ದರೆ, 18 ಜನರು ಗಾಯಗೊಂಡಿದ್ದರು.
* 2002ರ ಸೆಪ್ಟೆಂಬರ್ 10ರಂದು ಬಿಹಾರದಲ್ಲಿ ಮಾವೊ ಉಗ್ರರು ರಫೀಗಂಜ್ ರೈಲು ದಾಳಿಯಲ್ಲಿ 200 ಮಂದಿ ಮೃತರಾಗಿದ್ದರು.
* 2002ರ ಸೆಪ್ಟೆಂಬರ್ 24ರಂದು ಗುಜರಾತ್ನ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ 31 ಜನರು ಬಲಿಯಾಗಿದ್ದರು.
* 2003ರಂದು ಜನವರಿಯಿಂದ ಆಗಸ್ಟ್ವರೆಗೆ ಮುಂಬೈನಲ್ಲಿ ನಡೆದ ಸ್ಫೋಟಗಳಲ್ಲಿ ಸುಮಾರು 71 ಮಂದಿ ಜೀವ ಕಳೆದುಕೊಂಡಿದ್ದರು.
* 2005ರಲ್ಲಿ ಅಕ್ಟೋಬರ್ 29ರಂದು ನಡೆದ ಬಾಂಬ್ ಸ್ಫೋಟದಲ್ಲಿ 70 ಜನರು ಮೃತಪಟ್ಟಿದ್ದರು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
* ರಾಜ್ಯದ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 2005ರ ಡಿಸೆಂಬರ್ 28ರಂದು ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಬಲಿಯಾಗಿ ನಾಲ್ವರಿಗೆ ಗಾಯಗಳಾಗಿತ್ತು.
* 2006ರ ಮಾರ್ಚ್ 7ರಂದು ವಾರಣಾಸಿಯ ಸಂಕಟಮೋಚನ್ ಮಂದಿರ ಮತ್ತು ದಂಡು ರೈಲ್ವೆ ನಿಲ್ದಾಣದಲ್ಲಿ ನಡೆದ ಮೂರು ಉಗ್ರರ ದಾಳಿಗಳಲ್ಲಿ 21 ಮಂದಿ ಮೃತಪಟ್ಟಿದ್ದರು.
ಸಂಜೋತಾ ಎಕ್ಸ್ಪ್ರೆಸ್ ದಾಳಿ
* 2006ರ ಜುಲೈ 11ರಂದು ಸಂಜೆ ಜನದಟ್ಟಣೆ ಇರುವ ಸಂದರ್ಭದಲ್ಲಿ ಮುಂಬೈನಲ್ಲಿ ಏಳು ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು. ಇದರಲ್ಲಿ 209 ಮಂದಿ ಜೀವ ಕಳೆದುಕೊಂಡಿದ್ದರೆ 500ಕ್ಕೂ ಹೆಚ್ಚಿ ಜನರು ಗಾಯಾಳುಗಳಾಗಿದ್ದರು.
* 2007ರ ಫೆಬ್ರವರಿ 18ರಂದು ಹರಿಯಾಣದಲ್ಲಿ ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟದಲ್ಲಿ 68 ಮಂದಿ ಪ್ರಾಣ ಕಳೆದುಕೊಂಡಿದ್ದರು.
* 2007ರ ಆಗಸ್ಟ್ 25ರಂದು ಹೈದರಾಬಾದ್ನಲ್ಲಿ ಲುಂಬಿಣಿ ಉದ್ಯಾನ ಹಾಗೂ ಗೋಕುಲ್ ಚಾಟ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 42 ಜನರು ಮೃತಪಟ್ಟಿದ್ದರು. ಇದಕ್ಕೂ ಮೊದಲು ಮೇ ತಿಂಗಳಲ್ಲಿ ನಡೆದ ಮೆಕ್ಕಾ ಮಸೀದಿ ಸ್ಫೋಟದಲ್ಲಿ 13 ಜನರ ಬಲಿಯಾಗಿತ್ತು.
* 2008ರ ಮೇ 13ರಂದು ಜೈಪುರ ಬಾಂಬ್ ಸ್ಫೋಟದಲ್ಲಿ 63 ಮಂದಿ ಸತ್ತಿದ್ದರು.
* 2008ರ ಜುಲೈ 25ರಂದು ಬೆಂಗಳೂರಿನಲ್ಲಿ ನಡೆದ ಸಣ್ಣ ಪ್ರಮಾಣದ ಸರಣಿ ಸ್ಫೋಟಗಳಲ್ಲಿ ಇಬ್ಬರು ಬಲಿಯಾಗಿದ್ದರು.
* 2008ರ ಜುಲೈ 26ರಂದು ಅಹ್ಮದಾಬಾದ್ನಲ್ಲಿ ಬಾಂಬ್ ಸ್ಫೋಟ ನಡೆದು 29 ಜನರು ಸತ್ತಿದ್ದರು.
* 2008ರ ಸೆಪ್ಟೆಂಬರ್ 13 ಮತ್ತು 27ರಂದು ದೆಹಲಿಯಲ್ಲಿ ನಡೆದ ಒಟ್ಟು ಏಳು ಬಾಂಬ್ ಸ್ಫೋಟಗಳಲ್ಲಿ 36 ಜನರು ಬಲಿಯಾಗಿದ್ದರು.
2008ರ ಭೀಕರ ದಾಳಿ
* 2008ರ ನವೆಂಬರ್ 26ರಂದು ಮುಂಬೈನ ವಿವಿಧೆಡೆ ಉಗ್ರರು ನಡೆಸಿದ ಬಾಂಬ್ ಹಾಗೂ ಗುಂಡಿನ ದಾಳಿಗಳಲ್ಲಿ 171 ಮಂದಿ ಮೃತಪಟ್ಟಿದ್ದರು. 239 ಜನರು ಗಾಯಗೊಂಡಿದ್ದರು.
* 2011ರ ಜುಲೈ 13ರಂದು ಮುಂಬೈ ಒಪೆರಾ ಹೌಸ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 26 ಮಂದಿ ಜೀವ ಕಳೆದುಕೊಂಡಿದ್ದರು.
* 2013ರ ಫೆಬ್ರವರಿ 21ರಂದು ಹೈದರಾಬಾದ್ ನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ 16 ಮಂದಿ ಬಲಿಯಾಗಿದ್ದರು.
* 2013ರ ಏಪ್ರಿಲ್ 17ರಂದು ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 16 ಮಂದಿ ಗಾಯಗೊಂಡಿದ್ದರು.
* 2014ರ ಡಿಸೆಂಬರ್ 28ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಬ್ಬರು ಬಲಿಯಾಗಿ, ಐವರು ಗಾಯಗೊಂಡಿದ್ದರು.
ಪಠಾಣ್ ಕೋಟ್, ಉರಿ ದಾಳಿ
* 2016ರ ಜನವರಿ 2ರಂದು ಪಂಜಾಬ್ನ ಪಠಾಣ್ಕೋಟ್ನಲ್ಲಿನ ವಾಯು ನೆಲೆಯ ಮೇಲೆ ದಾಳಿ ನಡೆಸಿದ್ದ ಉಗ್ರರು ಏಳು ಸೈನಿಕರನ್ನು ಕೊಂದು ಹಾಕಿದ್ದರು.
* 2016ರ ಜೂನ್ 25ರಂದು ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ನಲ್ಲಿ ಲಷ್ಕರ್ ಎ ತಯಬಾ ಉಗ್ರರು ಎಂಟು ಮಂದಿಯನ್ನು ಹತ್ಯೆ ಮಾಡಿದ್ದರು.
* 2016ರ ಸೆಪ್ಟೆಂಬರ್ 18ರಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ದಾಳಿ ನಡೆಸಿದ್ದ ಉಗ್ರರು 20 ಸೈನಿಕರನ್ನು ಕೊಂದು ಹಾಕಿದ್ದರು.
* 2016ರ ನವೆಂಬರ್ 26ರಂದು ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದ ಉಗ್ರರು ಹತ್ತು ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದರು.
* 2017ರ ಜುಲೈ 11ರಂದು ಅಮರನಾಥ ಯಾತ್ರೆಗೆ ತೆರಳಿದ್ದವರ ಮೇಲೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಾಳಿಗೆ ಏಳು ಮಂದಿ ಬಲಿಯಾಗಿದ್ದರು.
* 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಕೋರ ನಡೆಸಿದ ದಾಳಿಯಲ್ಲಿ ಸುಮಾರು 40 ಸೈನಿಕರು ಬಲಿಯಾಗಿದ್ದಾರೆ.