ಬಿಜೆಪಿಗೆ ಸೇರ್ಪಡೆಗೊಂಡ ಲೇಡಿ ಸೂಪರ್ ಸ್ಟಾರ್ -ರಾಜಕಾರಣಿ ವಿಜಯಶಾಂತಿ
ನವದೆಹಲಿ, ಡಿ. 7: ಲೇಡಿ ಸೂಪರ್ ಸ್ಟಾರ್ ಕಮ್ ರಾಜಕಾರಣಿ, ತೆಲಂಗಾಣದ ಮಾಜಿ ಸಂಸದೆ ವಿಜಯಶಾಂತಿ ಅವರು ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ತೊರೆದ ವಿಜಯಶಾಂತಿ ಬಿಜೆಪಿ ಸೇರಲು ಮುಹೂರ್ತ ಫಿಕ್ಸ್
ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಕಳೆದ ರಾತ್ರಿ ಭೇಟಿ ಮಾತುಕತೆ ನಡೆಸಿದ್ದ ವಿಜಯಶಾಂತಿ ಅವರು ಇಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿಕೊಂಡರು.
ಇತ್ತೀಚೆಗೆ ನಡೆದ ದುಬ್ಬಾಕ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿ ಅಚ್ಚರಿಯ ಗೆಲುವು ದಾಖಲಿಸಿತ್ತು. ನಂತರ ಭಾರಿ ಕುತೂಹಲ ಕೆರಳಿಸಿದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಫಲಿತಾಂಶ ನೀಡಿ ಎರಡನೇ ಸ್ಥಾನಕ್ಕೇರಿದೆ.
''ವಿಜಯಶಾಂತಿ ಅವರ ಸೇರ್ಪಡೆಯಿಂದ ತೆಲಂಗಾಣ ಬಿಜೆಪಿ ಇನ್ನಷ್ಟು ಬಲಗೊಂಡಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಲಿದೆ'' ಎಂದು ಬಿಜೆಪಿ ಮುಖಂಡ ಜಿ ವಿವೇಕ್ ವೆಂಕಟಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
2014ರಲ್ಲಿ ಸ್ಟಾರ್ ಪ್ರಚಾರಕಿ ಎನಿಸಿಕೊಂಡಿದ್ದ ವಿಜಯಶಾಂತಿ
2014ರಲ್ಲಿ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ವಿಜಯಶಾಂತಿ ಅವರು ಇದಕ್ಕೂ ಮುನ್ನ ಟಿಆರ್ಎಸ್ ನ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರ ಬೆಂಬಲವಾಗಿ ನಿಂತಿದ್ದರು. 2018ರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯ್ ಶಾಂತಿ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ನೇಮಕ ಮಾಡಿದರು ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾವಣಾ ಪ್ರಚಾರದ ಸಲಹಾಗಾರ್ತಿಯಾಗಿದ್ದರು. ಈ ಬಾರಿ ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗುತ್ತಾರೆ ಎಂದು ವರದಿ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಪರ ಜೈಕಾರ ಹಾಕಿದ್ದರು.
ಕೆಸಿಆರ್ ಪರ ಜೈಕಾರ ಹಾಕಿದ್ದ ವಿಜಯಶಾಂತಿ
1997-98ರಲ್ಲಿ ಬಿಜೆಪಿ ಪರ ಇದ್ದ ಲೇಡಿ ಅಮಿತಾಬ್ ವಿಜಯಶಾಂತಿ ಅವರು ಆಂಧ್ರಪ್ರದೇಶ ವಿಭಜನೆಯಾದ ಬಳಿಕ ತೆಲಂಗಾಣ ರಾಜ್ಯ ಉದಯವಾಗಿದ್ದನ್ನು ಸ್ವಾಗತಿಸಿ ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಕೆಸಿಆರ್ ಪರ ಬೆಂಬಲ ವ್ಯಕ್ತಪಡಿಸಿದ್ದರು. ತಲ್ಲಿ ತೆಲಂಗಾಣ ಎಂಬ ಪುಟ್ಟ ರಾಜಕೀಯ ಪಕ್ಷ ಕಟ್ಟಿಕೊಂಡಿದ್ದ ವಿಜಯಶಾಂತಿ ಅವರು ನಂತರ ತಮ್ಮ ಪಕ್ಷವನ್ನು ಟಿಆರ್ ಎಸ್ ಜೊತೆ ವಿಲೀನಗೊಳಿಸಿದ್ದರು.
2009 ರಿಂದ 2014ರ ತನಕ ಮೇದಕ್ ಸಂಸದೆಯಾಗಿದ್ದರು. ಆದರೆ, ಮೇದಕ್ ನಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋಲು ಕಂಡಿದ್ದರು. ನಂತರ ಟಿಆರ್ ಎಸ್ ತೊರೆದು ಕಾಂರ್ಗೆಸ್ ಸೇರಿದ್ದರು.ಮೋದಿ ಭಯೋತ್ಪಾದಕ ಎಂದಿದ್ದ ವಿಜಯಶಾಂತಿ
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ವಿಜಯಶಾಂತಿ ಬಂದಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಹಾಗೂ ಕೆಸಿಆರ್ ಇಬ್ಬರನ್ನು ನಿಂದಿಸಿ ಭಯೋತ್ಪಾದಕರು ಎಂದಿದ್ದರು.
ಅದಾನಿ, ಅಂಬಾನಿ ಅವರಂತಹ ಬಂಡವಾಳಶಾಹಿಗಳ ಬೆನ್ನಿಗೆ ಮೋದಿ ನಿಂತಿದ್ದಾರೆ. ಅಚ್ಛೇದಿನ್ ಹೆಸರಿನಲ್ಲಿ ರೈತರು, ಕಾರ್ಮಿಕರನ್ನು ಮತ್ತು ಬಡವರನ್ನು ವಂಚಿಸುತ್ತಿದ್ದಾರೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಂತಹವರು ಲೂಟಿ ಮಾಡುತ್ತಿದ್ದರೂ ಸುಮ್ಮನಿದ್ದಾರೆ. ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಒಂದೇ ನಾಣ್ಯದ ಎರಡು ಮುಖಗಳು. ಮೋದಿ ದೊಡ್ಡ ಕಳ್ಳ, ಕೆಸಿಆರ್ ಚಿಕ್ಕ ಕಳ್ಳ. ಆತ ಮಾಯದ ಮಾತುಗಳನ್ನಾಡುವ ಜನರನ್ನು ಮೋಸಗೊಳಿಸುತ್ತಾನೆ ಎಂದು ಏಕ ವಚನದಲ್ಲಿ ಸಂಬೋಧಿಸಿ ಭಾಷಣ ಮಾಡಿದ್ದರು.
ತಮಿಳುನಾಡು, ಆಂಧ್ರ, ತೆಲಂಗಾಣ ಎಲ್ಲ ಬಿಜೆಪಿಗೂ ಲಾಭ
ನಟಿ ಕಮ್ ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜನ ಸೇನಾ ಪಕ್ಷದ ಪವನ್ ಕಲ್ಯಾಣ್ ಅವರು ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ನೆರವಾಗಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ವಿಜಯಶಾಂತಿ ಸೇರ್ಪಡೆಯಿಂದ ಬಿಜೆಪಿ ತಾರಾಬಲ ಹೆಚ್ಚಾಗಲಿದೆ. ಆಂಧ್ರ, ತೆಲಂಗಾಣ ಅಲ್ಲದೆ ಅಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲೂ ಆಕೆ ಜನಪ್ರಿಯತೆ ಉಳಿಸಿಕೊಂಡಿದ್ದು, ಎಲ್ಲಾ ರಾಜ್ಯಗಳಲ್ಲೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಹುದಾಗಿದೆ.