ಅಯೋಧ್ಯೆಯಲ್ಲಿ ರಾಮಮಂದಿರ, ಲಕ್ನೋದಲ್ಲಿ ಮಸೀದಿ; ವಕ್ಫ್ ನಿಂದ ಹೊಸ ಆಫರ್
ಲಕ್ನೋ, ನವೆಂಬರ್ 20: ವಿವಾದಿತ ಅಯೋಧ್ಯೆ ಜಾಗದಲ್ಲಿ ರಾಮ ಮಂದಿರ ನಿರ್ಮಿಸುವುದು. ನಂತರ ಲಕ್ನೋದಲ್ಲಿ ಮಸೀದಿಯನ್ನು ನಿರ್ಮಿಸುವ ಹೊಸ ಪ್ರಸ್ತಾಪವನ್ನು ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಮುಂದಿಟ್ಟಿದೆ.
ವಿವಾದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಜತೆ ಮಾತುಕತೆ ನಡೆಸಿದ ನಂತರ ಈ ಪ್ರಸ್ತಾಪ ಮುಂದಿಟ್ಟಿರುವುದಾಗಿ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್ ವಸೀಮ್ ರಿಜ್ವಿ ಹೇಳಿದ್ದಾರೆ.
ರಾಮ ಮಂದಿರವನ್ನು ಹೆಚ್ಚಿನ ಮುಸ್ಲಿಮರು ವಿರೋಧಿಸುತ್ತಿಲ್ಲ : ರವಿಶಂಕರ್
"ಎಲ್ಲರ ಜತೆಯೂ ಸಮಾಲೋಚನೆ ನಡೆಸಿದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಹಾಗೂ ಲಕ್ನೋದಲ್ಲಿ ಮಸೀದಿ ನಿರ್ಮಿಸುವ ಪ್ರಸ್ತಾಪವನ್ನು ನಾವು ರೂಪಿಸಿದ್ದೇವೆ," ಎಂದು ರಿಜ್ವಿ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಪರಿಹಾರ ದೇಶದಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ತರಲಿದೆ ಎಂದು ರಿಜ್ವಿ ಪ್ರತಿಪಾದಿಸಿದ್ದಾರೆ. ಕೆಲವು ಮಹಾಂತರ ಜತೆಗೂಡಿ ರಿಜ್ವಿ ಡಿಸೆಂಬರ್ ರ ಮೊದಲು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರಗಳ ಜತೆ ಸುಪ್ರಿಂ ಕೋರ್ಟ್ ಮೊರೆ ಹೋಗಲಿದ್ದಾರೆ.
ಇತ್ತೀಚೆಗೆ ಅವರು ಮಹಾಂತಾ ಧರಂದಾಸ್ ಮತ್ತು ಮಹಾಂತಾ ಸುರೇಶ್ ದಾಸ್ ರನ್ನು ಭೇಟಿಯಾಗಿದ್ದು ದೀರ್ಘ ಕಾಲದಿಂದಿರುವ ವಿವಾದಕ್ಕೆ ಕೊನೆ ಹಾಡಲು ಯತ್ನಿಸುತ್ತಿದ್ದಾರೆ.
ಇದಕ್ಕೂ ಮೊದಲು ಶಿಯಾ ವಕ್ಫ್ ಮಂಡಳಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಮತ್ತು ಹತ್ತಿರದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮಸೀದಿ ನಿರ್ಮಿಸುವ ಪ್ರಸ್ತಾಪವನ್ನು ಸುಪ್ರಿಂ ಕೋರ್ಟ್ ಮುಂದಿಟ್ಟಿತ್ತು.
ಸುಪ್ರಿಂ ಕೋರ್ಟ್ ಈ ವಿವಾದಕ್ಕೆ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಂತೆಯೂ ಸೂಚಿಸಿತ್ತು. ಇದಕ್ಕೂ ಮೊದಲು ಹಲವು ಸುತ್ತಿನ ಮಾತುಕತೆಗಳು, ಸಂಧಾನ ಯತ್ನಗಳು ನಡೆದಿದ್ದವಾದರೂ ಯಾವುದೂ ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ.