ತೆಲಂಗಾಣದ ಬರ್ಬರ ಹತ್ಯೆ, ಮೊದಲೇ ಎಚ್ಚರಿಕೆ ನೀಡಿದ್ದ ಪೊಲೀಸರು!
ಮಿರ್ಯಾಲಗುಡ(ತೆಲಂಗಾಣ), ಸೆಪ್ಟೆಂಬರ್ 17: ಬರ್ಬರವಾಗಿ ಹತ್ಯೆಯಾದ ತೆಲಂಗಾಣದ ದಲಿತ ಕ್ರೈಸ್ತ ಪ್ರಣಯ್ ಅವರ ಪ್ರಾಣಕ್ಕೆ ಅಪಾಯವಿದೆ ಎಂಬುದು ಇಲ್ಲಿನ ಪೊಲೀಸರಿಗೆ ಮೊದಲೇ ಗೊತ್ತಿತ್ತು ಎಂಬ ಆಘಾತಕಾರಿ ಅಂಶವೊಂದು ಬಯಲಿಗೆ ಬಂದಿದೆ.
ಜಾತಿ, ಮತದ ಸೀಮೆ ಮೀರಿ ಹೊಸ ಬಾಳಿನ ಕನಸು ಕಾಣುತ್ತಿದ್ದ ಅಮೃತಾ ಮತ್ತು ಪ್ರಣಯ್ ಎಂಬ ಸುಂದರ ಜೋಡಿಯ ಎಲ್ಲ ಕನಸೂ ನುಚ್ಚುನೂರಾಗಿದೆ. ತೆಲಂಗಾಣದ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಯ ಬಳಿ ಬರ್ಬರವಾಗಿ ಹತ್ಯೆಯಾದ ಪ್ರಣಯ್ ನನ್ನು ಆಕೆಯ ಪತ್ನಿಯ ತಂದೆಯೇ ಕೊಂದಿದ್ದು ಎಂಬ ಅನುಮಾನ ದಟ್ಟವಾಗಿದೆ.
ನನ್ನ ಗಂಡನನ್ನು ಅಪ್ಪ ಮಾತ್ರ ಕೊಲ್ಲಿಸಲು ಸಾಧ್ಯ: ಗರ್ಭಿಣಿ ಅಮೃತಾ ಮಾತು
ತನ್ನ ತಂದೆಯಲ್ಲದೆ ಇನ್ಯಾರೂ ಪ್ರಣಯ್ ನನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂದು ಗರ್ಭಿಣಿ ಅಮೃತ ಕಣ್ಣೀರು ಹತ್ತಿಕ್ಕುತ್ತ ರೋಷದ ಧ್ವನಿಯಲ್ಲಿ ಹೇಳುತ್ತಿದ್ದಾರೆ. ಆದರೆ ಪ್ರಣಯ್ ಪ್ರಾಣಕ್ಕೆ ಅಪಾಯವಿದೆ ಎಂಬ ಬಗ್ಗೆ ಪೊಲೀಸರಿಗೆ ಮೊದಲೇ ಸುಳಿವಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ತೆಲಂಗಾಣ ಪೊಲೀಸರೇ ಬಯಲಿಗೆಳೆದಿದ್ದು ಮತ್ತಷ್ಟು ಆತಂಕ ಸೃಷ್ಟಿಸಿದೆ.
'ಇಚಾ' ಲವ್ಸ್ 'ಪೊಣ್ಣಿ': ಇದು ಕೇರಳದ ರಕ್ತಸಿಕ್ತ ಪ್ರೇಮ ಅಧ್ಯಾಯ
ಅಷ್ಟೇ ಅಲ್ಲ, ತನ್ನ ಪತಿಯ ಕೊಲೆಯಲ್ಲಿ ಕೇವಲ ತನ್ನ ತಂದೆ ತಾಯಿ ಮಾತ್ರವಲ್ಲದೆ, ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಶಾಸಕರೊಬ್ಬರ ಕೈವಾಡವೂ ಇದೆ ಎಂದು ಅಮೃತಾ ಆರೋಪಿಸುವುದು ಈ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಪೊಲೀಸರಿಗಿತ್ತು ಅನುಮಾನ
ಕಳೆದ ಜನವರಿಯಲ್ಲಿ ಮನೆಯವರ ವಿರೋಧದ ನಡುವೆಯೂ ದಲಿತ ಕ್ರೈಸ್ತ ಪ್ರಣಯ್ ಎಂಬುವವರನ್ನು ಹಿಂದು ವೈಶ್ಯ ಸಮುದಾಯಕ್ಕೆ ಸೇರಿದ ಅಮೃತಾ ಮದುವೆಯಾಗಿದ್ದರು. ಆದರೆ ದಿನ ಕಳೆಯುತ್ತ ಪ್ರಣಯ್ ಅವರ ಕುಟುಂಬಸ್ಥರು ಈ ನವದಂಪತಿಯನ್ನು ಒಪ್ಪಿಕೊಂಡು ಆಗಸ್ಟ್ 17 ರಂದು ಅವರಿಬ್ಬರಿಗಾಗಿ ಅದ್ಧೂರಿ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ಆದರೆ ಈ ಇಬ್ಬರೂ ಮದುವೆಯಾದಾಗಿನಿಂದಲೂ ಪ್ರಣಯ್ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರಿಗೆ ಅನುಮಾನವಿತ್ತು. ತಮ್ಮ ಆರತಕ್ಷತೆಗೆ ಪೊಲೀಸರನ್ನು ಆಮಂತ್ರಿಸಲು ಪ್ರಣಯ್ ಮತ್ತು ಅಮೃತಾ ತೆರಳಿದಾಗಲೂ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. 'ನಿಮ್ಮ ಪ್ರಾಣಕ್ಕೆ ಅಪಾಯವಿದೆ' ಎಂಬ ಸುಳಿವೂ ನೀಡಿದ್ದರು. ಆದರೆ ಇದನ್ನು ಅಷ್ಟು ಗಂಭೀರವಾಗಿ ಸ್ವೀಕರಿಸದ ದಂಪತಿ, ದೂರನ್ನೂ ನೀಡದೆ ಪೊಲೀಸರ ಮಾತಿಗೆ ನಕ್ಕು ಸುಮ್ಮನಾಗಿದ್ದರು.
ಅಮೃತಾ ತಂದೆಯ ವಿಚಾರಣೆ ನಡೆಸಿದ್ದ ಪೊಲೀಸರು
ಅಮೃತಾ ಮತ್ತು ಪ್ರಣಯ್ ಜೀವಕ್ಕೆ ಅಪಾಯವಿದೆ ಎಂಬ ಅನುಮಾನವಿದ್ದಿದ್ದರಿಂದ ಯಾವುದೇ ದೂರು ಇಲ್ಲದಿದ್ದರೂ ಪೊಲೀಸರೇ ಅಮೃತಾ ಅವರ ತಂದೆ ಮಾರುತಿ ರಾವ್ ಅವರನ್ನು ಠಾಣೆಗೆ ಕರೆಸಿದ್ದರು. ಆದರೆ ಆ ಸಮಯದಲ್ಲಿ ಅತ್ತು, ಕಣ್ಣೀರುಗರೆದಿದ್ದ ಮಾರುತಿ ರಾವ್, ನನಗೆ ನನ್ನ ಮಗಳನ್ನಾಗಲೀ, ಪ್ರಣಯ್ ನನ್ನಾಗಲೀ ಕೊಲ್ಲುವ ಯಾವ ಉದ್ದೇಶವೂ ಇಲ್ಲ. ಆದರೆ ಆ ರೀತಿ ಮಾತುಗಳು ಕೇಳಿಬರುತ್ತಿರುವುದರಿಂದ ನನಗೆ ಘಾಸಿಯಾಗುತ್ತಿದೆ ಎಂದಿದ್ದರು. ಅಮೃತಾ-ಪ್ರಣಯ್ ಮದುವೆಯಾದ ನಂತರ ಕೆಲ ದಿನ ಮಾರುತಿ ರಾವ್ ಮೌನವಾಗಿಯೇ ಇದ್ದರು.
ನಮ್ಮನ್ನು ಕೊಲ್ಲಬೇಡಿ, ಬದುಕಲು ಬಿಡಿ: ಪ್ರೇಮಿಗಳ ದಯನೀಯ ಮೊರೆ
ಆಗಾಗ ಬೆದರಿಕೆ ಕರೆ ಬರುತ್ತಿತ್ತು
'ಮಾರುತಿ ರಾವ್ ಅವರ ಕಡೆಯಿಂದ ಆಗಾಗ ತಮ್ಮ ಮಗ ಪ್ರಣಯ್ ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ನಾವು ಅವನ್ನೆಲ್ಲ ಹೆಚ್ಚು ಗಂಭೀರವಾಗಿ ಪರಿಗಣಿಸದ ಕಾರಣ ಯಾವ ಕರೆಯನ್ನೂ ರೆಕಾರ್ಡ್ ಮಾಡುವುದಕ್ಕೆ ಹೋಗಲಿಲ್ಲ ಎಂದು ಬಿಕ್ಕುತ್ತಾರೆ ಪ್ರಣಯ್ ಪಾಲಕರು. ಅನುಮಾನವಿದ್ದಿದ್ದರಿಂದ ಮನೆಯ ಸುತ್ತ ಮುತ್ತ ಮೂರು ಕಡೆಗಳಲ್ಲಿ ಸಿಸಿಟಿ ಕ್ಯಾಮರಾ ಅಳವಡಿಸಲಾಗಿತ್ತು. ಈಗಾಗೇ ಅವುಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿತ್ತು, ಏನಾದರೂ ಸುಳಿವು ಸಿಗುತ್ತದೆಯೇ ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
'ಅಮೃತಾ ನಮ್ಮ ಮಗಳಿದ್ದ ಹಾಗೆ. ಆಕೆ ನಮ್ಮೊಂದಿಗೇ ಇರುತ್ತಾಳೆ' ಎಂದು ಪ್ರಣಯ್ ಅವರ ಪಾಲಕರು ಭರವಸೆ ನೀಡಿದ್ದು, ಅಮೃತಾ ಅವರನ್ನು ತಮ್ಮ ಮನೆಯಲ್ಲೇ ಇರಲು ಒತ್ತಾಯಿಸಿದ್ದಾರೆ. ಮಗನ ಸಾವಿನ ನೋವನ್ನು ಸೊಸೆ ಮತ್ತು ಆಕೆಯ ಗರ್ಭದಲ್ಲಿರುವ ಚಿಗುರೊಡೆಯುತ್ತಿರುವ ಮೊಮ್ಮಗುವಿನ ಮೂಲಕ ಮರೆಯುವ ಪ್ರಯತ್ನ ಪ್ರಣಯ್ ತಂದೆ- ತಾಯಿಯರದು.
ಶಾಸಕರ ಕೈವಾಡ?
ತನ್ನ ತಂದೆ ತಾಯಿ ಮಾತ್ರವಲ್ಲದೆ, ಪ್ರಣಯ್ ನನ್ನು ಹತ್ಯೆಗೈಯ್ಯುವಲ್ಲಿ ಟಿಆರ್ ಎಸ್ ನ ನಕ್ರೆಕಲ್ ಶಾಸಕ ವೆಮುಲಾ ವೀರೇಶಮ್ ಎಂಬುವವರ ಕೈವಾಡವೂ ಇದೆ ಎಂದು ಅಮೃತಾ ದೂರಿದ್ದಾರೆ. ನನ್ನ ಮಾವ(ಪ್ರಣಯ್ ತಂದೆ) ಅವರ ಮೇಲೆ ಈ ಶಾಸಕರೇ ಅನವಶ್ಯಕವಾಗಿ ಕೇಸು ದಾಖಲಿಸಿದ್ದರು. ಅವರಿಗೆ ಹಿಂಸೆ ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ನಮ್ಮಿಬ್ಬರನ್ನೂ ಅವರ ಮನೆಗೆ ಬರುವಂತೆ ಶಾಸಕರು ಆಮಂತ್ರಿಸಿದ್ದರು. ಆದರೆ ಅವರ ಮೇಲೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದರಿಂದ ನಮಗೆ ಅಲ್ಲಿಗೆ ತೆರಳಲು ಧೈರ್ಯವಾಗದೆ ಸುಮ್ಮನಿದ್ದೆವು. ನನ್ನ ತಮದೆಗೆ ಸಾಕಷ್ಟು ಸ್ಥಳೀಯ ರಾಜಕಾರಣಿಗಳ ಸಂಪರ್ಕವಿತ್ತು. ನನ್ನ ಚಿಕ್ಕಪ್ಪ ಭರತ್ ಕುಮಾರ್ ಮತ್ತು ತಂದೆಯ ಸ್ನೇಹಿತ ಗುದುರ್ ಸೀನು ಅವರೆಲ್ಲರ ಕೈವಾಡವೂ ಈ ಪ್ರಕರಣದಲ್ಲಿದೆ. ಅವರೆಲ್ಲರಿಗೂ ಅತ್ಯುಗ್ರ ಶಿಕ್ಷೆಯಾಗಬೇಕು ಎಂದು ಅಮೃತಾ ಆಗ್ರಹಿಸಿದ್ದಾರೆ.
ಏನಿದು ಘಟನೆ?
ಇಪ್ಪತ್ತೊಂದು ವರ್ಷ ವಯಸ್ಸಿನ ಅಮೃತಾ ಮತ್ತು24 ವರ್ಷ ವಯಸ್ಸಿನ ಪ್ರಣಯ್ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಮತ್ತು ಮತ ಬೇರೆ ಎಂಬ ಕಾರಣಕ್ಕೆ ಇಬ್ಬರ ಕುಟುಂಬಸ್ಥರಿಗೂ ಈ ಮದುವೆ ಇಷ್ಟವಿರಲಿಲ್ಲ. ಆದರೆ ಮನೆಯವರ ವಿರೋಧದ ನಡುವೆಯೂ ಜನವರಿಯಲ್ಲಿ ಮದುವೆಯಾಗಿದ್ದ ಈ ದಂಪತಿಯನ್ನು ಪ್ರಣಯ್ ಮನೆಯವರು ಸ್ವೀಕರಿಸಿದ್ದರು. ಮೂರು ತಿಂಗಳ ಗರ್ಭಿಣಿಯಾಗಿದ್ದ ಅಮೃತಾ, ಕಳೆದ ಶುಕ್ರವಾರ ಅಂದರೆ ಸೆ.14 ರಂದು ತೆಲಂಗಾಣದ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆಂ ತೆರಳಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಪ್ರಣಯ್ ನನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದರು.