ಬೆಚ್ಚಿ ಬೀಳಿಸಿತು ಎಸ್ ಎಸ್ ಎಲ್ ಸಿ ಭಯೋತ್ಪಾದಕನ ಅಸಲಿಯತ್ತು!
ನವದೆಹಲಿ, ಜನವರಿ 01: ಜಮ್ಮು ಕಾಶ್ಮೀರದ ಪುಲ್ವಾಮಾದ ಸಿಆರ್ ಪಿಎಫ್ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಆಘಾತಕಾರಿ ಸಂಗತಿಯೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಹೊರಹಾಕಿದ್ದಾರೆ.
ಪುಲ್ವಾಮದಲ್ಲಿ ಸಿಆರ್ಪಿಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ, 4 ಸೈನಿಕರು ಬಲಿ
ಐವರು ಭದ್ರತಾ ಸಿಬ್ಬಂದಿಗಳನ್ನು ಬಲಿತೆಗೆದುಕೊಂಡ ಈ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಹ ಮೃತನಾಗಿದ್ದರು. ಮೃತರಲ್ಲಿ ಒಬ್ಬ ಭಯೋತ್ಪಾದಕನ ಹಿನ್ನೆಲೆ ನೋಡಿದರೆ, ಈತ ಓದುತ್ತಿದ್ದುದು 10 ನೇ ತರಗತಿ ಎಂಬ ಆತಂಕಕಾರಿ ಸಂಗತಿ ತಿಳಿದುಬಂದಿದೆ. ಹತ್ತನೇ ತರಗತಿ ಎಂದರೆ ಕೇವಲ 16 ವರ್ಷದ ಯುವಕ ಹೀಗೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಲ್ಲದೆ, ಇಂಥ ಅಪಾಯಕಾರಿ ದಾಳಿಯಲ್ಲಿ ಪಾಲ್ಗೊಂಡಿರುವುದು ಪೊಲೀಸರನ್ನೂ ಬೆಚ್ಚಿಬೀಳಿಸಿದೆ.
ಅಷ್ಟೇ ಅಲ್ಲ, ಇದರೊಂದಿಗೆ ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಈ ಹುಡುಗನ ತಂದೆ ಜಮ್ಮು-ಕಾಶ್ಮೀರದ ಪೊಲೀಸ್ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು!
ತಂದೆ, ಶಾಂತಿ ಕಾಪಾಡುವ ಪವಿತ್ರ ಕೆಲಸ ಮಾಡುತ್ತಿದ್ದರೆ, ಮಗ ಇಂಥ ದೇಶದ್ರೋಹದ ಕೆಲಸಕ್ಕೆ ಕೈಹಾಕಿರುವುದು ತಂದೆ-ತಾಯಿಗಳೂ ತಲೆತಗ್ಗಿಸುವಂತೆ ಮಾಡಿದೆ.
ಡಿ.31 ರಂದು ಪುಲ್ವಾಮಾದ ಸಿಆರ್ ಪಿಎಫ್ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಸೇನೆಯ ಐವರು ಭದ್ರತಾ ಸಿಬ್ಬಂದಿಗಳು ಅಸುನೀಗಿದ್ದರು. ಮತ್ತು ಇಬ್ಬರು ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು. ದಾಳಿಯ ನಂತರ ಈ ಕೃತ್ಯದ ಹೊಣೆಯನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ ಹೊತ್ತುಕೊಂಡಿತ್ತು.