ರಾಜಕಾರಣಿಗಳ ಹೆಸರಿನ ದೇಗುಲ, ಪ್ರತಿಮೆಗಳು..ಇತ್ಯಾದಿ
ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್ ಎಲ್ಲರೂ ದೇವರುಗಳೇ. ದೇಗುಲ ನಿರ್ಮಾಣ ಮಾಡುವುದು ಅಭಿಮಾನದ ಪರಾಕಾಷ್ಠೆಯ ಪ್ರದರ್ಶನ ಬಿಟ್ಟರೆ ಮತ್ತೇನಲ್ಲ. ಕೆಲ ರಾಜಕಾರಣಿಗಳು ಪ್ರತಿಷ್ಠೆಗಾಗಿ ಪ್ರತಿಮೆ ಸ್ಥಾಪಿಸಿಕೊಳ್ಳುತ್ತಾರೆ.
ಪ್ರತಿಮೆ, ದೇಗುಲ ನಿರ್ಮಾಣ ಬೇಡ ಎಂದು ರಾಜಕಾರಣಿಗಳು ಹೇಳಿದರೂ, ಭಕ್ತರು ಕೇಳುವುದಿಲ್ಲ. ಭಕ್ತರು ನಿರ್ಮಿಸಿರುವ, ನಿರ್ಮಾಣ ಹಂತದಲ್ಲಿರುವ ದೇಗುಲ, ಪ್ರತಿಮೆಗಳ ಬಗ್ಗೆ ವರದಿ ಇಲ್ಲಿದೆ.
ಮೀರತ್ ನಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆ!
ಭಾರತದಲ್ಲಿ ಕಲ್ಲು, ಗಿಡ, ಮರ, ಪ್ರತಿಮೆ, ದೇಹದ ಅಂಗಾಂಗಗಳಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳ ನಂತರ ರಾಜಕಾರಣಿಗಳು ಈಗ ದೇವರಾಗಿ ದೇಗುಲದೊಳಗೆ ಬೆಚ್ಚಗೆ ನೆಲೆ ಕಾಣುತ್ತಿದ್ದಾರೆ.
ರಾಜಕಾರಣಿಗಳ ಪೈಕಿ ತಮಿಳರ ಪಾಲಿನ 'ಅಮ್ಮ' ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರಿಗಾಗಿ ನಿರ್ಮಿಸಿದ ದೇಗುಲ ಹೆಚ್ಚು ಸದ್ದು ಮಾಡಿತ್ತು. ಈಗ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ದೇಗುಲ, ಬೃಹತ್ ಪ್ರತಿಮೆ ನಿರ್ಮಾಣವಾಗುತ್ತಿದೆ. ಇದರಿಂದ ಯಾರಿಗೆ ಉಪಯೋಗವೋ ಬಲ್ಲವರೇ ಬಲ್ಲರು. ಅವರವರ ಭಕುತಿಗೆ ಭಾವಕ್ಕೆ ಅರ್ಪಿತ...
ಸೆಲೆಬ್ರಿಟಿಗಳ ದೇಗುಲಗಳು
ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳ ನಂತರ ರಾಜಕಾರಣಿಗಳ ತಾರಾ ಮೌಲ್ಯ ಹೆಚ್ಚಾಗುತ್ತಿದೆ.ಹಾಗೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇಗುಲ ನಿರ್ಮಾಣ ಹೊಸ ವಿಷಯವಲ್ಲ. ಆದರೆ, ಈಗ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಉದ್ದೇಶ ಪ್ರಶ್ನಾರ್ಹವಾಗಿದೆ. ಭಾರತದಲ್ಲಿ ಮನುಷ್ಯರನ್ನು ದೇವರಂತೆ ಪೂಜಿಸುವ ನೂರಾರು ಗುಡಿ, ದೇಗುಲಗಳನ್ನು ಕಾಣಬಹುದು. ಸೆಲೆಬ್ರಿಟಿಗಳ ದೇಗುಲಗಳು ಮಾತ್ರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ.
ಜಯಲಲಿತಾ ಹೆಸರಿನಲ್ಲಿ ದೇಗುಲ
ಎಂಜಿಆರ್ ಯೂಥ್ ವಿಂಗ್ ನ ಕಾರ್ಯದರ್ಶಿ ಶ್ರೀನಿವಾಸನ್ ಅವರು ಜಯಾ ಅಮ್ಮನ ಪರಮಭಕ್ತ. ತಮಿಳುನಾಡಿನ ವೆಲ್ಲೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಇಯೆಪ್ಪೆಡು ಗ್ರಾಮದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಭೂಮಿಯಲ್ಲಿ,50 ಲಕ್ಷ ರು ವೆಚ್ಚದಲ್ಲಿ ಈ ದೇಗುಲ ನಿರ್ಮಿಸಿದ್ದಾರೆ. 6 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ, ಪ್ರತಿಮೆಯ ಸುತ್ತಾ ಪ್ರಭಾವಳಿಯಂತೆ ಜಯಲಲಿತಾ ಅವರ ಸಾಧನೆಗಳ ಚಿತ್ರಣ ನೀಡಲಾಗಿದೆ.
ಮೋದಿ ಹೆಸರಿನಲ್ಲಿ ಮತ್ತೆ ದೇಗುಲ
ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ರಾಜ್ ಕೋಟ್ ನಲ್ಲಿ ದೇಣಿಗೆ ಸಂಗ್ರಹ ಮಾಡಿ ದೇಗುಲ ಕಟ್ಟಿದ್ದಾರೆ. ಗುಜರಾತ್ ಮೂಲದ ಮೋದಿ ಅವರ ಹೆಸರಿನಲ್ಲಿ ಗುಜರಾತಿನಲ್ಲಿ ದೇಗುಲವಿಲ್ಲ. ಈಗ ಉತ್ತರಪ್ರದೇಶದ ಮೀರತ್ ನಲ್ಲಿ ದೇಗುಲ, 100 ಅಡಿ ಎತ್ತರ ಪ್ರತಿಮೆ ನಿರ್ಮಾಣವಾಗುತ್ತಿದೆ.
ಸೋನಿಯಾ ಗಾಂಧಿ ಹೆಸರಿನಲ್ಲಿ ಪ್ರತಿಮೆ ಪಾರ್ಕ್
ತೆಲಂಗಾಣ ರಾಜ್ಯ ಉದಯಕ್ಕೆ ಕಾರಣರಾದರು ಎಂಬ ಅಭಿಮಾನದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. 'ತೆಲಂಗಾಣ ತಲ್ಲಿ' ಎಂಬ ಹೆಸರಿನಲ್ಲಿ ಶಂಕರ್ ರಾವ್ ಎಂಬ ಕಾಂಗ್ರೆಸ್ ಶಾಸಕ ಪ್ರತಿಮೆ ನಿರ್ಮಿಸಿ ಪಾರ್ಕೊಂದರಲ್ಲಿ ನಿಲ್ಲಿಸಿದ್ದರು. ನಂತರ ಇದನ್ನು ದೇಗುಲದಲ್ಲಿ ಇರಿಸಲಾಗುವುದು ಎಂದು ಹೇಳಿದ್ದರು.
ತಮಿಳುನಾಡು ಮಾಜಿ ಸಿಎಂ ಎಂಜಿಆರ್
ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಮರತ್ತೂರು ಗೋಪಾಲನ್ ರಾಮಚಂದ್ರನ್(ಎಂಜಿಆರ್) ಹೆಸರಿನಲ್ಲಿ ಚೆನ್ನೈನಿಂದ 40ಕಿ.ಮೀ ದೂರದಲ್ಲಿರುವ ತಿರುವಣಿರವೂರ್ ದೇಗುಲ ಸ್ಥಾಪಿಸಲಾಗಿದೆ. ಪುರಚ್ಚಿ ತಲೈವರ್ ಎಂಜಿಆರ್ ಹೆಸರಿನಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗಿದೆ.
ಮಾಯಾವತಿ ಪ್ರತಿಮೆಗಳ ಸೌಧ
ಉತ್ತರ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಮಾಯಾವತಿ ಅವರ ಆಳೆತ್ತರದ ಪ್ರತಿಮೆಗಳು ಕಾಣಿಸುತ್ತಿದ್ದ ಕಾಲವೊಂದಿತ್ತು. ನಂತರ ಸಾರ್ವಜನಿಕ ಸ್ಥಳಗಳಿಂದ ಪ್ರತಿಮೆಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶಿಸಿತು. ಬುಂದೇಲ್ ಖಂಡ್ ಮಹೊಬಾ ಜಿಲ್ಲೆ ನಾತ್ಪುರದಲ್ಲಿ ಸದ್ಯಕ್ಕೆ ಮಾಯಾವತಿ ಅವರ ಹೆಸರಿನ ದೇಗುಲ ನೋಡಬಹುದು. ಈ ಎಲ್ಲಾ ಪ್ರತಿಮೆಗಳು ಆಭಿಮಾನಿಗಳು ನಿರ್ಮಿಸಿದ್ದಕ್ಕಿಂತ ಮಾಯಾವತಿ ಅವರು ಸಾರ್ವಭೌಮತೆಯ ಸಂಕೇತವಾಗಿ ನಿರ್ಮಾಣಗೊಂಡಿತ್ತು.
ನಟಿ, ರಾಜಕಾರಣಿ ಖುಷ್ಬೂ ಹೆಸರಿನಲ್ಲಿ ದೇಗುಲ
ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 2005ರಲ್ಲಿ ನಟಿ, ರಾಜಕಾರಣಿ ಖುಷ್ಬೂ ಹೆಸರಿನಲ್ಲಿ ದೇಗುಲ ನಿರ್ಮಿಸಲಾಗಿದೆ. ನಂತರ ದೇವರ ಮುಂದೆ ಪಾದರಕ್ಷೆ ಹಾಕಿ ಕುಳಿತು, ಸಮರ್ಥಿಸಿಕೊಂಡ ಕಾರಣಕ್ಕೆ ಗುಡಿಯನ್ನು ನೆಲಸಮಗೊಳಿಸಲಾಯಿತು.