ನರೇಂದ್ರ ಮೋದಿ ಅವರ ಮಾತಿನ ಪೆಟ್ಟಿಗೆ ತತ್ತರಿಸಿದ ಪಾಕಿಸ್ತಾನ
ಪಣಜಿ, ಅಕ್ಟೋಬರ್ 16: ಗೋವಾದಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಮಾತಿನ ಪೆಟ್ಟಿಗೆ ಪಾಕಿಸ್ತಾನ ತತ್ತರಿಸಿದೆ. ಪಾಕಿಸ್ತಾನ ಭಯೋತ್ಪಾದನೆಯ ಮಾತೃ ನೌಕೆಯಾಗಿದ್ದು, ಬ್ರಿಕ್ಸ್ ರಾಷ್ಟ್ರಗಳು ಒಂದುಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಮೋದಿ ಕರೆ ನೀಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡುವ ಮೋದಿ ಅವರ ನಡೆ ಬಗ್ಗೆ ಪಾಕಿಸ್ತಾನದ ಪತ್ರಿಕೆಗಳು ಎಚ್ಚರಿಕೆ ಸಂದೇಶ ಸಾರಿವೆ.
ಮೋದಿ ಅವರು ನೀಡಿದ ಕರೆಗೆ ಬ್ರೆಜಿಲ್ ಸೇರಿದಂತೆ ಅನೇಕ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಪ್ರಿಕಾ ದೇಶಗಳ ನಾಯಕರೊಂದಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದರು. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ ಮೋದಿ ಅವರು ಉಗ್ರರ ನಿಗ್ರಹಕ್ಕೆ ಕೈಜೋಡಿಸುವಂತೆ ಕೇಳಿಕೊಂಡರು.
ಪಾಕಿಸ್ತಾನ ಕೇವಲ ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆಯಲ್ಲದೆ, ಉಗ್ರರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಉಗ್ರರನ್ನು ಉಗ್ರರು ಎಂದು ಘೋಷಿಸಿ ಕ್ರಮ ಜರುಗಿಸಲು ಕಷ್ಟವಾಗುತ್ತಿದೆ. ಆರ್ಥಿಕ, ಸಮಾಜಿಕ ಬೆಳವಣಿಗೆ ಮಾರಕವಾದ ಇಂಥ ಅಪಾಯಗಳನ್ನು ತಡೆಗಟ್ಟಲು ಬ್ರಿಕ್ಸ್ ರಾಷ್ಟ್ರಗಳು ಬೆಂಬಲ ನೀಡುವ ಭರವಸೆ ಇದೆ ಎಂದು ಹೇಳಿದರು.
ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿಸುವ ವಿಷಯದಲ್ಲಿ ಭಾರತ ಬದ್ಧವಾಗಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಪಾಕಿಸ್ತಾನವನ್ನು ದುರ್ಬಲಗೊಳಿಸು ನಿಟ್ಟಿನಲ್ಲಿ ಮೋದಿ ಅವರು ಇಡುತ್ತಿರುವ ಹೆಜ್ಜೆ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. (ಐಎಎನ್ಎಸ್)